i
ಕೇಂದ್ರ ಸರ್ಕಾರ ಸ್ಥಳೀಯ ದಿನ ಪತ್ರಿಕೆಗಳ ಬೇಡಿಕೆ ಈಡೇರಿಸಲಿ…
ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಜಿಲ್ಲಾ ಮಟ್ಟದ ಸ್ಥಳೀಯ ದಿನ ಪತ್ರಿಕೆಗಳ ಬೇಡಿಕೆಗಳ ಜಾರಿಗೆ ತರುವಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅವರಲ್ಲಿ ಮಂಡ್ಯದ ಹಳೇ ಮೈಸೂರು ದಿನಪತ್ರಿಕೆ ಸಂಪಾದಕ ಎಂ.ಬಿ.ನಾಗಣ್ಣಗೌಡ ಅವರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.ರಾಜ್ಯದ ಸಂಸದರು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಮತ್ತು ಸಚಿವರನ್ನು ಭೇಟಿ ಮಾಡಿ ಕೇಂದ್ರದ ನೀತಿ ನಿಯಮಗಳ ರೂಪಿಸುವಿಕೆಯಲ್ಲಿ ಸ್ಥಳೀಯ ಪತ್ರಿಕೆಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತ ಒಕ್ಕೂಟವನ್ನು ಸಮರ್ಥವಾಗಿ ರೂಪಿಸುವಲ್ಲಿ ಜಿಲ್ಲಾ ಮಟ್ಟದ ಪತ್ರಿಕೆಗಳು ತಮ್ಮದೆ ಆದ ಕೊಡುಗೆಯನ್ನು ನೀಡುತ್ತಾ ಬಂದಿವೆ. ಹೀಗೆ ಭಾರತ ಒಕ್ಕೂಟದ ಸಾಮಾನ್ಯ ಪ್ರಜೆಗಳ ಸಶಕ್ತ ದನಿಯಾಗಿರುವ ಸ್ಥಳೀಯ ಪತ್ರಿಕೆಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಒಕ್ಕೂಟ ಸರ್ಕಾರವು ಸ್ಥಳೀಯ ಜಿಲ್ಲಾ ಮಟ್ಟದ ಪತ್ರಿಕೆಗಳ ಅಹವಾಲುಗಳನ್ನು ಆಲಿಸಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿದ್ದಾರೆ.1. ಸ್ಥಳೀಯ ಜಿಲ್ಲಾ ಮಟ್ಟದ ಪತ್ರಿಕೆಗಳು ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಮಾತ್ರವಲ್ಲದೆ ಕೇಂದ್ರ ಒಕ್ಕೂಟ ಸರಕಾರದ ಕಾರ್ಯಕ್ರಮಗಳಿಗೂ ಸಾಕಷ್ಟು ಪ್ರಚಾರ ನೀಡುತ್ತಾ ಬಂದಿದ್ದರೂ ಒಕ್ಕೂಟ ಸರ್ಕಾರದಿಂದ ಯಾವೊಂದು ಜಾಹೀರಾತು ಸ್ಥಳೀಯ ಪತ್ರಿಕೆಗಳಿಗೆ ದೊರಕುತ್ತಿಲ್ಲ. ಆದ್ದರಿಂದ ರಾಜ್ಯದಲ್ಲಿ ಅನುಷ್ಟಾನಗೊಳ್ಳುವ ಕೇಂದ್ರದ ಯೋಜನೆಗಳ ಜಾಹೀರಾತನ್ನು ಸ್ಥಳೀಯ ಪತ್ರಿಕೆಗಳಿಗೆ ಕಡ್ಡಾಯವಾಗಿ ನೀಡುವಂತೆ ನಿಯಮ ರೂಪಿಸಬೇಕು.2. ಕೋವಿಡ್ ಸಂಧರ್ಭದಲ್ಲಿ ಹಿಂಪಡೆದಿರುವ ಪತ್ರಕರ್ತರಿಗೆ ಕೊಡಮಾಡಿದ ರೈಲ್ವೆ ಪಾಸುಗಳನ್ನು ಚಾಲ್ತಿಗೆ ತರಬೇಕು. ಕರ್ನಾಟಕ ರಾಜ್ಯ ಸರ್ಕಾರ ಮಾನ್ಯತೆ ಪಡೆದಿರುವ ಪತ್ರಕರ್ತರಿಗೆ ರಾಜ್ಯ ಸಾರಿಗೆ ಬಸ್ ಗಳಲ್ಲಿ ನೀಡಿರುವಂತೆ ಒಕ್ಕೂಟ ಸರ್ಕಾರವು ಶೇ೫೦ರ ರೈಲ್ವೆ ರಿಯಾಯಿತಿ ಪಾಸ್ ಬದಲು ದೇಶಾದ್ಯಂತ ಪತ್ರಕರ್ತರು ಪ್ರಯಾಣಿಸುವಂತೆ ಶೇ.೧೦೦ ರಿಯಾಯಿತಿ ರೈಲ್ವೇ ಪಾಸ್ ಘೋಷಿಸಬೇಕು.3. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಪತ್ರಿಕೆಗಳನ್ನು ಆರಂಭಿಸದಂತೆ ಜನರನ್ನು ಜಾಗೃತಗೊಳಿಸದಂತೆ ತಡೆಯುವ ಸಲುವಾಗಿ ಪತ್ರಿಕೆಗಳ ಆರಂಭಕ್ಕೆ ಪೊಲೀಸ್ ವರಿಷ್ಟರ ಅನುಮತಿ ಕಡ್ಡಾಯಗೊಳಿಸಲಾಗಿತ್ತು. ಸ್ವಾತಂತ್ರ್ಯದ ನಂತರದ ದಿನಗಳಲ್ಲೂ ಈ ಕಾಯ್ದೆ ಮುಂದುವರಿದಿರುವುದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಣಕಿಸುವಂತಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಗಳ ಆರಂಭಕ್ಕೆ ಪೊಲೀಸ್ ಅನುಮತಿ ಕಡ್ಡಾಯಗೊಳಿಸುವಿಕೆಯನ್ನು ಹಿಂಪಡೆಯಬೇಕು.4. ಆರ್ ಎನ್ ಐ ಕಚೇರಿಯು ದೆಹಲಿಯಲ್ಲಿದ್ದು ಯಾವುದೆ ಪತ್ರಿಕಾ ಸಂಬಂದಿ ಕೆಲಸಗಳಿಗೆ ಜಿಲ್ಲಾಮಟ್ಟದ ಪತ್ರಿಕೆಗಳ ಸಂಪಾದಕರು ದೆಹಲಿವರೆಗೆ ವ್ಯವಹರಿಸುವುದು ತ್ರಾಸದಾಯಕ ಮಾತ್ರವಲ್ಲದೆ ದುಬಾರಿಯೂ ಆಗಿದೆ. ಆಡಳಿತದ ವಿಕೇಂದ್ರೀಕರಣದ ದೃಷ್ಟಿಯಿಂದ ಪೂರ್ಣಪ್ರಮಾಣದ ಆರ್ ಎನ್ ಐ ವಿಭಾಗೀಯ ಕಚೇರಿಯನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಸ್ಥಾಪಿಸುವಂತೆ ಕೋರುತ್ತೇವೆ.5. ಸ್ಥಳೀಯ ಪತ್ರಿಕೆಗಳು ಇ-ಪೋರ್ಟಲ್ ನಲ್ಲಿ ಪತ್ರಿಕೆಯನ್ನು ಅಪ್ ಲೋಡ್ ಮಾಡುವಂತೆ ಹಾಗೂ ಪಿಐಬಿಯಲ್ಲೂ ಹಾಗೂ ರಾಜ್ಯ ಸರ್ಕಾರದ ಕಚೇರಿಯಲ್ಲೂ ಪತ್ರಿಕೆಗಳ ಹಾಜರಾತಿ ನಿರ್ವಹಿಸುವಂತೆ ರೂಪಿಸಲಾಗುತ್ತಿರುವ ಕಾನೂನು ಸ್ಥಳೀಯ ಪತ್ರಿಕೆಗಳಿಗೆ ದುಬಾರಿಯಾಗಿದ್ದು ಯಾವುದಾದರೂ ಒಂದು ಮಾದರಿಯಲ್ಲಿ ಪತ್ರಿಕೆಗಳ ಹಾಜರಾತಿ ನಿರ್ವಹಿಸುವಂತೆ ಕಾಯ್ದೆ ರೂಪಿಸಲು ಕೋರುತ್ತೇವೆ ಎಂದು ಅವರು ಮನವಿ ಮಾಡಿದ್ದಾರೆ.