i
ರಾಜ್ಯದ ಹಲವೆಡೆ ಲೋಕಾಯುಕ್ತರ ದಾಳಿ, ಚಳಿಯಲ್ಲೂ ಭ್ರಷ್ಟರ ಬೆವರಿಳಿಸಿದ ಲೋಕಾಯುಕ್ತರು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೋಕಾಯುಕ್ತರು ಪೊಲೀಸರು ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳು ಸೇರಿದಂತೆ ರಾಜ್ಯದ 30 ಕಡೆಗಳಲ್ಲಿ ದಾಳಿ ಮಾಡಿ ಭಾರಿ ಪ್ರಮಾಣದ ಅಕ್ರಮ ಆಸ್ತಿ –ಪಾಸ್ತಿ, ನಗದು, ಚಿನ್ನಾಭರಣಗಳನ್ನು ಪತ್ತೆ ಹಚ್ಚಿದ್ದಾರೆ.
ಲೋಕಾಯುಕ್ತರು ಬೆಳ್ಳಂಬೆಳಿಗ್ಗೆ ದಾಳಿ ಮಾಡಿ ಕೊರೆಯುವ ಮೈ ಚಳಿಯಲ್ಲೂ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದಾರೆ.
ಬೆಂಗಳೂರು ರಾಜಧಾನಿ ಸೇರಿದಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ರಾಮನಗರ ಸೇರಿದಂತೆ ರಾಜ್ಯಾದ್ಯಂತ 30ಕ್ಕೂ ಹೆಚ್ಚು ಕಡೆಗಳಲ್ಲಿ ಮುಂಜಾನೆಯೇ ಲೋಕಾಯುಕ್ತ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಬೆಂಗಳೂರು ಹಾಗೂ ಮತ್ತಿತರ ಕಡೆ 6 ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಬೆಸ್ಕಾಂನ ಚೀಫ್ ಜನರಲ್ ಮ್ಯಾನೇಜರ್ ಎಂಎಲ್ ನಾಗರಾಜ್, ಪಿಡಿಓ ಡಿಎಂ ಪದ್ಮನಾಭ, ಸೂಪರಿಂಟೆಂಡೆಂಟ್ ಇಂಜಿನಿಯರ್ ಎನ್. ಸತೀಶ್ ಬಾಬು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಕೆಆರ್ಐಡಿಎಲ್) ಸೈಯದ್ ಮುನೀರ್ ಅಹ್ಮದ್, ಕುಂದಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಎನ್. ಪದ್ಮನಾಭ, ಸೈಯದ್ ಮುನೀರ್, ಬಿಬಿಎಂಪಿ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಬಿ. ಮಂಜೇಶ್ ಎಂಬವರ ಮನೆಗಳ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಕ್ರಮ ಆಸ್ತಿ-ಪಾಸ್ತಿ ಸಂಬಂಧಿಸಿದಂತೆ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ.
ಸರ್ಕಾರಿ ಭ್ರಷ್ಟ ಅಧಿಕಾರಿಗಳ ಜೊತೆಗೆ ರಾಮನಗರ ಜಿಲ್ಲೆಯ ಚನ್ನೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಹೆಚ್ಎಸ್ ಸುರೇಶ್ ಮೇಲೆ ಹಲವು ದೂರು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಸೀಗೆಹಳ್ಳಿ ಮನೆ ಮೇಲೆ ರಾಮನಗರ ಲೋಕಾಯುಕ್ತ ಡಿವೈಎಸ್ಪಿ ಗೌತಮ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ವಿಜಯನಗರದಲ್ಲಿ ಜೆಸ್ಕಾಂ ಜನರಲ್ ಮ್ಯಾನೇಜರ್ ಆಗಿರುವ ನಾಗರಾಜ್ ಬೆಂಗಳೂರಿನಲ್ಲೂ ಮನೆ ಹೊಂದಿದ್ದಾರೆ. ನಾಗರಾಜ್ ಕೆಲ ದಿನಗಳ ಹಿಂದೆ 7.50 ಲಕ್ಷ ಲಂಚ ಪಡೆಯುವಾಗ ಟ್ರ್ಯಾಪ್ ಆಗಿದ್ದರು. ಈಗ ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ, ಪಟ್ಟಣದ ಬಾಪೂಜಿ ನಗರದ ಬಸವೇಶ್ವರ ದೇಗುಲ ಹಿಂಭಾಗದಲ್ಲಿರೋ ಮನೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ನಾಗರಾಜ್ ಪತ್ನಿಯ ಸಮ್ಮುಖದಲ್ಲಿ ನಾಗರಾಜ್ಗೆ ಸಂಬಂಧಿಸಿದ ಬಿಎಡ್ ಕಾಲೇಜ್, Ded ಕಾಲೇಜು, ಐಟಿಐ ಕಾಲೇಜು, ಪಿಯು ಕಾಲೇಜ್ಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ನಾಗರಾಜ್ ಕೂಡ್ಲಿಗಿ ತಾಲೂಕಿನಲ್ಲಿಯೇ ಎರಡು ಪೆಟ್ರೋಲ್ ಬಂಕ್ ಹೊಂದಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿವೆ.
ಬೆಂಗಳೂರಿನ ಬಿಬಿಎಂಪಿ ಅಧಿಕಾರಿ ಮಂಜೇಶ್ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಮಂಡ್ಯದಲ್ಲಿ ಮೂರು ಕಡೆ, ಮಳವಳ್ಳಿ ತಾಲೂಕಿನ ಹಲಗೂರು ಹಾಗೂ ಗುಂಡಾಪುರದಲ್ಲಿ ಮಂಜೇಶ್ ಸಂಬಂಧಿ ಸುರೇಂದ್ರ ಎಂಬವವರಿಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಮದ್ದೂರಿನ ಎಸ್.ಐ.ಕೋಡಿಹಳ್ಳಿಯಲ್ಲಿರುವ ಮಂಜೇಶ್ ಅಜ್ಜಿಯ ಮನೆಯ ಮೇಲೂ ದಾಳಿ ನಡೆಸಲಾಗಿದೆ. ನಗರದಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೆ ಪ್ಲಾನ್, ಎನ್ಒಸಿ ನೀಡಲು ಭಾರಿ ಪ್ರಮಾಣದಲ್ಲಿ ಲಂಚ ಪಡೆದಿರುವ ಆರೋಪ ಮಂಜೇಶ್ ಮೇಲಿದೆ. ಪ್ಲಾನ್ ಉಲ್ಲಂಘಿಸಿದ ಕಟ್ಟಡಗಳಿಗೂ ಎನ್ಒಸಿ ನೀಡುತ್ತಿದ್ದ ಎನ್ನುವ ಆರೋಪ ಇವರ ಮೇಲಿದೆ.
ಕೋಲಾರ ಮೂಲದ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಸತೀಶ್ ಬಾಬು ಅವರ ಜೆಸಿಆರ್ ಬಡಾವಣೆಯಲ್ಲಿರುವ ಮನೆ ಮತ್ತು ಬೆಂಗಳೂರಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಸತೀಶ್ ಬಾಬು ಚಿತ್ರದುರ್ಗ, ದಾವಣಗೆರೆಯಲ್ಲಿ ಇಇ ಇಂಜಿನಿಯರ್ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ಮತ್ತು ಚಿತ್ರದುರ್ಗದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕುಂದಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಎನ್. ಪದ್ಮನಾಭ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೈಯದ್ ಮುನೀರ್, ಬಿಬಿಎಂಪಿ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಬಿ. ಮಂಜೇಶ್, ಸತೀಶ್ ಬಾಬು ಮತ್ತಿತರ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು, ರಾಮನಗರ, ಬಳ್ಳಾರಿ, ಚಿತ್ರದುರ್ಗ, ಮಂಡ್ಯ, ವಿಜಯನಗರ ಸೇರಿದಂತೆ 30 ಸ್ಥಳಗಳ ಮೇಲೆ ದಾಳಿ ಮಾಡಿ ತಪಾಸಣೆ ಕೈಗೊಳ್ಳಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದು ಭ್ರಷ್ಟಾಧಿಕಾರಿಗಳ ಮನೆಗಳು, ಕಚೇರಿಗಳು, ಸಂಬಂಧಿಕರು ಮತ್ತು ಬೇನಾಮಿ ವ್ಯಕ್ತಿಗಳ ಮನೆಗಳಲ್ಲೂ ಶೋಧ ಕಾರ್ಯ ನಡೆದಿದೆ.
ಭ್ರಷ್ಟ ಅಧಿಕಾರಿಗಳ ಬಳಿ ಇದ್ದ ಅಕ್ರಮ ಆಸ್ತಿ, ನಗದು, ಚಿನ್ನಾಭರಣಗಳನ್ನು ಲೋಕಾಯುಕ್ತರು ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ. ಅಧೀಕ್ಷಕ ಇಂಜಿನಿಯರ್ ಸತೀಶ್ ಬಾಬು ಅವರ ಚಿತ್ರದುರ್ಗದಲ್ಲಿರುವ ನಿವಾಸಕ್ಕೆ ಲೋಕಾಯುಕ್ತರು ದಾಳಿ ಮಾಡಿ ನಿವಾಸದಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಬೆಳ್ಳಿ, ಚಿನ್ನ ಕಂಡು ಅಧಿಕಾರಿಗಳು ದಿಗ್ಭ್ರಮೆ ಒಳಗಾದರು. ಮತ್ತೊಂದೆಡೆ ಎಜೆಓ ಸುರೇಶ್ ನಿವಾಸದಲ್ಲಿ ಕಂತೆ, ಕಂತೆ ನೋಟುಗಳು ಪತ್ತೆಯಾಗಿವೆ. ಅಲ್ಲದೆ ಭಾರಿ ಬೆಲೆಯ ಮದ್ಯದ ಬಾಟೀಲುಗಳು ಪತ್ತೆಯಾಗಿದ್ದು ಶೋಧನಾ ಕಾರ್ಯ ಮುಂದುವರಿದಿದ್ದು ಅಂತಿಮವಾಗಿ ಲೋಕಾಯುಕ್ತರು ಎಷ್ಟು ಮೌಲ್ಯದ ಅಕ್ರಮ ಆಸ್ತಿ ಎಂದು ಮಾಹಿತಿ ನೀಡಲಿದ್ದಾರೆ.