i
ಭ್ರಷ್ಟ ಇಂಜಿನಿಯರ್ ಸತೀಶ್ ಬಾಬು ಮನೆ ಮೇಲೆ ದಾಳಿ, ಅಪಾರ ನಗದು ಆಸ್ತಿ ನೋಡಿ ದಂಗಾದ ಲೋಕಾಯುಕ್ತರು… ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭ್ರಷ್ಟ ಸೂಪರಿಂಟೆಂಡೆಂಟ್ ಇಂಜಿನಿಯರ್ ಎನ್. ಸತೀಶ್ ಬಾಬು ಚಿತ್ರದುರ್ಗ ಮತ್ತು ಬೆಂಗಳೂರಿನ ಮನೆಗಳು, ಕಚೇರಿ, ತೋಟದ ಮೇಲೆ ಲೋಕಾಯುಕ್ತ ದಾಳಿ ಮಾಡಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಸೇರಿದಂತೆ ಮತ್ತಿತರ ಆಸ್ತಿಗಳ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ.
ಸತೀಶ್ ಬಾಬು ಅವರ ಮನೆಯಲ್ಲಿ ಸಿಕ್ಕಿರುವ ಅಪಾರ ಪ್ರಮಾಣದ ನಗದು, ಚಿನ್ನಾಭರಣವನ್ನು ಕಂಡ ಲೋಕಾಯುಕ್ತ ಪೊಲೀಸರೇ ದಂಗಾಗಿದ್ದಾರೆ ಎನ್ನಲಾಗಿದೆ.
ಹಾಲಿ ಬೆಂಗಳೂರಿನ ಕೆ.ಆರ್.ಸರ್ಕಲ್ ನಲ್ಲಿರುವ ಲೋಕೋಪಯೋಗಿ ಇಲಾಖೆ ಕಟ್ಟಡಗಳ ವೃತ್ತದಲ್ಲಿ ಅಧೀಕ್ಷಕ(ಸೂಪರಿಂಟೆಂಡೆಂಟ್) ಇಂಜಿನಿಯರ್ ಆಗಿರುವ ಎನ್. ಸತೀಶ್ ಬಾಬು ಅವರು ಕೋಲಾರ ಮೂಲದವರಾಗಿದ್ದು ಚಳ್ಳಕೆರೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ಆರಂಭಿಸಿದರು. ನಂತರ ಮುಂಬಡ್ತಿ ಪಡೆದು ಚಿತ್ರದುರ್ಗ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸಿದ್ದರು. ಇದಾದ ನಂತರ ಅಧೀಕ್ಷಕರ ಇಂಜಿನಿಯರ್ ಆಗಿ ಮುಂಬಡ್ತಿ ಪಡೆದ ಸತೀಶ್ ಬಾಬು ಅವರು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ದಾವಣಗೆರೆಯ ಪಿಆರ್ ಇ ಸರ್ಕಲ್ ನಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ಈಗ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಭಾರೀ ಭ್ರಷ್ಟಾಚಾರ-ಚಿತ್ರದುರ್ಗ ಜಿಲ್ಲೆಯ ಕಾರ್ಯಪಾಲಕರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲೇ ಸತೀಶ್ ಬಾಬು ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದಿದ್ದವು. ಅಂತಹ ದೂರುಗಳಿಗೆ ಅವರು ಕೇರ್ ಮಾಡಿದ ಅಧಿಕಾರಿಯಲ್ಲ. ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಅವರ ಕುಟುಂಬದ ಶುಭ ಕಾರ್ಯದ ಸಂಭ್ರಮದಿಂದ ಸತೀಶ್ ಬಾಬು ಖರ್ಚು ಮಾಡಿದ ಹಣ, ವೈಭವದ ಸಮಾರಂಭದ ಮಾಹಿತಿ, ಇವರ ವಿರುದ್ಧ ಇದ್ದ ಭ್ರಷ್ಟಾಚಾರದ ದೂರುಗಳು ಲೋಕಾಯುಕ್ತ ಕಚೇರಿಗೆ ತಲುಪಿತ್ತು ಎನ್ನಲಾಗಿದೆ. ಅಲ್ಲಿಂದ ಸತೀಶ್ ಬಾಬು ಅವರ ಮಾಹಿತಿ ಸಂಗ್ರಹಕ್ಕೆ ಇಳಿದಿದ್ದ ಲೋಕಾಯುಕ್ತ ಪೊಲೀಸರು ಅಂತಿಮವಾಗಿ ಇಂದು ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಮತ್ತಿತರ ಕಡೆಗಳಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಸೇರಿದಂತೆ ಮತ್ತಿತರ ಆಸ್ತಿಯ ದಾಖಲಾತಿಗಳನ್ನು ಲೋಕಾಯುಕ್ತರು ವಶಕ್ಕೆ ಪಡೆದು ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗಿದೆ.