i
ಹಿರಿಯೂರು-ಹುಳಿಯಾರ್ ರಸ್ತೆ ಅಗಲೀಕರಣ ಮುಂದಿನ ಸಭೆಯಲ್ಲಿ ಚರ್ಚೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಾಂಖ್ಯಿಕ ಮತ್ತು, ಯೋಜನಾ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರ ಆದೇಶದ ಮೇರೆಗೆ ಕರ್ನಾಟಕ ಸರ್ಕಾರ ಹಿರಿಯೂರು ಕೆ.ಇ.ಬಿ. ಶಾಖೆಗೆ ನೂತನ 05 ಜನ ಸಲಹಾ ಸಮಿತಿ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ್ದು ಕೆಇಬಿ ಇಂಜಿನಿಯರ್ ವಿಭಾಗವು ವಿದ್ಯುತ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಿರಿಯೂರು ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆಗಾಗಿ ಸಭೆ ಕರೆದು ಚರ್ಚಿಸಲಾಯಿತು.
ನೂತನ ಸದಸ್ಯ ಪಿಲಾಲಿ ಮಂಜು (ಪಿ.ಬಿ.ಮಂಜುನಾಥ್) ಸಭೆಯಲ್ಲಿ ಮಾತನಾಡಿ, ಬೆಸ್ಕಾಂ ವ್ಯವಸ್ಥೆ ಸರಿಪಡಿಸಲಿ ಎನ್ನುವ ಕಾರಣಕ್ಕಾಗಿ ಜಿಲ್ಲಾ ಸಚಿವರಾದ ಸುಧಾಕರ್ ಕೆಇಬಿ ಕುಂದು ಕೊರತೆಗಳ ಸಲಹಾ ಸಮಿತಿಗೆ 5 ಜನ ನಾಮನಿರ್ದೇಶನ ಮಾಡಿದ್ದಾರೆ. ಸಚಿವರ ಮಾರ್ಗದರ್ಶನದಂತೆ ನಾವು ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ನಗರ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಬೆಸ್ಕಾಂ ಆದಾಯ ಹೆಚ್ಚಳ ಮಾಡಲು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. ಇದಲ್ಲದೆ ಸಾಕಷ್ಟು ಮನೆಯಲ್ಲಿ ಅಕ್ರಮವಾಗಿ ನೀರು ಕಾಯಿಸಲು ಹೀಟರ್ ಹಾಕಲು ಬೇರೆ ಸ್ವಿಚ್ ಬೋರ್ಡ್ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಸಮಗ್ರ ತನಿಖೆ ನಡೆಸಿ ಎಂದು ಅವರು ಸೂಚಿಸಿದರು.
ಹೊಸ ಮನೆಗಳನ್ನು ಕಟ್ಟುತ್ತಿರುವ ವ್ಯಕ್ತಿಗಳು ಟಿ.ಪಿ. ತೆಗೆದುಕೊಳ್ಳದೆ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಅಲ್ಲದೆ ವಾಣಿಜ್ಯೋಪಯೋಗಕ್ಕಾಗಿ ಮೆಟ್ಟಿಲು ರೈಲಿಂಗ್ಸ್ ಹಾಕುತ್ತಿರುವುದು ಮನೆಯ ಕಬ್ಬಿಣದ ಕಿಟಕಿಗಳನ್ನು ಅಳವಡಿಸಿ ಕೊಳ್ಳಲು ಅಕ್ರಮವಾಗಿ ವಿದ್ಯುತ್ ತೆಗೆದುಕೊಂಡಿರುವುದು ಗಮನಕ್ಕೆ ಬಂದಿದೆ ಇಂತಹ ಅಕ್ರಮಗಳಿಗೆ ಬೆಸ್ಕಾಂ ಅಧಿಕಾರಿಗಳು ಕಡಿವಾಣ ಹಾಕಬೇಕು. ಕಾನೂನು ಕ್ರಮಗಳನ್ನು ಜರುಗಿಸುವ ಮುನ್ನ ಸಾರ್ವಜನಿಕರಿಗೆ ಮತ್ತು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವಂತವರಿಗೆ ವಿದ್ಯುತ್ ಕಳವಿನ ಪ್ರಕರಣದ ತೀವ್ರತೆ ಕುರಿತು ಜನ ಜಾಗೃತಿ ಮೂಡಿಸುವ ಕಾರ್ಯವನ್ನು ಬೆಸ್ಕಾಂ ಅಧಿಕಾರಿಗಳು ಮಾಡಬೇಕಿದೆ. ಅಕ್ರಮವಾಗಿ ಕರೆಂಟ್ ತೆಗೆದುಕೊಂಡಿರುವವರ ವಿದ್ಯುತ್ ಸಂಪರ್ಕ ಕಡಿತ ಮಾಡಲು ಲೈನ್ಮ್ಯಾನ್ಗಳು ಹೋದಾಗ ಲೈನ್ಮ್ಯಾನ್ಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುವುದಾಗಲಿ, ದೈಹಿಕ ಹಲ್ಲೆಗೆ ಮುಂದಾದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಪಿಲಾಲಿ ಮಂಜು ಸೂಚನೆ ನೀಡಿದರು.
ಹಿರಿಯೂರು-ಹುಳಿಯಾರು ರಸ್ತೆಯ ಅಗಲೀಕರಣಕ್ಕೆ ಅಡ್ಡಿಯಾಗಿರುವ ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಸೂಚಿಸಿದಾಗ ಮಧ್ಯ ಪ್ರವೇಶ ಮಾಡಿದ ಎಇಇ ಪೀರ್ ಸಾಬ್ ಈ ವಿಚಾರವಾಗಿ ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳೋಣ ಎಂದು ಸಭೆಯನ್ನು ಮುಕ್ತಾಯಗೊಳಿಸಿದರು.ಸಭೆಯಲ್ಲಿ ನೂತನ ಸದಸ್ಯರಾದ ಸಿದ್ದೇಶನಾಯಕ, ಅಬ್ದುಲ್ ಸಲ್ಮಾನ್, ರೂಪಾ ಮಾರುತಿರಾವ್, ಬೆಸ್ಕಾಂ ಎಇಇ ಪೀರಸಾಬ್, ಸಹಾಯಕ ಇಂಜಿನಿಯರ್ ಗಳಾದ ದಯಾನಂದ್, ರವಿಕುಮಾರ್ ಉಪಸ್ಥಿತರಿದ್ದರು.