i
ಅರ್ಬನ್ ಬ್ಯಾಂಕ್ ಲೈಸೆನ್ಸ್ ರದ್ದುಗೊಳಿಸಿದ ಆರ್.ಬಿ.ಐ, ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ…
ವರದಿ-ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಹಿರಿಯೂರು ನಗರದ ಅತ್ಯಂತ ಶ್ರೀಮಂತ ಬ್ಯಾಂಕ್ ಆಗಿದ್ದ ಹಿರಿಯೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬೀಗ ಮುದ್ರೆ ಒತ್ತಿದೆ.
ಆರ್ಬಿಐ ಜನವರಿ 12ರಂದು ಹಿರಿಯೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ನ ದುರ್ಬಲ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ಪರವಾನಗಿಯನ್ನು ರದ್ದುಗೊಳಿಸಿದೆ. ಆರ್ಬಿಐ ಪತ್ರಿಕಾ ಪ್ರಕಟಣೆಯಲ್ಲಿ ಬ್ಯಾಂಕ್ನ ಉಳಿವು ಅದರ ಠೇವಣಿದಾರರ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿವೆ ಎನ್ನಲಾಗಿದೆ, ಬ್ಯಾಂಕಿನ ಪ್ರಸ್ತುತ ಆರ್ಥಿಕ ಸ್ಥಿತಿಯೊಂದಿಗೆ ಅದರ ಪ್ರಸ್ತುತ ಠೇವಣಿದಾರರಿಗೆ ಸಂಪೂರ್ಣ ಪಾವತಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಮುಂದುವರೆಯಲು ಅದರ ಬ್ಯಾಂಕಿಂಗ್ ವ್ಯವಹಾರಕ್ಕೆ ಅನುಮತಿ ನೀಡಿದರೆ ಸಾರ್ವಜನಿಕ ಹಿತಾಸಕ್ತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎನ್ನುವ ತೀರ್ಮಾನದೊಂದಿಗೆ ಬ್ಯಾಂಕಿಗೆ ಬೀಗ ಮುದ್ರೆ ಒತ್ತಿದೆ.
ಹಿರಿಯೂರು ನಗರದ ರಾಷ್ಟ್ರೀಯ ಬ್ಯಾಂಕ್ ಗಳಲ್ಲೂ ಅಷ್ಟು ವಹಿವಾಟು ನಡೆಯುತ್ತಿರಲಿಲ್ಲ. ಅರ್ಬನ್ ಬ್ಯಾಂಕ್ ಷೇರುದಾರರಾಗುವುದೇ ಒಂದು ಪ್ರತಿಷ್ಠೆ ಎನ್ನುವಂತ ಪರಿಸ್ಥಿತಿ 20-30 ವರ್ಷಗಳಿಂದೆ ಇತ್ತು. ಆದರೆ ಬ್ಯಾಂಕಿನ ಅಧಿಕಾರಿಗಳ ದುರ್ಬಲ ಆಡಳಿತ, ಸ್ವಜನ ಪಕ್ಷಪಾತ, ಆಡಳಿತ ಮಂಡಳಿಯ ನಿಷ್ಕ್ರಿಯತೆ, ಇನ್ನಿಲ್ಲದಂತೆ ನಡೆದ ಅವ್ಯವಹಾರಗಳಿಂದಾಗಿ ಅತಿ ಎತ್ತರಕ್ಕೆ ಬೆಳೆದಿದ್ದ ಅರ್ಬನ್ ಬ್ಯಾಂಕ್ ಇಂದು ಹೇಳ ಹೆಸರಿಲ್ಲದಂತೆ ಮುಚ್ಚು ಹೋಗುತ್ತಿರುವುದು ಅತ್ಯಂತ ನೋವಿನ ಸಂಗತಿ.
ನಗರದ ಅನೇಕ ಉದ್ದಿಮೆದಾರರು, ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ಬೀದಿ ಬದಿ ವ್ಯವಹಾರಗಳಿಗೆ ಕಲ್ಪವೃಕ್ಷ ಕಾಮಧೇನು ಆಗಿದ್ದ ಅರ್ಬನ್ ಬ್ಯಾಂಕ್ ಇಂದು ಕೋಮಕ್ಕೆ ಏಕೆ ಜೀವವೇ ಹೋಗಿದೆ.
ಸಾವಿರಾರು ಮಂದಿ ಉದ್ದಿಮೆದಾರರು ಒಂದಿಷ್ಟು ವ್ಯವಹಾರ ಮಾಡಿ ಆರ್ಥಿಕವಾಗಿ ಸಬಲರಾಗಲು ಹೆಸರು ವಾಸಿಯಾಗಿದ್ದ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಈಗಿನ ಪರಿಸ್ಥಿತಿ ನೋಡಿದರೆ ಬ್ಯಾಂಕ್ ಸಂಸ್ಥಾಪಕರು, ಎತ್ತರಕ್ಕೆ ಕಟ್ಟಿ ಬೆಳೆಸಿದ್ದ ಆಡಳಿತ ಮಂಡಳಿಯವರಿಗೆ ಸಾಕಷ್ಟು ನೋವು ತರುವುದರಲ್ಲಿ ಸಂದೇಹವಿಲ್ಲ. ನಗರದ ವ್ಯಾಪಾರಿಗಳ ಕಾಮಧೇನು ವಿನಂತಿದ್ದ ಹಿರಿಯೂರು ಅರ್ಬನ್ ಕೋ ಆಪರೇಟಿವ್ ಬ್ಯಾoಕ್ ಕೊನೆಗೂ ಕಣ್ಮುಚ್ಚಿದೆ. ಸುಮಾರು ನಾಲ್ಕು ದಶಕದ ಹಿಂದೆ ನಗರದಲ್ಲಿ ಜನ್ಮತಾಳಿದ್ದ ಅರ್ಬನ್ ಕೋ ಆಪರೇಟಿವ್ ಬ್ಯಾoಕ್ ನ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 12 /2024 ರ ಆದೇಶದಲ್ಲಿ ರದ್ದುಗೊಳಿಸಿದೆ.ಪರಿಣಾಮವಾಗಿ ಜನವರಿ 12 ರಿಂದ ಅರ್ಬನ್ ಬ್ಯಾoಕ್ ಬ್ಯಾಂಕಿಂಗ್ ವ್ಯವಹಾರವನ್ನು ಮುಂದುವರಿಸುವುದನ್ನು ನಿಲ್ಲಿಸಿದೆ. ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟ್ರಾರ್ ರವರು ಬ್ಯಾಂಕ್ ಅನ್ನು ಮುಕ್ತಾಯಗೊಳಿಸಲು ಆದೇಶವನ್ನು ಹೊರಡಿಸಲು ಮತ್ತು ಲಿಕ್ವಿಡೇಟರ್ ಅನ್ನು ನೇಮಿಸಲು ವಿನಂತಿಸಲಾಗಿದೆ. ಬ್ಯಾಂಕ್ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆಗಳನ್ನು ಹೊಂದಿಲ್ಲ. ಅಂತೆಯೇ ಇದು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಸೆಕ್ಷನ್ 56 ರೊಂದಿಗೆ ಓದಲಾದ ಸೆಕ್ಷನ್ 11(1) ಮತ್ತು ಸೆಕ್ಷನ್ 22 (3)(ಡಿ) ನಿಬಂಧನೆಗಳನ್ನು ಅನುಸರಿಸುವುದಿಲ್ಲ. ಬ್ಯಾಂಕಿನ ಮುಂದುವರಿಕೆಯು ಅದರ ಠೇವಣಿದಾರರ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ. ಬ್ಯಾಂಕ್ ತನ್ನ ಪ್ರಸ್ತುತ ಹಣಕಾಸಿನ ಸ್ಥಿತಿಯೊಂದಿಗೆ ತನ್ನ ಪ್ರಸ್ತುತ ಠೇವಣಿದಾರರಿಗೆ ಪೂರ್ಣವಾಗಿ ಪಾವತಿಸಲು ಸಾಧ್ಯವಾಗುವುದಿಲ್ಲ ಮತ್ತು ಬ್ಯಾಂಕ್ ತನ್ನ ಬ್ಯಾಂಕಿಂಗ್ ವ್ಯವಹಾರವನ್ನು ಮುಂದುವರಿಸಲು ಅನುಮತಿಸಿದರೆ ಸಾರ್ವಜನಿಕ ಹಿತಾಸಕ್ತಿಗೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅದರ ಪರವಾನಗಿಯನ್ನು ರದ್ದುಗೊಳಿಸಿದ ಪರಿಣಾಮವಾಗಿ ಠೇವಣಿಗಳ ಸ್ವೀಕಾರ ಮತ್ತು ಠೇವಣಿಗಳ ಮರುಪಾವತಿಯನ್ನು ಒಳಗೊಂಡಿರುವ ಬ್ಯಾಂಕಿಂಗ್‘ ವ್ಯವಹಾರ ನಡೆಸುವುದನ್ನು ನಿಷೇಧಿಸಲಾಗಿದೆ. 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಸೆಕ್ಷನ್ 56 ರೊಂದಿಗೆ ತಕ್ಷಣವೇ ಜಾರಿಗೆ ಬರುವಂತೆ ವಿಭಾಗ 5(b) ಅನ್ನು ಓದಲಾಗಿದೆ. ದಿವಾಳಿಯಾದ ಮೇಲೆ ಪ್ರತಿ ಠೇವಣಿದಾರರು ಠೇವಣಿ ವಿಮಾ ಕ್ಲೈಮ್ ಅನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. 5 ಲಕ್ಷದವರೆಗಿನ ಠೇವಣಿಗಳ ಮೊತ್ತ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಗೆ ಒಳಪಟ್ಟಿರುತ್ತದೆ. ಬ್ಯಾಂಕ್ ಸಲ್ಲಿಸಿದ ಮಾಹಿತಿಯ ಪ್ರಕಾರ ಶೇ 99.93 ಠೇವಣಿದಾರರು ತಮ್ಮ ಠೇವಣಿಗಳ ಪೂರ್ಣ ಮೊತ್ತವನ್ನು DICGC ಯಿಂದ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಮೇಲೆ ಇದ್ದಂತೆ ಸೆಪ್ಟೆಂಬರ್ 30, 2023 DICGC ಈಗಾಗಲೇ ಒಟ್ಟು ವಿಮೆ ಮಾಡಿದ ಠೇವಣಿಗಳಲ್ಲಿ 224.53 ಲಕ್ಷವನ್ನು ಪಾವತಿಸಿದೆ. ಇಚ್ಛೆಯ ಆಧಾರದ ಮೇಲೆ DICGC ಕಾಯಿದೆ, 1961 ರ ವಿಭಾಗ 18A ನಿಬಂಧನೆಗಳ ಅಡಿಯಲ್ಲಿ ಬ್ಯಾಂಕಿನ ಠೇವಣಿದಾರರಿಂದ ಸ್ವೀಕರಿಸಲಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಸರಿಯಾದ ಸಾಲ ವಸೂಲಾತಿ, ಕ್ರಮಬದ್ದವಲ್ಲ ಆಡಳಿತ ನಿರ್ವಹಣೆ ಇಲ್ಲದೇ ದಶಕಗಳ ಕಾಲ ನಗರದ ಜನರ ಒಡನಾಡಿಯಾಗಿದ್ದ ಸ್ಥಳೀಯ ಬ್ಯಾಂಕ್ ಒಂದು ಮುಚ್ಚುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಬ್ಯಾಂಕ್ ಪರವಾನಿಗೆ ರದ್ದು ಮಾಡಿದರೆ ಸಾಲದು ಇದಕ್ಕೆ ಕಾರಣ ಆಗಿರುವಂತವರ ಮೇಲೆ ಕಾನೂನು ಕ್ರಮಗಳನ್ನು ಆರ್ ಬಿಐ ಮತ್ತು ಸಹಕಾರ ಸಂಘಗಳ ನಿಬಂಧಕರು ಕೈಗೊಂಡಾಗ ಮಾತ್ರ ಸಹಕಾರ ಬ್ಯಾಂಕುಗಳು ಉಳಿಯಲು ಸಾಧ್ಯವಾಗಲಿದೆ.
ಇನ್ನೂ ಹಿರಿಯೂರು ನಗರದಲ್ಲಿ ಹಲವು ಸಾಂಸ್ಕೃತಿಕ ನಾಯಕರ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ಸಾಕಷ್ಟು ಸಹಕಾರ ಸಂಘಗಳ ಬ್ಯಾಂಕ್ ಗಳು ನಡೆಯುತ್ತಿದ್ದು ಇಂತಹ ಪ್ರಕರಣದಿಂದ ಹೆಚ್ಚುತ್ತುಕೊಂಡು ಉತ್ತಮ ನೀಡಲಿ ಎನ್ನುವುದು ಚಂದ್ರವಳ್ಳಿ ಪತ್ರಿಕೆಯ ಆಶಯವಾಗಿದೆ.
ಬ್ಯಾಂಕ್ ನಡೆದು ಬಂದ ದಾರಿ- ಭಗವಾನ್ ಚಂದ್, ವೆಂಕಟರಾಮ ಶೆಟ್ಟಿ(ಕೆ.ವಿ.ಅಮರೇಶ್ ತಂದೆ) ನೇತೃತ್ವದಲ್ಲಿ 1973ರಲ್ಲಿ ಅರ್ಬನ್ ಬ್ಯಾಂಕ್ ಸ್ಥಾಪನೆ. ಒಟ್ಟು ಮೂರು ಶಾಖೆಗಳನ್ನು ತೆರೆದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಕೆ.ವಿ.ಅಮರೇಶ್ ಅವರ ಅಧ್ಯಕ್ಷತೆಯಲ್ಲಿ 25 ವರ್ಷಗಳ ಬೆಳ್ಳಿ ಸಂಭ್ರಮಾಚರಣೆಯನ್ನು ಅದ್ಧೂರಿಯಾಗಿ ಮಾಡಲಾಯಿತು. ಆದರೆ ಬ್ಯಾಂಕಿನ ಸಿಬ್ಬಂದಿಗಳ ಸ್ವಜನ ಪಕ್ಷಪಾತ, ಕಾನೂನು ಬಾಹಿರ ಚಟುವಟಿಕೆ, ಆರ್ ಬಿಐ ಕಾನೂನುಗಳನ್ನು ಉಲ್ಲಂಘಿಸಿದಲ್ಲದೆ ರಾಜ್ಯ ಸರ್ಕಾರ ಕೆಲ ಅಧಿಕಾರಿಗಳೊಂದಿಗೆ ಶಾಮೀಲಾಗಿದೆ ಸಹಾಯ ಧನ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸೃಷ್ಠಿ ಮಾಡಿದ್ದಲ್ಲದೆ ಲಕ್ಷಾಂತರ ರೂ.ಗಳನ್ನು ಸರ್ಕಾರ ಮತ್ತು ಅರ್ಹ ಫಲಾನುಭವಿಗಳಿಗೆ ದೊರೆಯದೇ ಬ್ಯಾಂಕ್ ಸಿಬ್ಬಂದಿಗಳು ಮತ್ತು ರಾಜ್ಯ ಸರ್ಕಾರದ ಕೆಲ ಅಧಿಕಾರಿಗಳು ಹಣ ನುಂಗಿ ನೀರು ಕುಡಿದರು. ಅಲ್ಲದೆ ಬ್ಯಾಂಕಿನಲ್ಲಿ ಇಡಲಾಗಿದ್ದ ಠೇವಣಿ ಹಣವನ್ನು ಸಂಬಂಧಿಕರಿಗೆ, ಸ್ನೇಹಿತರಿಗೆ ಯಾವುದೇ ಭದ್ರತೆಯ ದಾಖಲಾತಿ ಪಡೆಯದೇ ಬೇಕಾಬಿಟ್ಟಿಯಾಗಿ ಸಾಲ ಸೌಲಭ್ಯ ನೀಡಲಾಯಿತು. ಈ ಅವ್ಯವಹಾರ, ಹಗರಣಗಳನ್ನು ಕಂಡ ಸರ್ಕಾರ ಮತ್ತು ಆರ್ ಬಿಐ ಎಚ್ಚೆತ್ತುಕೊಂಡು 2003ರಲ್ಲಿ ಸೀಪರ್ ಸೀಡ್ ಮಾಡಲಾಯಿತು. ಅಂದಿನ ಆಡಳಿತ ಮಂಡಳಿಯನ್ನು ರದ್ದು ಮಾಡಿ ಸರ್ಕಾರ ಸಮಾಪಾನ ಅಧಿಕಾರಿಯನ್ನು ನೇಮಕ ಮಾಡಿತು. ಇದಾದ ನಂತರ 2006ಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಲಾಯಿತು. 2006 ರಿಂದ 2010ರವರೆಗೆ ಆರ್ ಬಿಐ ಮಾರ್ಗ ಸೂಚಿಗಳ ಪ್ರಕಾರ ಸಾಲ ವಸೂಲಾತಿಯೊಂದಿಗೆ ಠೇವಣಿದಾರರ ನಂಬಿಕೆ ಉಳಿಸಿಕೊಂಡು ಬ್ಯಾಂಕ್ ಅನ್ನು ಸುಸ್ಥಿತಿಗೆ ತರಲಾಗುತ್ತದೆ. 2011ರಲ್ಲಿ ಬ್ಯಾಂಕ್ ಅಧ್ಯಕ್ಷರಾದ ಆರ್.ಮಹಮದ್ ರಫಿ ಅವರು ಅಧ್ಯಕ್ಷರಾದ ನಂತರ ಬ್ಯಾಂಕಿನ ಎಲ್ಲ ವ್ಯವಹಾರಗಳನ್ನು ಆನ್ ಲೈನ್ ಮೂಲಕ ಮಾಡಿದ್ದಲ್ಲದೆ ವಸೂಲಾತಿ ಆಗದ ಹಳೆ ಸಾಲದ ಬಾಕಿಯನ್ನು ವಸೂಲಿ ಮಾಡಲಾಗುತ್ತದೆ. 2012-13ರಲ್ಲಿ ಬ್ಯಾಂಕಿಗೆ 1 ಕೋಟಿ ರೂ.ಗಳ ನಿವ್ವಳ ಲಾಭವನ್ನು ಅಂದಿನ ಆಡಳಿತ ಮಂಡಳಿ ತರುತ್ತದೆ.
ಇದೇ ಅವಧಿಯಲ್ಲಿ ಬ್ಯಾಂಕಿಗೆ ವಂಚುಸುತ್ತಿದ್ದ ಅಧಿಕಾರಿಗಳಾದ ಜಿ.ಆರ್.ಶ್ರೀನಿವಾಸ್ ಮತ್ತು ಸುಗುಮಾರನ್ ಹಾಗೂ ಕೆಲ ಸಿಬ್ಬಂದಿಗಳ ವಿರುದ್ಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಅಂದಿನ ಅಧ್ಯಕ್ಷರಾದ ಮಹಮದ್ ರಫಿ ಅವರು ಸರ್ಕಾರ, ಸಾರ್ವಜನಿಕರು ಮತ್ತು ಬ್ಯಾಂಕಿನ ಠೇವಣಿದಾರರಿಗೆ ವಂಚಿಸುತ್ತಿದ್ದ ಇವರುಗಳ ದೂರು ದಾಖಲು ಮಾಡುತ್ತಾರೆ. ಪೊಲೀಸ್ ಅಧಿಕಾರಿಗಳ ಚುರುಕಿನ ತನಿಖೆಯಿಂದಾಗಿ ಆರೋಪಿಗಳ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಚಾರ್ಜ್ ಶೀಟ್ ಹಾಕಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಪೊಲೀಸರು ಒಪ್ಪಿಸುತ್ತಾರೆ. ನ್ಯಾಯಾಲಯವು ಸದರಿ ಆರೋಪಿಗಳನ್ನು ಕಸ್ಟಡಿಗೆ ಒಪ್ಪಿಸಿದ ನಂತರ ಕೆಲ ದಿನಗಳ ವರೆಗೆ ಜೈಲಿನಲ್ಲಿದ್ದು ನಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಈಗಲೂ ಸದರಿ ಪ್ರಕರಣವು ತನಿಖೆ ಹಂತದಲ್ಲಿದೆ. ಇದಾದ ನಂತರ ಮತ್ತೆ ಬ್ಯಾಂಕಿಗೆ 2020ಕ್ಕೆ ಚುನಾವಣೆ ನಡೆದು ನೂತನ ಆಡಳಿತ ಮಂಡಳಿ ಬದಲಾಗುತ್ತದೆ. ಹೊಸ ಮಂಡಳಿ ಬರುತ್ತಿದ್ದಂತೆ ಕಾನೂನು ಬಾಹಿರವಾದ ಕೃತ್ಯಗಳಿಂದಾಗಿ ಇಲ್ಲಿಯ ತನಕ ಅಂದರೆ ಸುಮಾರು 4 ವರ್ಷಗಳಲ್ಲಿ 4 ಕೋಟಿ ರೂ.ಗಳನ್ನು ನಷ್ಟು ಉಂಟು ಮಾಡಲಾಗುತ್ತದೆ.
ಈ ಎಲ್ಲ ಅಕ್ರಮಗಳಿಗೆ, ಅವ್ಯವಹಾರಗಳಿಗೆ, ಕಾನೂನು ಬಾಹಿರ ಕೃತ್ಯಗಳನ್ನು ಎಸಗಿದವರ ವಿರುದ್ಧ ಸಮಗ್ರ ತನಿಖೆ ಮಾಡಿ ಉತ್ತಮ ಸ್ಥಿತಿಯಲ್ಲಿದ್ದ ಬ್ಯಾಂಕ್ ಪರವಾನಿಗೆ ರದ್ದು ಮಾಡಲು ಕಾರಣರಾದ ಆರೋಪಿಗಳು ಸೇರಿದಂತೆ ಈಗಿನ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಂಡು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಅರ್ಬನ್ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಆರ್.ಮಹಮದ್ ರಫಿ ಅವರು ಒತ್ತಾಯಿಸಿದ್ದಾರೆ.