i
ಕೋಟೆನಾಡು ಬುದ್ಧ ವಿಹಾರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ವಾಮಿ ವಿವೇಕಾನಂದರು ಬಾಲ್ಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗದಿದ್ದರೂ ತುಂಟ,ಸೂಕ್ಷ್ಮಮತಿ, ಕ್ಷಾತ್ರ ತೇಜಸ್ಸು ಹೊಂದಿದ್ದ,ಯಾವುದೇ ವಿಷಯವಾದರೂ ತಾರ್ಕಿಕ ಅಂತ್ಯದವರೆಗೆ ಪ್ರಶ್ನೆ ಮಾಡುತ್ತಿದ್ದ ಮನೋಭಾವ ಹೊಂದಿದ್ದರೆಂದು ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ಪರಮೇಶ್ವರಪ್ಪ ಹೇಳಿದರು. ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇವರು ಇದ್ದಾನೆಯೇ? ಎಲ್ಲಿದ್ದಾನೆ? ಹೇಗಿದ್ದಾನೆ ಎಂಬುದರ ಅನ್ವೇಷಣೆಯೇ ಅವರ ಜೀವನದ ಮುಖ್ಯ ಉದ್ದೇಶವಾಗಿತ್ತು. ದೇವರಿದ್ದಾನೆಯೇ ಎಂಬ ಪ್ರಶ್ನೆಗೆ ರಾಮಕೃಷ್ಣ ಪರಮಹಂಸರಿಂದ ಉತ್ತರ ಕಂಡುಕೊಂಡರು ಎಂದು ತಿಳಿಸಿದರು.ಸಾಹಿತಿ ಡಾ. ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ ಪ್ರತಿ ದಿನ ನಿಮ್ಮ ಜೊತೆ ನೀವು ಮಾತನಾಡಿಕೊಳ್ಳುವುದರಿಂದ ನಿಮ್ಮ ಅಂತರಂಗ ಅರಿಯಲು ಸಾಧ್ಯವೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಎಂದರು. ವೇದಾ, ವೇದಾಂಗಗಳು, ಕುರಾನ್, ಬೈಬಲ್ ಎಲ್ಲ ಧರ್ಮ ಗ್ರಂಥಗಳು ಸ್ವಲ್ಪ ಕಾಲ ವಿಶ್ರಾಂತಿ ಪಡೆದರೆ ಮನುಷ್ಯನಲ್ಲಿರುವ ಅಂತರಂಗ ಜಾಗೃತಗೊಂಡು ಮಾನವೀಯ ಗುಣಗಳು ದೇಶವನ್ನು ಆಳುತ್ತವೆ ಎಂದು ಹೇಳಿದ್ದಾರೆಂದರು. ಯುವಕರು ನಿರ್ವೀರಿಯಾ ರಾಗದೆ ಮನೊ ದೌರ್ಬಲ್ಯವನ್ನು ಗೆಲ್ಲಬೇಕು. ಮೊಬೈಲ್ ನಂತಹ ಆಧುನಿಕ ಅವಿಷ್ಕಾರಗಳು ಮನುಷ್ಯರ ಮಾನವೀಯ ಸಂಬಂಧಗಳನ್ನು ನಾಶಪಡಿಸುತ್ತಿವೆ ಎಂದರು.ವಿಚಾರವಾದಿ ಹಾಗೂ ನಿವೃತ್ತ ಪ್ರಾಂಶುಪಾಲ ಜೆ ಯಾದವರಡ್ಡಿ ಮಾತನಾಡಿ ಸ್ವಾಮಿ ವಿವೇಕಾನಂದರು ದರಿದ್ರ ದೇವೋಭವವನ್ನು ಪ್ರತಿಪಾದಿಸಿದರು. ವೇಶ್ಯಯರು, ಭಿಕ್ಷುಕರು, ನಿರ್ರ್ಗತಿಕರಿಗೆ ಮರುಗುವುದೇ ನಿಜವಾದ ಧರ್ಮ ಎಂದಿದ್ದಾರೆ. ಮಾನವೀಯತೆಯನಲ್ಲದೆ ಬೇರೆನನ್ನು ಅವರು ಬೋಧಿಸಲಿಲ್ಲವೆಂದರು. ದೇಶದ ಹೊರಗಡೆ ಭಾರತದ ಶ್ರೇಷ್ಠತೆ ಆಧ್ಯಾತ್ಮಿಕ ಪರಂಪರೆಯನ್ನು ಪ್ರಚಾರ ಮಾಡಿದರೆ ಸಾಮಾಜಿಕ ಪಿಡುಗುಗಳಾದ ಜಾತಿ ವ್ಯವಸ್ಥೆ, ಬಡತನ, ಮೇಲು -ಕೇಳು, ವಿಜ್ಞಾನ ,ಕೈಗಾರಿಕೆ ಉತ್ತೇಜಿಸೋ ಬಗ್ಗೆ ಹಾಗೂ ವಸಾಹತುಶಾಹಿಯನ್ನು ಕೊನೆಗಾಣಿಸುವ ಬಗ್ಗೆ ಭಾಷಣ ಮಾಡುತ್ತಿದ್ದರು ಎಂದರು.ಪ್ರೊ.ಹೆಚ್.ಲಿಂಗಪ್ಪ ಮಾತನಾಡಿ ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್ ಟಾಗೋರ್ ಅವರು ಹೇಳಿದಂತೆ ಭಾರತವನ್ನು ಅರಿಯಬೇಕೆಂದರೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕೆಂದರು. ಮೂರು ವರ್ಷಗಳ ಕಾಲ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಾಲ್ನಗೆಯಲ್ಲಿ ದೇಶ ಸುತ್ತಿದರು ದೇಶದ ತುಂಬಿರುವ ವಿಭಿನ್ನ ಸಂಸ್ಕೃತಿ, ಆಚಾರ -ವಿಚಾರ, ಸಾಮಾಜಿಕ, ಧಾರ್ಮಿಕ ಆಚರಣೆಗಳು, ಅನೇಕ ರಾಜರುಗಳ ಆಡಳಿತ ವೈಕರಿಯನ್ನು ಕಣ್ಣಾರ ಕಂಡರು. ಇದರಿಂದಾಗಿ ಪಾಶ್ಚತ್ಯ ದೇಶಗಳ ರೀತಿಯಲ್ಲಿ ಭಾರತ ವೈಜ್ಞಾನಿಕ ಮನೋ ಭಾವದೊಂದಿಗೆ ಅಭಿವೃದ್ಧಿ ಹೊಂದಬೇಕಾದರೆ ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಬೇಕೆಂದರೆ ಅದು ಯುವಕರಿಂದ ಮಾತ್ರ ಸಾಧ್ಯ ಎಂದು ಭಾವಿಸಿದ್ದರು. ಅದಕ್ಕಾಗಿ ಪ್ರಭುದ್ಧ ಭಾರತ ನಿರ್ಮಾಣವಾಗುವವರೆಗೂ ಏಳಿ,ಎದ್ದೇಳಿ ಗುರಿ ಮುಟ್ಟುವರೆಗೂ ನಿಲ್ಲಬೇಡಿ ಎಂದು ಯುವಕರಿಗೆ ಸ್ವಾಮಿ ವಿವೇಕಾನಂದರು ಕರೆ ನೀಡಿದ್ದರು ಎಂದರು. ವಿದ್ಯಾರ್ಥಿ ಒಕ್ಕೂಟದ ನಾಯಕ ನವೀನ್ ಕುಮಾರ್, ದಲಿತ ಮುಖಂಡ ಭೀಮನ ಕೆರೆ ಶಿವಮೂರ್ತಿ, ಬಿಎಸ್ಐ ಕಾರ್ಯದರ್ಶಿ ಬಾಲನಹಳ್ಳಿ ರಾಮಣ್ಣ, ಜಿಲ್ಲಾ ಖಜಾಂಚಿ ಭೀಮನಕೆರೆ ತಿಪ್ಪೇಸ್ವಾಮಿ, ಬುರುಜನ ರೊಪ್ಪದ ಹನುಮಂತಪ್ಪ ಮಾತನಾಡಿದರು. ಕೋಟೆ ನಾಡು ಬುದ್ಧ ವಿಹಾರದ ಅಧ್ಯಕ್ಷ ಬಿಪಿ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಬೆನಕನಹಳ್ಳಿ ಚಂದ್ರಪ್ಪನವರು ಸ್ವಾಗತಿಸಿದರು.