i
ಜಿಲ್ಲೆಯ ಐವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ?…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಕ್ರಾಂತಿಗೆ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದೆಂದು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ತಿಳಿಸಿದ ಹಿನ್ನಲೆಯಲ್ಲಿ ಕೊನೆಗೂ ಇಂದು ಪಟ್ಟಿ ಬಿಡುಗಡೆಯಾಗುವ ಸಾದ್ಯತೆ ಇದ್ದು, ಶಿವಮೊಗ್ಗದ ಇಬ್ಬರು ಶಾಸಕರು ಸೇರಿದಂತೆ ಐವರಿಗೆ ಈ ಬಾರಿ ನಿಗಮ ಮಂಡಳಿ ಅಧ್ಯಕ್ಷ ಭಾಗ್ಯ ಒದಗಿ ಬಂದಿದೆ ಎನ್ನಲಾಗಿದೆ.
ಬಹುತೇಕ 75-76 ಮಂದಿ ಪಟ್ಟಿ ಫೈನಲ್ ಆಗಿದ್ದು, ಅಷ್ಟು ಜನರ ಹೆಸರಿಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿದೆ. ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ಪಟ್ಟಿ ಬಿಡುಗಡೆ ಆಗಬೇಕಿತ್ತು. ನಿನ್ನೆ ರಾತ್ರಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಹೆಸರು ಫೈನಲ್ ಆಗಿ ಪಟ್ಟಿ ಕೆಪಿಸಿಸಿ ಕಚೇರಿ ತಲುಪಿದೆ.ಅಲ್ಲದೆ ಕಾರ್ಯಕರ್ತರಿಗೂ ಈ ಸಂಬಂಧ ಮಾಹಿತಿ ನೀಡಲಾಗಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, 75 ಮಂದಿಗೆ ಸ್ಥಾನ ಸಿಗಲಿದೆ. ಅದರಲ್ಲಿ ಶಾಸಕರಿಗಿಂತಲೂ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನಮಾನ ನೀಡಲಾಗಿದೆಯಂತೆ. 37 ಶಾಸಕರು ಹಾಗೂ 39 ಕಾರ್ಯಕರ್ತರಿಗೆ ಅವಕಾಶ ದೊರಕಿದೆ ಎನ್ನಲಾಗುತ್ತಿದೆ.
ಕ್ಷಣದಲ್ಲೇ ಪಟ್ಟಿ ಅನೌನ್ಸ್-ಲೋಕಸಭೆ ಚುನಾವಣೆಗೂ ಮುನ್ನವೇ ನಿಗಮ ಮಂಡಳಿಗಳಿಗೆ 36 ಶಾಸಕರು ಹಾಗೂ 39 ಕಾರ್ಯಕರ್ತರಿಗೆ ಸ್ಥಾನ ನೀಡಲಾಗುವುದು. ಈ ಕ್ಷಣದಲ್ಲೇ ಪಟ್ಟಿ ಅನೌನ್ಸ್ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಮಾಧ್ಯಮದವರು ಕೇಳಿದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಿಳಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಈ ಸೆಕೆಂಡ್ ನಲ್ಲಿ ನಿಗಮ ಮಂಡಳಿ ಲಿಸ್ಟ್ ಅನೌನ್ಸ್ ಆಗುತ್ತೆ. 36 ಶಾಸಕರು ಹಾಗೂ 39 ಕಾರ್ಯಕರ್ತರಿಗೆ ಅವಕಾಶ ಕೊಡುತ್ತೇವೆ ಎಂದು ತಿಳಿಸಿದರು. ಲೋಕಸಭೆ ಚುನಾವಣೆಗೆ ಸಚಿವರು ಸ್ಪರ್ಧೆಗೆ ನಿರಾಕರಣೆ ಮಾಡುತ್ತಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ, ಪಕ್ಷ ಹೇಳಿದಂತೆ ಎಲ್ಲರೂ ಕೇಳಬೇಕು. ನಾನು ಕೇಳಬೇಕು, ಅವರು ಕೇಳಬೇಕು ಎಂದರು.
ಶುಕ್ರವಾರ ಕಾಂಗ್ರೆಸ್ ಮೀಟಿಂಗ್ ವಿಚಾರಕ್ಕೆ, ಕಾಂಗ್ರೆಸ್ ಸಭೆ ಭಾರತ್ ಜೋಡೋ ಭವನದಲ್ಲಿ ಇದೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬರ್ತಾ ಇದ್ದಾರೆ. ಈ ಕಾರಣಕ್ಕಾಗಿ ಸಿಎಂ ಕೂಡ ಅಲ್ಲಿ ಇರಬೇಕಾಗುತ್ತೆ. ಹೀಗಾಗಿ ಶುಕ್ರವಾರ ಸಂಜೆ ಸಭೆ ನಡೆಯಲಿದೆ ಎಂದು ತಿಳಿಸಿದರು.
ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುತ್ತಾರಾ? ಎಂಬ ಮಾಧ್ಯಮದವರ ಪ್ರಶ್ನೆಗೆ, ನನಗೆ ಗೊತ್ತಿಲ್ಲ, ನಿಮಗೆ ಗೊತ್ತಿದೆಯಾ? ಎಂದು ಮರು ಪ್ರಶ್ನಿಸಿ ಡಿಕೆ ಶಿವಕುಮಾರ ನಕ್ಕರು.