i
ಜ. 21: ಪ್ರೊ. ಎಂಡಿಎನ್ ಕುರಿತ ನಾಟಕ ಪ್ರದರ್ಶನ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ರೈತ ಸಂಘದ ಸ್ಥಾಪಕ, ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕಾರಣ ವಲಯದಲ್ಲಿ ವೈಚಾರಿಕತೆ ಹೊಂದಿದ್ದ ದಿಟ್ಟ ಹೋರಾಟಗಾರ, ಸರ್ಕಾರವನ್ನೇ ನಡುಗಿಸಬಲ್ಲ ಶಕ್ತಿ ಹೊಂದಿದ್ದ ಪ್ರೊ. ಎಂ. ಡಿ ನಂಜುಂಡಸ್ವಾಮಿ ಅವರ ಧೀಮಂತ ನಾಯಕತ್ವ ಮತ್ತು ಹೋರಾಟಗಳಿಂದ ಪ್ರೇರೇಪಣೆ ಸಾಹಿತಿ ಪ್ರೊ.ನಟರಾಜ್ ಹುಳಿಯಾರ್ ಅವರು ಡೈರೆಕ್ಟ್ ಆಕ್ಷನ್ ಎಂಬ ನಾಟಕ ಬರೆದಿದ್ದು, ಅದು ಜ. ೨೧ರ ಸಂಜೆ ೬ ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಅಭಿನಯಿಸಲ್ಪಡಲಿದೆ.ಪ್ರೆಸ್ ಟ್ರಸ್ಟಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರೈತ ಮುಖಂಡ ಕೆ. ಟಿ. ಗಂಗಾಧರ ಅವರು, ಕರ್ನಾಟಕದ ರೈತರು ಇಂದೂ ಕೂಡ ಸ್ಫೂರ್ತಿ ಪಡೆಯಬೇಕಾಗಿದೆ. ಇಂಥ ಧೀಮಂತ ನಾಯಕನ ಬದುಕು-ಹೋರಾಟಗಳನ್ನು ನಾಟಕ ಪರಿಣಾಮಕಾರಿಯಾಗಿ ಹೇಳಲೆತ್ನಿಸುತ್ತದೆ. ‘ಕಬಡ್ಡಿ‘, ‘ಸಂತೆಯಲ್ಲಿ ನಿಂತ ಕಬೀರ‘ ಮುಂತಾದ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿದ ಸಿನಿಮಾ ನಿರ್ದೇಶಕ ಕಬಡ್ಡಿ ನರೇದ್ರ ಬಾಬು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ನಟ ಸಂಪತ್ ಮೈತ್ರೇಯ ಪ್ರೊ.ನಂಜುಂಡಸ್ವಾಮಿ ಪಾತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರಿನ ‘ನಗ್ನ‘ ಥಿಯೇಟರ್ ಈ ನಾಟಕವನ್ನು ಅಭಿನಯಿಸುತ್ತಿದೆ ಎಂದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಶಿವಮೊಗ್ಗ, ಈ ನಾಟಕ ಪ್ರದರ್ಶನವನ್ನು ಏರ್ಪಡಿಸಿದೆ. ನಾಟಕಕ್ಕೆ ೧೦೦ ರೂ. ಗಳ ಪ್ರವೇಶ ಶುಲ್ಕವಿದೆ. ಎಂದರು.ಎಂಡಿಎನ್ ಚಿಂತನೆ- ಹೋರಾಟಗಳ ಪ್ರೇರಣೆ, ಪ್ರಭಾವಗಳಿಂದ ಕಳೆದ ಎರಡು ಮೂರು ದಶಕಗಳಲ್ಲಿ ನೂರಾರು ಹೊಸ ರೈತ ನಾಯಕರು, ಲಕ್ಷಾಂತರ ರೈತ ಕಾರ್ಯಕರ್ತರು ರಾಜ್ಯಾದ್ಯಂತ ಸೃಷ್ಟಿಯಾಗಿದ್ದಾರೆ. ಇವರಲ್ಲನೇಕರು ತಂತಮ್ಮ ವಲಯಗಳಲ್ಲಿ ಇವತ್ತಿಗೂ ರೈತ ಚಳವಳಿಯನ್ನು ಜೀವಂತವಾಗಿಟ್ಟಿದ್ದಾರೆ. ಧೀಮಂತ ನಾಯಕ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿಯವರ ಹೋರಾಟ-ಮಾತು-ಬರಹಗಳು ಸಾವಿರಾರು ಕಾರ್ಯಕರ್ತರನ್ನು, ಚಿಂತಕರನ್ನು, ಲೇಖಕರನ್ನು ರೂಪಿಸಿವೆ ಎಂದು ವಿವರಿಸಿದರು. ಕರ್ನಾಟಕ ವಿಧಾನಸಭೆಯ ಶಾಸಕರೂ ಆಗಿದ್ದ ಎಂ.ಡಿ.ಎನ್ ರೈತಪರ ಚಿಂತನೆಗಳನ್ನು, ಜಾಗತೀಕರಣದ ದುಷ್ಪರಿಣಾಮಗಳನ್ನು ಕರ್ನಾಟಕದ ಶಾಸನಸಭೆಯಲ್ಲಿ ಗಂಭೀರವಾಗಿ ಮಂಡಿಸಿ ಶಾಸಕರ, ಮಂತ್ರಿಗಳ ಕಣ್ಣು ತೆರೆಸಿದರು. ರೈತ ಚಳುವಳಿಯನ್ನು ವಿಶ್ವ ಮಟ್ಟಕ್ಕೂ ಒಯ್ದರು. ವಿಶ್ವ ರೈತ ನಾಯಕರಾದವರು ಎಂದು ಬಣ್ಣಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಅಂಕಣಕಾರ ಚಂದ್ರೇಗೌಡ ಮತ್ತು ರೈತ ಮುಖಂಡರು ಹಾಜರಿದ್ದರು.