i
ಸ್ವಯಂ ಪ್ರೇರಿತ ರಕ್ತದಾನ ಶಿಬಿರ…
ಚಂದ್ರವಳ್ಳಿ ನ್ಯೂಸ್, ಶಂಕರಘಟ್ಟ:
ಒಂದು ಯುನಿಟ್ ರಕ್ತದಾನ ಮಾಡುವುದರಿಂದ ನಾಲ್ಕು ಜೀವಗಳನ್ನು ಉಳಿಸಲು ಸಾಧ್ಯವಿದೆ. ಕೇವಲ ೨೦ ನಿಮಿಷದಲ್ಲಿ ಮಾಡಬಹುದಾದ ಸಮಾಜ ಸೇವೆಯೆಂದರೆ ಅದು ರಕ್ತದಾನ ಮಾತ್ರ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್ ವೆಂಕಟೇಶ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕ, ಶಿವಮೊಗ್ಗದ ಆಶಾ ಜ್ಯೋತಿ ಸಂಜೀವಿನಿ ರಕ್ತ ಕೇಂದ್ರ, ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರಗಳು ಜಂಟಿಯಾಗಿ ವಿವಿಯ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ತಂತ್ರಜ್ಞಾನದಲ್ಲಿ ಒಂದು ಯುನಿಟ್ (೩೫೦ ಮಿ.ಲೀ.) ರಕ್ತವನ್ನು ಕೆಂಪು, ಬಿಳಿ ರಕ್ತ ಕಣಗಳು, ಪ್ಲಾಟೆಲೆಟ್ಗಳು ಮತ್ತು ಪ್ಲಾಸ್ಮಾ ಸೇರಿದಂತೆ ನಾಲ್ಕು ಭಾಗಗಳಾಗಿ ವಿಂಗಡಿಸಿ ಅವಶ್ಯವಿರುವವರಿಗೆ ಸಂಬಂಧಿತ ರಕ್ತದ ಅಂಶವನ್ನು ನೀಡಲಾಗುತ್ತದೆ ಎಂದರು.ಮನುಷ್ಯನ ದೇಹದಲ್ಲಿ ಪ್ರತಿದಿನ ೧೦೦ ಮಿ.ಲೀ. ರಕ್ತ ಉತ್ಪಾದನೆಯಾಗುತ್ತದೆ. ೧೨೦ ದಿನಗಳ ನಂತರ ಆ ರಕ್ತ ಕಣಗಳು ಸಾಯುತ್ತವೆ. ರಕ್ತದಾನ ಮಾಡುವುದರಿಂದ ರಕ್ತ ಕಣಗಳು ವ್ಯರ್ಥವಾಗುವುದನ್ನುತಡೆಯಬಹುದು ಹಾಗೂ ಹೆಚ್ಚೆಚ್ಚು ಹೊಸ ರಕ್ತ ಉತ್ಪಾದನೆಯಾಗುತ್ತದೆ ಎಂದು ಪ್ರೊ. ಎಸ್ ವೆಂಕಟೇಶ್ ಸಲಹೆಯಿತ್ತರು.ಈ ಸಂದರ್ಭದಲ್ಲಿ ವಿವಿಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ರವೀಂದ್ರಗೌಡ ಎಸ್ ಎಂ, ಡಾ. ಎನ್ ಡಿ ವೀರೂಪಾಕ್ಷ, ಡಾ. ಗಜಾನನ ಪ್ರಭು, ಉಪನ್ಯಾಸಕರಾದ ಶಂಕರ್ಗುರು, ಸತ್ಯನಾರಾಯಣ್, ಸಂಪತ್ಕುಮಾರ್ ಸೇರಿದಂತೆ ವಿವಿಯ ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.