i
ಮದ್ಯದಂಗಡಿ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ…
ಚಂದ್ರವಳ್ಳಿ ನ್ಯೂಸ್, ಸೊರಬ:
ತಾಲೂಕಿನ ಮಾವಲಿ ಗ್ರಾಮದಲ್ಲಿ ಶಾಲೆಗೆ ಹಾದು ಹೋಗುವ ದಾರಿ ಮಧ್ಯದಲ್ಲಿ ಮದ್ಯದಂಗಡಿ ತೆರೆದಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾವಲಿ ಗ್ರಾಮದ ರೇಣುಕಮ್ಮ ಮಾತನಾಡಿ, ಸೊರಬ-ಶಿರಾಳಕೊಪ್ಪ ಮಾರ್ಗದ ಮುಖ್ಯರಸ್ತೆಯಲ್ಲಿರುವ ಮಾವಲಿ ಗ್ರಾಮದ ಶ್ರೀ ಉಮಾಮಹೇಶ್ವರ ಪ್ರೌಢಶಾಲೆಗೆ ಯಲವಳ್ಳಿ, ಜಿರಲೇಕೊಪ್ಪ, ಮನಮನೆ, ಗದ್ದೆಮನೆ, ಚನ್ನಾಪುರ, ಬಿಳವಾಣಿ ಸೇರಿದಂತೆ ಸುಮಾರು ೧೦ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿನಿತ್ಯ ನೂತನವಾಗಿ ತಲೆ ಎತ್ತಿರುವ ಬಾರ್ – ರೆಸ್ಟೋರೆಂಟ್ ಎದುರಿನಿಂದ ಹಾದು ಶಾಲೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಮದ್ಯದ ಘಾಟು, ಪಾನಮತ್ತರಿಂದ ಬರುವ ಅವಾಚ್ಯ ಶಬ್ದಗಳಿಂದ ಸಭ್ಯರು ಈ ರಸ್ತೆಯಲ್ಲಿ ಓಡಾಡುವುದಕ್ಕೆ ತಡೆಯಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೆಸ್ಟೋರೆಂಟ್ನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಬಕಾರಿ ಇನ್ಸ್ಪೆಕ್ಟರ್ ಶ್ರೀನಾಥ್, ಸ್ಥಳೀಯ ಗ್ರಾಮ ಪಂಚಾಯಿತಿ ಅನುಮತಿ ಪಡೆದು ಇಲಾಖೆಯ ಹಿರಿಯ ಅಧಿಕಾರಿಗಳು ಕಾನೂನು ಬದ್ಧವಾಗಿ ಬಾರ್ & ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿದ್ದಾರೆ. ಇದಕ್ಕೆ ಆಕ್ಷೇಪ, ಪ್ರತಿಭಟನೆ ನಡೆಸುವ ಅವಶ್ಯಕತೆ ಇಲ್ಲ. ಸೂಕ್ತ ಜಾಗದಲ್ಲಿ ಇಲಾಖೆ ಯಾರಿಗೂ ತೊಂದರೆ ಆಗದಂತೆ ಅವಕಾಶ ನೀಡಿದೆ ಎಂದು ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು.
ಮನವೊಲಿಕೆ ವರ್ತನೆಗೆ ಕೆರಳಿದ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಮದ್ಯ ಮಾರಾಟ ಅಂಗಡಿಗೆ ಪರವಾನಗಿ ನೀಡಿರುವುದರಿಂದ ಗ್ರಾಮದಲ್ಲಿ ನೆಮ್ಮದಿ ಹಾಳಾಗಿದೆ. ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತಲೆ ತಗ್ಗಿಸಿ ಭಯದ ವಾತಾವರಣದಲ್ಲಿ ನಡೆದಾಡುವ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಾಲಾ ಸುತ್ತಮುತ್ತಲಿನ ಪ್ರದೇಶದಲ್ಲಿ ಬಾರ್ ತೆರೆಯಲು ಅವಕಾಶ ನೀಡದೇ ಬೇರೆಡೆಗೆ ಸ್ಥಳಾಂತರಿಸಬೇಕು. ಇದಕ್ಕೆ ತಮ್ಮ ತಕರಾರು ಇಲ್ಲ ಎಂದು ಪಟ್ಟು ಹಿಡಿದರು. ನಂತರ ಅಧಿಕಾರಿಗಳು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಾವಲಿ ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ರೇಣುಕಮ್ಮ, ಮಂಜುಳಾ ಪ್ರಕಾಶಗೌಡ, ತೋಪಪ್ಪ, ಕೆರಿಯಪ್ಪ, ಗುತ್ಯಮ್ಮ, ನಾಗರತ್ನ, ಗೌರಮ್ಮ, ಶಶಿಕಲಾ, ನಾಗವೇಣಿ, ಮೀನಾಕ್ಷಮ್ಮ, ರೇಣುಕಮ್ಮ, ಲಕ್ಷ್ಮಮ್ಮ, ದುರ್ಗಮ್ಮ, ಸವಿತಾ, ಸುಶೀಲಾ, ಜಯಮ್ಮ ಮೊದಲಾದವರು ಇದ್ದರು.