i
ಸ್ವಯಂ ಪ್ರೇರಿತ ಚಿತ್ರದುರ್ಗ ಬಂದ್ ಇಂದು, ಬಿಜೆಪಿ ಜೆಡಿಎಸ್ ಬೆಂಬಲ ಘೋಷಣೆ…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎನ್ನುವ ಉದ್ದೇಶದೊಂದಿಗೆ ಜನವರಿ-23 ರಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕರೆ ನೀಡಿದ್ದು ಈ ಕರೆಗೆ ಬೆಂಬಲವಾಗಿ 24 ಸಂಘ ಸಂಸ್ಥೆಗಳು, ಬಿಜೆಪಿ, ಜೆಡಿಎಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ಬೆಂಬಲ ಘೋಷಿಸಿವೆ.
ಭದ್ರಾ ನೀರಿನ ಹಕ್ಕಿಗಾಗಿ ಐದಾರು ದಶಕಗಳಿಂದ ನಿಸ್ವಾರ್ಥತೆಯಿಂದ ಹೋರಾಟ ಮಾಡಿದ ಅನೇಕ ಸಂಘ ಸಂಸ್ಥೆಗಳು, ನೀರಾವರಿ ಹೋರಾಟ ಸಮಿತಿ, ಪತ್ರಕರ್ತರು, ರೈತ ಸಂಘ, ಎರೆನಾಡು ರೈತ ಸಂಘ, ಸ್ವಾತಂತ್ರ್ಯ ಹೋರಾಟಗಾರರು ಸಾರ್ವಜನಿಕರು, ಜನ ಸಮುದಾಯಗಳ 5-6 ದಶಕಗಳ ಹೋರಾಟದ ಫಲವಾಗಿ ಕಾಂಗ್ರೆಸ್ ಪಕ್ಷ ನೇತೃತ್ವದ ಎಸ್.ಎಂ.ಕೃಷ್ಣ ಸರ್ಕಾರ 2002ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಆರಂಭಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಿತು.
ಆದರೆ ಭದ್ರಾ ನೀರಿನ ಫಲಾನುಭವಿಗಳಾದ ದಾವಣಗೆರೆ, ಅವಿಭಜಿತ ಶಿವಮೊಗ್ಗ ಜಿಲ್ಲೆಯವರಿಂದ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಿರೋಧಿಸತೊಡಗಿದರು. ಆ ಯೋಜನೆ ಅಲ್ಲಿಗೆ ನಿಂತಂತೆ ಕಂಡು ಬಂದಿತು. ಆದರೆ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ವತಿಯಿಂದ ನಡೆದ ಹೋರಾಟಕ್ಕೆ ಒಂದಿಷ್ಟು ಶಕ್ತಿ ಬಂದಿತು. ಅಂದು 2006-07ರಲ್ಲಿ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾರ್ಯಗತ ಮಾಡಲಾಗುತ್ತದೆ, ಹೋರಾಟ ಸ್ಥಗಿತಗೊಳಿಸಿ, ಸರ್ಕಾರ ನಿಮ್ಮ ಜೊತೆಗಿದೆ ಎಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಭರವಸೆ ನೀಡಿದಷ್ಟೇ ಅಲ್ಲ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ರೈತರ ವಿರೋಧ ತಣಿಸುವ ಕಾರ್ಯಕ್ಕೆ ಮುಂದಾಗಿ 900 ಕೋಟಿ ರೂ.ಗಳನ್ನು ಭದ್ರಾ ಕಾಲುವೆಗಳ ಆಧುನಿಕರಣಕ್ಕೆ ಬಿಡುಗಡೆ ಮಾಡಿದರು. ಅಷ್ಟೇ ಅಲ್ಲ ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ನೇಮಕ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದರು. ಸಮಿತಿಯ ಅಧ್ಯಕ್ಷರಾಗಿದ್ದ ಕೆ.ಸಿ.ರೆಡ್ಡಿ ಅವರು ಕೋಲಾರ ಜಿಲ್ಲೆಗೆ ಸೇರಿದವರಾಗಿದ್ದು ಭದ್ರಾ ನೀರನ್ನು ಕೋಲಾರದ ತನಕ ತೆಗೆದುಕೊಂಡು ಹೋಗಬಹುದು, ಯೋಜನೆ ಅನುಷ್ಠಾನಕ್ಕೆ ತೊಂದರೆ ಇಲ್ಲ, ಭದ್ರಾ ಜಲನಯನ ಪ್ರದೇಶದಲ್ಲಿ ಸಾಕಷ್ಟು ನೀರಿನ ಲಭ್ಯ ಇದೆ ಎನ್ನುವ ವರದಿ ನೀಡಿದರು. ಕೆ.ಸಿ.ರೆಡ್ಡಿ ನೀಡಿದ ವರದಿಯನ್ನು ಸಂಪುಟಕ್ಕೆ ತಂದು ಒಪ್ಪಿಗೆ ನೀಡಿದಲ್ಲದೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದರು. ಆ ವೇಳೆಗೆ ಕುಮಾರಸ್ವಾಮಿ ಸರ್ಕಾರ ಬಿದ್ದು ಹೋಗಿ ಬಿಜೆಪಿ ನೇತೃತ್ವದ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಿತ್ತು.
ಕೆ.ಸಿ.ರೆಡ್ಡಿ ವರದಿಯಲ್ಲಿ ವಾಣಿ ವಿಲಾಸ ಸಾಗರಕ್ಕೆ ಹನಿ ನೀರು ಹಂಚಿಕೆ ಆಗದಿದ್ದಾಗ ಹಿರಿಯೂರಿನಲ್ಲಿ ರೈತ ಸಂಘದ ನೇತೃತ್ವದಲ್ಲಿ ನಡೆದ 542 ದಿನಗಳ ಹೋರಾಟ, ಮಹಿಳೆಯರು ಪ್ರಾಣದ ಹಂಗು ತೊರೆದು ನಡೆಸಿದ ಉಪವಾಸ ಸತ್ಯಾಗ್ರಹ, ತೀವ್ರ ತರಹದ ಹೋರಾಟಗಳಿಂದಾಗಿ 2 ಟಿಎಂಸಿ ನೀರನ್ನ ಹಂಚಿಕೆ ಮಾಡಲಾಯಿತು.
ಆಗ ಅಧಿಕಾರಕ್ಕೆ ಬಂದ ಸಿಎಂ ಯಡಿಯೂರಪ್ಪ ತಡ ಮಾಡದೆ ಭದ್ರಾ ಮೇಲ್ದಂಡೆ ಯೋಜನೆಗೆ ಶಂಕು ಸ್ಥಾಪನೆ ಮಾಡಿ ಮೂರು ಪ್ಯಾಕೇಜ್ ನಲ್ಲಿ ಕಾಮಗಾರಿ ಮಾಡಲು 2008ರಲ್ಲಿ ಚಾಲನೆ ನೀಡಿದರು. ಇವರ ನಂತರ ಅಧಿಕಾರಕ್ಕೆ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ 2013-2018ರ ಅವಧಿಯಲ್ಲಿ ಯೋಜನೆಗೆ ಚುರುಕು ಮುಟ್ಟಿಸಿತು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಆರಂಭವಾಗಿ ದಶಕಗಳಿಂದ ಕುಂಟುತ್ತ ತೆವಳುತ್ತ ಸಾಗಿರುವುದು ನಾವೆಲ್ಲ ಬಲ್ಲ ಸಂಗತಿ.
ಇನ್ನೂ ದಾವಣಗೆರೆ ಪ್ರತ್ಯೇಕ ಜಿಲ್ಲೆಯಾಗಿರದೆ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ಕಾಲದಿಂದಲೂ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಎಸ್.ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದ ಅರವತ್ತರ ದಶಕದಿಂದಲೂ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಬರಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತ ಇದ್ದವು. ಮಾಜಿ ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಹೆಚ್.ಡಿ.ದೇವೇಗೌಡ, ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಹುತೇಕ ಪ್ರಧಾನ ಮಂತ್ರಿಗಳು ಭದ್ರಾ ಮೇಲ್ದಂಡೆ ಯೋಜನೆ ಕುರಿತು ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದಾರೆ. ಇನ್ನೇನು ಜಾರಿಗೆ ಬಂದೇ ಬಿಟ್ಟಿತು ಎಂಬಂತೆ ಚುನಾವಣಾ ಪೂರ್ವದಲ್ಲಿ ಪ್ರಚಾರ ಪಡೆದ, ಚುನಾವಣೆ ಮುಗಿದ ಬಳಿಕ ಮರೆತುಹೋದ ನತದೃಷ್ಟ ಭದ್ರಾ ಮೇಲ್ದಂಡೆ ಯೋಜನೆ ಎಂದರೆ ತಪ್ಪಾಗಲಾರದು. ಇಂದಲ್ಲ ನಾಳೆ ಬಯಲು ಸೀಮೆಯ ಬರ ಪೀಡಿತ ಜಿಲ್ಲೆಗಳ ಹೊಲಗದ್ದೆಗಳಿಗೆ ಭದ್ರಾ ನೀರು ನೀರು ಹರಿದೀತೆಂದು ಜನ ಸಮುದಾಯ ಕನವರಿಸುತ್ತ ತಾವು ಕಾಣುತ್ತಿರುವ ಕನಸು ಮೊಮ್ಮಕ್ಕಳ ಕಾಲಕ್ಕಾದರೂ ನನಸಾದೀತೆಂಬ ಆಸೆಯನ್ನು ಇಟ್ಟುಕೊಂಡಿದ್ದಕ್ಕೆ ಕಾರಣ ರಾಜಕಾರಣ ನೀಡುತ್ತ ಬಂದ ಭರವಸೆ. ಬಯಲು ಸೀಮೆಗೆ ನೀರು ಹರಿಸಿ ಎಂದು ಬದ್ಧತೆಯಿಂದ ಪ್ರಶ್ನೆ ಮಾಡದ ಜನಪ್ರತಿನಿಧಿಗಳ ಸುಳ್ಳಾಟ-ಕಳ್ಳಾಟಕ್ಕೆ ಬಯಲು ಸೀಮೆ ಚಿತ್ರದುರ್ಗ, ತುಮಕೂರು, ದಾವಣಗೆರೆಯ ಜಗಳೂರು, ಚಿಕ್ಕಮಗಳೂರಿನ ತರೀಕೆರೆ, ಕಡೂರು ತಾಲೂಕುಗಳು ನೀರಾವರಿ ಸೌಲಭ್ಯದಿಂದ ವಂಚಿತ ಆಗಿದ್ದವು. ಅಲ್ಲದೆ ಹೊಸದುರ್ಗದವರು ಎಸ್.ನಿಜಲಿಂಗಪ್ಪ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಸಿಟ್ಟಿಗೆ ತುಂಗ ಭದ್ರಾ ನೀರನ್ನು ಹರಿಹರ-ದಾವಣಗೆರೆ ಆಚೆಗೆ ಹರಿಸಿದ್ದು ಹೌದು.1997ರಲ್ಲಿ ಮುಖ್ಯಮಂತ್ರಿ ಆಗಿದ್ದ ಜೆ.ಹೆಚ್.ಪಟೇಲ್ ಅವರು ಭದ್ರಾ ಡ್ಯಾಂನಲ್ಲಿ ನೀರೆಲ್ಲಿದೆ, ಎದ್ರೂ ಉಚ್ಚೆ ಹೊಯ್ದು ನೀರು ತುಂಬಿಸಬೇಕು ಎಂದು ಹಾಸ್ಯಭರಿತವಾಗಿ ವ್ಯಂಗ್ಯ ಮಾಡಿದ್ದು ಉಂಟು. ಇದ್ಯಾವುದಕ್ಕೂ ಹೋರಾಟಗಾರರು ಜಗ್ಗದೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದರಿಂದಾಗಿ ಇಂದು ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಆಗುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸುದ್ದಿ 2002ದಲ್ಲಿ ಮೊದಲಿಗೆ ಬಂದಾಗ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಮುಳುಗಡೆ ಪುನರ್ವಸತಿ ಸಮಸ್ಯೆ ದೊಡ್ಡ ಆತಂಕ ಸೃಷ್ಟಿಸಿತ್ತು. ತುಂಗಾ ಮತ್ತು ಭದ್ರಾದಿಂದ ನೀರನ್ನು ಎತ್ತಿ ಹರಿಸುವ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬ ವಾದವೂ ಇತ್ತು. ತುಂಗಾ ಮತ್ತು ಭದ್ರಾ ನೀರಿನ ಪಾರಂಪರಿಕ ಫಲಾನುಭವಿಗಳು ಯೋಜನೆಯಿಂದ ತಮಗೆ ನೀರಿನ ಕೊರತೆ ಕಾಡೀತೆಂಬ ಆತಂಕದಲ್ಲಿ ವಿರೋಧ ಮಾಡಿದ್ದೂ ಆಯಿತು.
ಈ ಎರಡು ನದಿಗಳಲ್ಲಿ ಲಭ್ಯವಿರುವ ವಾರ್ಷಿಕ ನೀರು ಎಷ್ಟು, ಅದರಲ್ಲಿ ಬಳಕೆಯಾಗದೆ ಹರಿದು ಹೋಗಿ ರಾಜ್ಯದ ಪಾಲಿಗೆ ನಷ್ಟವಾಗುವ ನೀರೆಷ್ಟು ಎಂಬಿತ್ಯಾದಿ ದಾಖಲೆಯನ್ನು ಸರ್ಕಾರ ಒದಗಿಸಿ ಪ್ರತಿರೋಧ ಶಮನ ಮಾಡಬೇಕಾಯಿತು. ಎಂದೋ ಜನರಲ್ಲಿ ಹುಟ್ಟಿಕೊಂಡ ಭರವಸೆ ಇದೀಗ ಸಾಕಾರವಾಗುವ ಘಟ್ಟಕ್ಕೆ ಬಂದು ನಿಂತಿದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಚಿಕ್ಕಮಗಳೂರು 2. 25 ಲಕ್ಷ ಹೆಕ್ಟೇರಿಗೂ ಹೆಚ್ಚು ಭೂಮಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಎಂಬ ಈ ಯೋಜನೆಯ ಅಂದಾಜು ವೆಚ್ಚ ಕಾಮಗಾರಿ ವಿಳಂಬದಿಂದಾಗಿ 21 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಯೋಜನೆಯ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಸುವ ಹೊತ್ತಿಗೆ ಯೋಜನಾ ವೆಚ್ಚದಲ್ಲಿ ಇನ್ನೆಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು ಇದಕ್ಕೆ ಅವಕಾಶ ನೀಡದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕಿದೆ.
ಏನಿದು ಭದ್ರಾ ಯೋಜನೆ-
ಭದ್ರಾ ಮೇಲ್ದಂಡೆ ಯೋಜನೆಯಡಿ ಒಟ್ಟು 29.90 ಟಿ.ಎಂ.ಸಿ. ನೀರಿನ ಬಳಕೆಯೊಂದಿಗೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ 5,57,022 ಎಕರೆ (2,25,515 ಹೆಕ್ಟೇರ್) ಭೂಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಮತ್ತು ಇದೇ ಜಿಲ್ಲೆಗಳ 367 ಸಣ್ಣ ನೀರಾವರಿ ಕೆರೆಗಳನ್ನು ಅವುಗಳ ಸಾಮಥ್ರ್ಯದ ಶೇ. 50 ರಷ್ಟನ್ನು ತುಂಬಿಸಲು ಉದ್ದೇಶಿಸಲಾಗಿದೆ.ಸದರಿ ಯೋಜನೆಗೆ ಸರ್ಕಾರದ ಆದೇಶ ಸಂಖ್ಯೆ: WRD 166 VBYE 2020 (ಭಾ-1) ಬೆಂಗಳೂರು ದಿನಾಂಕ 16.12.2020 ರಡಿ ರೂ. 21473.67 ಕೋಟಿಗಳ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.ಸದರಿ ಯೋಜನೆಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗಿದ್ದು, ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.ಮೊದಲನೇ ಹಂತ-ಪ್ಯಾಕೇಜ್-I:ತುಂಗಾ ನದಿಯಿಂದ17.40 ಟಿ.ಎಂ.ಸಿ ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಭದ್ರಾ ಜಲಾಶಯಕ್ಕೆ ನೀರು ಹರಿಸುವ, ಕಾಮಗಾರಿ ಪ್ರಗತಿಯಲ್ಲಿದೆ.ಪ್ಯಾಕೇಜ್-II: ಭದ್ರಾ ಜಲಾಶಯದಿಂದ 29.90 ಟಿ.ಎಂ.ಸಿ. ನೀರನ್ನು ಎರಡು ಹಂತಗಳಲ್ಲಿ ಲಿಫ್ಟ್ ಮಾಡಿ ಅಜ್ಜಂಪುರ ಸುರಂಗದವರೆಗೆ ಕೊಂಡೊಯ್ಯುವ ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿರುತ್ತವೆ.
ಪ್ಯಾಕೇಜ್-III: ಅಜ್ಜ೦ಪುರ ಸುರಂಗ ಮಾರ್ಗದ ಮೂಲಕ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ತುಮಕೂರು ಶಾಖಾ ಕಾಲುವೆಗಳಿಗೆ ನೀರು ಹರಿಸುವ, ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿರುತ್ತವೆ.
ಎರಡನೇ ಹಂತ-ತರೀಕೆರೆ ಏತ ನೀರಾವರಿ: ತರೀಕೆರೆ ತಾಲ್ಲೂಕಿನ 20,150 ಹೇಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಮೂಲಕ ನೀರನ್ನು ಒದಗಿಸುವುದು ಹಾಗೂ 79 ಕೆರೆಗಳನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು 02 ಪ್ಯಾಕೇಜ್ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.ಚಿತ್ರದುರ್ಗ ಶಾಖಾ ಕಾಲುವೆ: 134.597 ಕಿ.ಮೀ ಉದ್ದದ ಕಾಲುವೆ ಮುಖಾಂತರ ಚಿಕ್ಕಮಗಳೂರು ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 1,07,265 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸಿ 157 ಕೆರೆಗಳಿಗೆ ನೀರನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು 12 ಪ್ಯಾಕೇಜ್ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.ತುಮಕೂರು ಶಾಖಾ ಕಾಲುವೆ: 159.684 ಕಿ.ಮೀ. ಉದ್ದದ ಕಾಲುವೆ ಮುಖಾಂತರ ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 84,900 ಹೆಕ್ಟೇರ್ ಕ್ಷೇತ್ರಕ್ಕೆ ಹನಿ ನೀರಾವರಿ ಕಲ್ಪಿಸಿ 131 ಕೆರೆಗಳಿಗೆ ನೀರನ್ನು ತುಂಬಿಸುವುದು. ಪ್ರಸ್ತುತ ಕಾಮಗಾರಿಗಳನ್ನು 09 ಪ್ಯಾಕೇಜ್ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.ಹನಿ ನೀರಾವರಿ: ಚಿತ್ರದುರ್ಗ ಶಾಖಾ ಕಾಲುವೆಯ 40749 ಹೆ. ಪ್ರದೇಶಕ್ಕೆ, ತುಮಕೂರು ಶಾಖಾ ಕಾಲುವೆಯಡಿ 27590 ಹೆ. ಪ್ರದೇಶಕ್ಕೆ ಮತ್ತು ಜಗಳೂರು ಶಾಖಾ ಕಾಲುವೆಯಡಿ 24123 ಹೆ. ಪ್ರದೇಶಕ್ಕೆ ಹನಿ ನೀರವಾರಿ ಸೌಲಭ್ಯ ಕಲ್ಪಿಸುವ ಮತ್ತು ಕೆರೆ ತುಂಬಿಸುವ ಕಾಮಗಾರಿಗಳನ್ನು 07 ಪ್ಯಾಕೇಜ್ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.ಕೆರೆ ತುಂಬಿಸುವ ಕಾಮಗಾರಿಗಳು:
ಚಿತ್ರದುರ್ಗ ಶಾಖಾ ಕಾಲುವೆಯಿಂದ ಕವಲೊಡೆಯುವ ಹೊಳಲ್ಕೆರೆ, ಪಾವಗಡ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಹಾಗೂ ತುಮಕೂರು ಶಾಖಾ ಕಾಲುವೆಯಿಂದ ಕವಲೊಡೆಯುವ ಶಿರಾ, ಹಿರಿಯೂರು ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಫೀಡರ್ ಕಾಮಗಾರಿಗಳನ್ನು ೦೯ ಪ್ಯಾಕೇಜ್ಗಳನ್ನಾಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.ಭದ್ರಾ ಮೇಲ್ದಂಡೆ ಕಾಮಗಾರಿ ತೊಡಕುಗಳು-
ಭದ್ರಾ ಮೇಲ್ದಂಡೆ ಯೋಜನೆ ಬಯಲು ಸೀಮೆಯ ಜನರ ಬಹು ದಶಕಗಳ ಕನಸು. ಜನಪ್ರಧಿನಿಧಿಗಳ ಹಗ್ಗಜಗ್ಗಾಟದಿಂದಾಗಿ ಭದ್ರಾ ಯೋಜನೆ ಬಹುತೇಕ ಸ್ಥಗಿತಗೊಂಡಿದೆ. ಎರಡು ದಶಕ ಕಳೆದರೂ ಕಾಮಗಾರಿ ಮಾತ್ರ ಪುರ್ಣಗೊಂಡಿಲ್ಲ. ಕುಂಟುತ್ತಾ ತೆವಳುತ್ತಾ ಸಾಗಿರುವ ಭದ್ರಾ ಯೋಜನೆ ಅನುಷ್ಠಾನಕ್ಕೆ ಅನುದಾನ ಕೊರತೆ, ಬಿಲ್ ಪೆಂಡಿಂಗ್ ಕಾರಣಕ್ಕೆ ಬಹುತೇಕ ಕಾಮಗಾರಿ ಸ್ಥಗಿತಗೊಂಡಿದೆ. ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಪ್ರತಿಷ್ಠೆ ಬಿಟ್ಟು ಬಯಲು ಸೀಮೆಯ ನಾಡಿಗೆ ಭದ್ರೆ ಹರಿಸಲು ತ್ವರಿತಗತಿಯ ಪರಿಹಾರ ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಯಾವುದೇ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು ಇಷ್ಟೊಂದು ಸುದೀರ್ಘ ಸಮಯ ತೆಗೆದುಕೊಂಡಿಲ್ಲ. ನಮ್ಮನಾಳುವ ಸರ್ಕಾರಗಳ ಇಚ್ಚಾ ಶಕ್ತಿ ಕೊರತೆ, ರೈತ ವಿರೋಧಿ ನಿಲವು, ಸುಳ್ಳಿನ ರಾಜಕಾರಣ ಇದಕ್ಕೆ ಪ್ರಮುಖ ಕಾರಣವಾಗಿದೆ.
ಅಜ್ಜಂಪುರ ಅಬ್ಬಿನಹೊಳಲು ಬಳಿ ಒಂದುವರೆ ಕಿಮೀ ಭೂ ಸ್ವಾಧೀನಕ್ಕೆ ಅಡ್ಡಿಯಾಗಿದ್ದು ರಾಜಕಾರಣಿಗಳೇ ತೊಡರುಗಾಲು ಹಾಕಿ ಬಯಲು ಸೀಮೆಗೆ ಪರಮ ಅನ್ಯಾಯ ಎಸಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಒಂದುವರೆ ಕಿಮೀ ಭೂಮಿ ಸ್ವಾಧೀನ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದು ಆಡಳಿತ ರೂಢರಿಗೆ ನಾಚಿಕೆಗೇಡಿನ ಸಂಗತಿ. ಓರ್ವ ಶಾಸಕನ ಮುಂದೆ ಇಡೀ ಸರ್ಕಾರವೇ ಮಂಡಿಯೂರಿರುವುದು ಪ್ರಜಾಪ್ರಭುತ್ವದ ದುರಂತ. ಒಂದುವರೆ ಕಿಮೀ ಭೂ ಸ್ವಾಧೀನವಾಗಿದ್ದರೆ ಕಳೆದ ವರ್ಷವೇ ಇಡೀ ಹೊಳಲ್ಕೆರೆ ತಾಲೂಕಿನ ಕೆರೆಗಳ ತುಂಬಿಸಬಹುದಿತ್ತು. ಎತ್ತಿನಹೊಳೆ ಯೋಜನೆಗೆ ದುಡ್ಡು ಸುರಿಯುತ್ತಿರುವ ರಾಜ್ಯ ಸರ್ಕಾರ ಭದ್ರಾಮೇಲ್ದಂಡೆ ಯೋಜನೆ ಉದಾಸೀನ ತೋರಿದೆ. ಈ ಭಾಗದ ಜನಪ್ರತಿನಿಧಿಗಳು ತಮ್ಮ ಹೇಡಿತನ, ಅಧಿಕಾರ ದಾಹ ತೊರೆದು ಭದ್ರಾ ಯೋಜನೆ ಪರವಾಗಿ ದನಿ ಎತ್ತಬೇಕಿದೆ.
ಇನ್ನೂ ಭದ್ರಾ ಕಾಮಗಾರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕಮಿಷನ್ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದು ಬಯಲು ಸೀಮೆಯ ಜನರ ಸ್ಥಿತಿ ಇಬ್ಬರ ನಡುವೆ ಕೂಸು ಬಡವಾಯಿತು ಎಂಬಂತಾಗಿದೆ.
ಅನುದಾನ ಕೊರತೆ, ಬಿಲ್ ಪೆಂಡಿಂಗ್ ಕಾರಣಕ್ಕೆ ಬಹುತೇಕ ಕಾಮಗಾರಿ ಸ್ಥಗಿತಗೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಬಿಡುಗಡೆ ಆಗಬೇಕಿರುವ 1950 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ಬಾಕಿ ಇರಿಸಿಕೊಂಡಿದೆ. ಕಮಿಷನ್ ಬಂದ ಬಳಿಕ ಹಣ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಕಮಿಷನ್ ಕಲೆಕ್ಷನ್ ಗಾಗಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಚಿತ್ರದುರ್ಗದ ಬಿಜೆಪಿ ಸಂಸದ , ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ರಾಜ್ಯ ಸರ್ಕಾರ, ಸಚಿವರು ಮತ್ತು ಶಾಸಕರ ವಿರುದ್ಧ ಹೆಸರು ಪ್ರಸ್ತಾಪಿಸದೆ ಆರೋಪಿಸಿದ್ದು ಯೋಜನೆಯ ಮಂದಗತಿ ನಡೆಗೆ ಸಾಕ್ಷಿಯಾಗಿದೆ.
ಭದ್ರಾ ಯೋಜನೆಗೆ ಹಣ ಬಿಡುಗಡೆಗೆ ಕಮಿಷನ್ ಕಲೆಕ್ಷನ್ಗೆ ಡಿಮ್ಯಾಂಡ್ ಮಾಡುತ್ತಿದ್ದಾರೆಂಬ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿರುಗೇಟು ನೀಡಿದ್ದು ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಭದ್ರಾ ಯೋಜನೆಗೆ 5300 ಕೋಟಿ ರೂ. ಘೋಷಣೆ ಮಾಡಿದ್ದು ಮೊದಲು ಬಿಡುಗಡೆ ಮಾಡಿಸಲಿ. ನಾವು 2 ಸಾವಿರ ಕೋಟಿ ರೂ. ಹಣವಿಟ್ಟುಕೊಂಡಿದ್ದೇವೆ. ಒಂದು ವರ್ಷದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.ಭದ್ರಾ ಮೇಲ್ದಂಡೆ ಯೋಜನೆಗೆ ನಾನಾ ತೊಡಕುಗಳು ಎದುರಾಗಿವೆ. ಒಂದು ಕಡೆ ಅನುದಾನದ ಕೊರತೆ. ಮತ್ತೊಂದು ಕಡೆ ಬಿಲ್ ಬಾಕಿ ಉಳಿದಿದ್ದು ಕಾಮಗಾರಿ ಸ್ಥಗಿತಗೊಂಡಿದೆ. ಅಬ್ಬಿನಹೊಳೆ ಬಳಿ ಭೂಸ್ವಾಧೀನ ಪ್ರಕ್ರಿಯೆಯೂ ಹಾಗೆ ಉಳಿದಿದೆ. ತರೀಕೆರೆ, ಕಡೂರು ಹಾಗೂ ಅಜ್ಜಂಪುರದಲ್ಲಿ 220ಕ್ಕೂ ಹೆಚ್ಚು ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಹಣವನ್ನು ಪರಿಹಾರ ಕೋರಿ ಚಿಕ್ಕಮಂಗಳೂರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಮೊಕದ್ದಮೆಗಳನ್ನು ಆದಷ್ಟು ಶೀಘ್ರವಾಗಿ ಇತ್ಯರ್ಥಪಡಿಸಿದರೆ ಯೋಜನೆಗೆ ವೇಗ ಸಿಗಲಿದೆ ಎಂದು ನೀರಾವರಿ ನಿಗಮದ ವ್ಯವಸ್ಥಾಪಕ ಸಣ್ಣ ಚಿತ್ತಯ್ಯ ಮಾಹಿತಿ ನೀಡಿದ್ದಾರೆ.ಕಾನೂನು ಇಲಾಖೆ ಕಾರ್ಯದರ್ಶಿ ಜಗದೀಶ್ ಅವರು ಮಾತನಾಡಿ, ಈ ಎಲ್ಲಾ ಮೊಕದ್ದಮೆಗಳನ್ನು ಲೋಕ ಅದಾಲತ್ ನಲ್ಲಿ ಮಂಡಿಸಿ ರೈತರಿಗೆ ಅಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ, ಅಲ್ಲದೆ ಈ ನಿಟ್ಟಿನಲ್ಲಿ ಆ ಭಾಗದ ಜನಪ್ರತಿನಿಧಿಗಳ ಸಭೆಯನ್ನು ಸಹ ಕರೆಯುವಂತೆ ಜಗದೀಶ್ ಅವರು ಸಲಹೆ ನೀಡಿ ಕೈತೊಳೆದುಕೊಂಡಿದ್ದಾರೆ.21473 ಕೋಟಿ ರೂ. ವೆಚ್ಚದ ಈ ಕೇಂದ್ರದ ಯೋಜನೆಗೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ 5,300 ಕೋಟಿ ರೂ. ನೀಡುವುದಾಗಿ ಹೇಳಿದ್ದು, ಕೇಂದ್ರ ಜಲಶಕ್ತಿ ಹಾಗೂ ಕೇಂದ್ರ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಸಭೆ ನಡೆಸಿದ್ದು ಶೀಘ್ರ ಅನುದಾನ ಬಿಡುಗಡೆ ಆಗಲಿದೆ ಎಂದು ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರ ವಿಶ್ವಾಸವಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ಸುಮಾರು 10 ರಿಂದ 12 ಟವರ್ ನಿರ್ಮಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಇವರಿಂದ ಇನ್ನೂ ಅನುಮತಿ ದೊರೆತಿಲ್ಲ. ರಾಜ್ಯ ಸರ್ಕಾರ ಮತ್ತು ಭದ್ರಾ ಯೋಜನೆ ಅನುಷ್ಠಾನಾಧಿಕಾರಿಗಳು ತ್ವರಿತವಾಗಿ ಅನುಮತಿ ಪಡೆಯಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕಾಗಿದೆ. ಕಾಮಗಾರಿ ವಿಳಂಬದಿಂದ ಯೋಜನಾ ವೆಚ್ಚ ಹೆಚ್ಚಳವಾಗುವುದನ್ನು ತಡೆಗಟ್ಟಲು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಅದ್ಯತೆ ನೀಡಬೇಕು. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆಯುವುದು, ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚಿಸಿ ಎಲ್ಲ ಶಾಸಕರೊಂದಿಗೆ ಸಮನ್ವಯ ಸಾಧಿಸಿ, ಕಗ್ಗಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕಿದೆ. ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಏನೇನು ತೊಂದರೆಗಳಿವೆಯೋ ಅವೆಲ್ಲನ್ನೂ ಪರಿಹರಿಸಿ ತುಂಗಾ ನದಿಯಿಂದ 17.40 ಟಿಎಂಸಿ ನೀರನ್ನು ಭದ್ರಾ ಡ್ಯಾಂಗೆ ಲಿಫ್ಟ್ ಮಾಡಬೇಕಾಗಿದೆ. ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ೧೭.೪೦ ಟಿಎಂಸಿ ನೀರನ್ನು ಲಿಪ್ಟ್ ಮಾಡಿ ಹರಿಸುವ ರೂ.೩೨೪ ಕೋಟಿ ವೆಚ್ಚದ ಕಾಮಗಾರಿಯಲ್ಲಿ ೯.೩ ಕಿ.ಮೀ ಅಗೆತ ಕಾಮಗಾರಿ, ೭.೯೫ ಕಿ.ಮೀ ಕಾಲುವೆ ತಳಪಾಯದವರೆಗಿನ ಕಾಮಗಾರಿ, ೫.೪ ಕಿ.ಮೀ ಲೈನಿಂಗ್ ಕಾಮಗಾರಿ ಮುಕ್ತಾಯವಾಗಿದ್ದು, ೨೧೪.೭೪ ಕೋಟಿ ವೆಚ್ಚವಾಗಿದೆ. ಎರಡು ಪಂಪ್ ಹೌಸ್ ಕಾಮಗಾರಿ ಪ್ರಗತಿಯಲಿವೆ. ರೈಸಿಂಗ್ ಮೇನ್ ಕಾಮಗಾರಿ ಪ್ರಗತಿಯಲ್ಲಿದೆ. ಅರಣ್ಯ ಇಲಾಖೆ ಷರತ್ತು ಕಾಡು ಪ್ರಾಣಿಗಳ ಸುಲಭ ಓಡಾಟಕ್ಕೆ ರೂ.೫೮.೨೧ ಕೋಟಿ ರೂ ವೆಚ್ಚದಲ್ಲಿ ೧೨ ಸೇತುವೆ, ೨೪ ರ್ಯಾಂಪ್, ೩ ಕೊಳ ಮತ್ತು ಚೈಲ್ಲಿಂಕ್ ಬೇಲಿ ನಿರ್ಮಾಣ ಹಾಗೂ ೪೦.೧೬ ಕೋಟಿ ವೆಚ್ಚದಲ್ಲಿ ೫೦೦ ಮೀಟರ್ ಟನಲ್ ಕಾಮಗಾರಿಯನ್ನು ಜಲಸಂಪನ್ಮೂಲ ಇಲಾಖೆ ಪೂರ್ಣಗೊಳಿಸಬೇಕಾಗಿದೆ. ಭದ್ರಾ ಜಲಾಯಶದಿಂದ ೨೯.೯೦ ಟಿಎಂಸಿ ನೀರನ್ನು ಅಜ್ಜಂಪುರ ಹತ್ತಿರ ವಿತರಣಾ ತೊಟ್ಟಿಗೆ ಹರಿಸುವ ರೂ.೧೦೧೫ ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ವಾಣಿ ವಿಲಾಸ ಸಾಗರ ಜಲಾಶಯಕ್ಕೆ ೨೦೨೦-೨೧ರಲ್ಲಿ ೬.೬೧ ಟಿಎಂಸಿ ನೀರು ಹಾಗೂ ೨೦೨೧-೨೨ರಲ್ಲಿ ೬.೮೨ ಟಿಎಂಸಿ ನೀರು ಜಲಾಶಯಕ್ಕೆ ಹರಿಸಲಾಗಿದೆ. ಆದರೆ 2023-24ರ ಅವಧಿಯಲ್ಲಿ ಅಂದರೆ ಒಡಂಬಡಿಕೆಯಂತೆ ಜೂನ್-15 ರಿಂದ ಅಕ್ಟೋಬರ್-15ರವರೆಗೆ ಈ ಮೂರು ತಿಂಗಳ ಸಮಯದಲ್ಲಿ ಭದ್ರಾದಿಂದ ಹನಿ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸಿಲ್ಲ. ಇದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ದೊಡ್ಡ ಲೋಪವಾಗಿದ್ದರೆ ಜಿಲ್ಲೆಯ ಜನಪ್ರತಿನಿಧಿಗಳ ಲೋಪವೂ ಎದ್ದು ಕಾಣುತ್ತಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರು, ಶಾಸಕರುಗಳ ಜಗಳದಿಂದಾಗಿ ಇಬ್ಬರ ನಡುವೆ ಕೂಸು ಬಡವಾಯಿತೆಂಬ ಸ್ಥಿತಿ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಜಗಳೂರಿನ ಜನರಿಗೆ ಎದುರಾಗಿದೆ. ಹೀಗಾಗಿ, ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಪ್ರತಿಷ್ಠೆ ಬಿಟ್ಟು ಕೋಟೆನಾಡಿಗೆ ಭದ್ರೆ ಹರಿಸಲು ತ್ವರಿತಗತಿಯ ಕ್ರಮ ಕೈಗೊಳ್ಳಬೇಕಿದೆ.
ಬಿಜೆಪಿ-ಜೆಡಿಎಸ್ ಬೆಂಬಲ-ಭದ್ರಾ ಮೇಲ್ದಂಡೆ ಯೋ ಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ ಧೋರಣೆ ಖಂಡಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಜನವರಿ 23ರಂದು ನೀಡಿರುವ ಚಿತ್ರದುರ್ಗ ಬಂದ್ ಗೆ ಬಿಜೆಪಿ ಜಿಲ್ಲಾ ಘಟಕ ಸಂಪೂರ್ಣ ಬೆಂಬಲ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀ ನ್ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಹೋರಾಟದಲ್ಲಿ ಬಿಜೆಪಿ ಪಾಲ್ಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಜೆಡಿಎಸ್ ಬೆಂಬಲ-ದಶಕಗಳ ಕನಸೊಂದು ಇದೀಗ ನನಸಾಗುವ ಹಂತಕ್ಕೆ ಬಂದು ನಿಂತಿದೆ. ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಆಯೋಗ ರಚನೆ ಮಾಡಿ ಬಯಲು ಸೀಮೆಗೆ ನೀರುಣಿಸಬಹುದು ಎಂದು ತೀರ್ಮಾನ ಮಾಡಿದ್ದೇ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು. ಬಯಲು ಸೀಮೆಯ ಜಿಲ್ಲೆಗಳ ಜನರ ಕನಸು ನನಸು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡದೆ ವಿಳಂಬ ಧೋರಣೆ ಮಾಡುವುದನ್ನು ವಿರೋಧಿಸಿ ಜಿಲ್ಲಾ ಜೆಡಿಎಸ್ ಘಟಕ ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರು ಬಂದ್ ನಲ್ಲಿ ಸಂಪೂರ್ಣ ಪಾಲ್ಗೊಳ್ಳುವುದಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಪಿಲಾನಜನಹಳ್ಳಿ ಎಂ.ಜಯಣ್ಣ, ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್ ತಿಳಿಸಿದ್ದಾರೆ.
ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ- ಹಿರಿಯೂರು ತಾಲೂಕು ಧರ್ಮಪುರ ಗ್ರಾಮದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧ್ಯಕ್ಷತೆಯಲ್ಲಿ ಕಳೆದ ನವೆಂಬರ್. 27ರಂದು ನಡೆದ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ವಿಳಂಬ ಖಂಡಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಪ್ಪು ಬಟ್ಟೆ ಪ್ರದರ್ಶನ ಮಾಡಲಿದೆ ಎನ್ನುವ ವರದಿಯನ್ನು ಚಂದ್ರವಳ್ಳಿ ಪತ್ರಿಕೆ ಪ್ರಕಟಿಸಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಶಾಸಕರು ಸೇರಿದಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳ ಮಧ್ಯ ನಡೆದ ರಾಜೀ ಸಂಧಾನದಿಂದಾಗಿ ಅಂದು ನಡೆಯಬೇಕಿದ್ದು ಕಪ್ಪು ಬಟ್ಟೆ ಪ್ರದರ್ಶನ ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು.
ಅಂದು ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದ ಭರವಸೆಯಂತೆ ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಲಸಂಪನ್ಮೂಲ ಇಲಾಖೆ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆ ಇನ್ನೂ ಕರೆಯದೆ ಇರುವುದರಿಂದ ಆಕ್ರೋಶ ವ್ಯಕ್ತ ಪಡಿಸಿರುವ ಹೋರಾಟಗಾರರು ಸದ್ಯಕ್ಕೆ ಚಿತ್ರದುರ್ಗ ಬಂದ್ ಮಾಡುತ್ತಿದ್ದಾರೆ. ಇದೇ ತಿಂಗಳು ಜ.27 ರಂದು ಜಿಲ್ಲೆಯಲ್ಲಿ ನಡೆಯಲಿರುವ ಅಹಿಂದ ಸಮಾವೇಶ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ನೀರಾವರಿ ಹೋರಾಟಗಾರರು ಕಪ್ಪು ಬಟ್ಟೆ ಪ್ರದರ್ಶನ ಮಾಡಿದರೂ ಅಚ್ಚರಿಯಿಲ್ಲ. ಹಾಗಾಗಿ ಅದಕ್ಕೆ ಅವಕಾಶ ನೀಡದಂತೆ ತುರ್ತಾಗಿ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು, ರೈತರ ಸಭೆ ಕೆರೆದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಬಳಿಯ ವೈಜಂಕ್ಷನ್ ಕಾಮಗಾರಿ ಸಮೀಪದ ಅಬ್ಬಿನಹೊಳಲು ಗ್ರಾಮದ 33 ರೈತರು ಪೈಕಿ 26 ರೈತರು ಭೂಸ್ವಾಧೀನಕ್ಕೆ ಸಂಬಂಧಪಟ್ಟ ಆವಾರ್ಡ್ ಪಡೆದಿದ್ದರೂ ಹೆಚ್ಚಿನ ಪರಿಹಾರ ಮೊತ್ತಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲದೆ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಷ್ಟು ಕಾಲುವೆ ತೋಡಲು ರೈತರು ಅಡ್ಡಿ ಮಾಡುತ್ತಿದ್ದಾರೆ. ಈ ಸಮಸ್ಯೆ ಪರಿಹಾರ ಆಗದಿದ್ದರೆ ವಿವಿ ಸಾಗರಕ್ಕೆ ಭದ್ರಾದಿಂದ ಯಾವುದೇ ಕಾರಣಕ್ಕೂ ನೀರು ಹರಿಸಲು ಸಾಧ್ಯವಿಲ್ಲ. ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಎರಡು ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರುಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡದಿದ್ದರೆ ಸರ್ಕಾರಕ್ಕೆ ಸಂಕಷ್ಟ ತಪ್ಪಿದ್ದಲ್ಲ. ಕಪ್ಪು ಬಟ್ಟೆ ಪ್ರದರ್ಶನ ಸೇರಿದಂತೆ ಏನು ಬೇಕಾದರೂ ನಡೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.