i
ಮೋಟರ್ ಪಂಪ್, ಕುರಿ ಮೇಕೆ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಿಸಿದ ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ನಾವು ಆರ್ಥಿಕ ಸಬಲರಾಗುವ ಜೊತೆಗೆ ಮಕ್ಕಳ ವಿದ್ಯಾಭ್ಯಾಸ ಮಾಡಿಸುವ ಕೆಲಸ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ತಾಲೂಕಿನ ತುರುವನೂರು ಹೋಬಳಿಯ ತುರುವನೂರು ಗ್ರಾಮದಲ್ಲಿ ಬುಧವಾರದಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಗಂಗ ಕಲ್ಯಾಣ ಯೋಜನೆಯಡಿಯಲ್ಲಿ ಪಂಪು ಮೋಟರ್ ಮತ್ತು ಕುರಿ ಮೇಕೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ವಿತರಣೆ ಮಾಡಿ ಮಾತನಾಡಿದರು.ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರ ಲಕ್ಷಾಂತರ ವೆಚ್ಚ ವ್ಯಯ ಮಾಡುವ ಮೂಲಕ ಬಡವರಿಗೆ ಗಂಗ ಕಲ್ಯಾಣ ಯೋಜನೆಯಡಿ ಬೊರವೆಲ್ ಕೊರೆಸಿ ಪಂಪು ಮೋಟರ್ ಸೇರಿ ಅಗತ್ಯ ಎಲ್ಲಾ ಸಲಕರಣೆ ನೀಡಿ ನೀರಾವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಎಲ್ಲಾ ನಿಗಮಗಳಲ್ಲಿ ಗಂಗ ಕಲ್ಯಾಣ ಯೋಜನೆ ಲಭ್ಯವಿದೆ. ಅದರಂತೆ ಇಂದು ಮಹರ್ಷಿ ವಾಲ್ಮೀಕಿ ನಿಗಮದ ವತಿಯಿಂದ ೫೩ ಫಲಾನುಭವಿಗಳಿಗೆ ಪಂಪು ಮೋಟರ್ ವಿತರಣೆ ಮಾಡಿದ್ದೇವೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಕುರಿ ಮೇಕೆ ಸಾಗಣಿಕೆ ಯೋಜನೆಯಡಿ ೫ ಫಲಾನುಭವಿಗಳಿಗೆ ಕುರಿ ಮೇಕೆ ವಿತರಣೆ ಮಾಡಿದ್ದು ಹೆಣ್ಣು ಮರಿಗಳ ಸಾಗಣಿಕೆಯಿಂದ ಮರಿಗಳು ಹೆಚ್ಚಳದಿಂದ ಆರ್ಥಿಕವಾಗಿ ಅನುಕೂಲವಾಗುತ್ತದೆ. ಕೆಲವರು ಸೌಲಭ್ಯ ಪಡೆದ ನಂತರ ಮಾರಟ ಮಾಡುತ್ತಾರೆ ಆ ರೀತಿ ಮಾಡಬಾರದು ಒಮ್ಮೆ ಸೌಲಭ್ಯ ದೊರಕುತ್ತದೆ. ಅದು ಬಡವರನ್ನು ಮೇಲೆತ್ತುವ ಕೆಲಸ ಸರ್ಕಾರ ಮಾಡುತ್ತಿದ್ದು ಹಂತ ಹಂತವಾಗಿ ಎಲ್ಲಾರಿಗೂ ಸೌಲಭ್ಯ ಒದಗಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಣಾಧಿಕಾರಿ ಹನುಮಂತಪ್ಪ, ಪರಿಶಿಷ್ಟ ವರ್ಗಗಳ ತಾಲೂಕು ಅಧಿಕಾರಿ ಭೀಮಯ್ಯ, ಮಹರ್ಷಿ ವಾಲ್ಮೀಕಿ ನಿಗಮದ ತಾಲೂಕು ವಿಸ್ತರಣ ಅಧಿಕಾರಿಮೊಹಮ್ಮದ್ ಉಸ್ಮಾನ್, ಕಛೇರಿ ಅಧೀಕ್ಷಕ ಹೊನ್ನೂರುಸ್ವಾಮಿ, ಮಾಜಿ ಜಿ.ಪಂ.ಸದಸ್ಯ ಬಾಬುರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ದೀಪಾ ಮಹೇಶ್, ಉಪಾಧ್ಯಕ್ಷ ತಿಪ್ಪೇಸ್ವಾಮಿ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಕಾರ್ಯಕರ್ತರು ಇದ್ದರು.