i
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಪಂಚಮಸಾಲಿ ಸಮಾಜಕ್ಕೆ 5 ಟಿಕೆಟ್ ನೀಡಿ…
ಚಂದ್ರವಳ್ಳಿ ನ್ಯೂಸ್, ಹರಿಹರ:
ಲೋಕಸಭಾ ಚುನಾವಣೆ 2024ರಲ್ಲಿ ಪಂಚಮಸಾಲಿ ಸಮಾಜಕ್ಕೆ 5 ಟಿಕೆಟ್ ನೀಡುವಂತೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧಿಪತಿ ಶ್ರೀ ವಚನಾನಂದ ಮಹಾಸ್ವಾಮಿಗಳು ಆಗ್ರಹಿಸಿದರು.
ಸಮೀಪದ ಹನಗವಾಡಿ ಹೊರವಲಯದಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಬುಧವಾರ ರಾಜ್ಯ ಸಂಘದ ಅಧ್ಯಕ್ಷರು ಹಾಗೂ ಗುರುಪೀಠದ ಧರ್ಮದರ್ಶಿಗಳ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡ್ ಪಂಚಮಸಾಲಿ ಸಮುದಾಯದ ಅರ್ಹತೆವುಳ್ಳ 5 ಜನ ಅಭ್ಯರ್ಥಿಗಳಿಗೆ ಅವರವರ ಯೋಗ್ಯತೆಯ ಮೇಲೆ ಲೋಕಸಭಾ ಟಿಕೆಟ್ ನೀಡುವಂತೆ ಆಗ್ರಹಿಸುತ್ತೇವೆ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಕಾಲ ಪಂಚಮಸಾಲಿ ಸಮುದಾಯಕ್ಕೆ ರಾಜಕೀಯವಾಗಿ ಮಾನ್ಯತೆಯಾಗಲಿ ಪ್ರಾಧಾನ್ಯತೆಯಾಗಲಿ ಸಿಕ್ಕಿಲ್ಲ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯದ ಅರ್ಹತೆವುಳ್ಳ ಐದು ಜನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಸಾಮಾಜಿಕ ನ್ಯಾಯ ನೀಡುವಂತೆ ದೇಶದ ಎರಡು ಪ್ರಮುಖ ಪಕ್ಷಗಳಿಗೆ ಆಗ್ರಹ ಮಾಡುತ್ತಿರುವುದಾಗಿ ತಿಳಿಸಿದರು.
ಕೆಲವು ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಹೆಚ್ಚಿನ ಜನಸಂಖ್ಯೆ ಇದ್ದರೂ ಕೆಲವು ಕ್ಷೇತ್ರಗಳಲ್ಲಿ ನಮ್ಮ ಸಮುದಾಯವೇ ಫಲಿತಾಂಶದ ಸಂದರ್ಭದಲ್ಲಿ ಪ್ರಮುಖ ಪಾತ್ರಗಳನ್ನು ವಹಿಸುತ್ತಿದೆ ಆದರೂ ನಮ್ಮ ಸಹೋದರ ಸಮುದಾಯಗಳಿಗೆ ಮಾತ್ರ ಮಣೆ ಹಾಕಲಾಗುತ್ತದೆ. ನಮ್ಮ ಸಮುದಾಯಕ್ಕೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರ,ಯಾವುದೇ ವ್ಯಕ್ತಿಗಳಿಗೆ ನಮ್ಮ ಸಮುದಾಯದ ಅಭ್ಯರ್ಥಿಗಳನ್ನು ಅವರವರ ಯೋಗ್ಯತೆ,ಅರ್ಹತೆ ಆದರಿಸಿ ಟಿಕೆಟ್ ನೀಡುವಂತೆ ಶ್ರೀಮಠದ ಪರವಾಗಿ ಒತ್ತಾಯಿಸುತ್ತಿರುವದಾಗಿ ಹೇಳಿದರು.
ಆಡಳಿತಾಧಿಕಾರಿ ಡಾ.ರಾಜಕುಮಾರ್ ಮಾತನಾಡಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ವೀರಶೈವ ಪಂಚಮಸಾಲಿ ಗುರುಪೀಠ ಹಾಗೂ ರಾಜ್ಯ ವೀರಶೈವ ಪಂಚಮಸಾಲಿ ಸಂಘದ ವತಿಯಿಂದ ಪಂಚಮಸಾಲಿ ಸಮುದಾಯದ ಅರ್ಹ ಐದು ಜನರಿಗೆ ಟಿಕೆಟ್ ನೀಡುವಂತೆ ರಾಷ್ಟ್ರೀಯ ಪಕ್ಷಗಳಿಗೆ ವಿನಯ ಪೂರ್ವಕವಾಗಿ ಆಗ್ರಹ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದ ರಾಜಕೀಯ ಇತಿಹಾಸದಲ್ಲಿ 4 ಜನ ಲಿಂಗಾಯಿತರು ಮುಖ್ಯಮಂತ್ರಿಗಳಾಗಿದ್ದಾರೆ ಮತ್ತು 5 ಜನ ಲಿಂಗಾಯತ ಸಮುದಾಯದ ಉಪಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿರು ತ್ತಾರೆ. ಆದರೆ ಇವರಲ್ಲಿ ಯಾರೊಬ್ಬರೂ ಪಂಚಮಸಾಲೀ ಸಮುದಾಯದವರು ಇಲ್ಲದೆ ಇರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಿತ್ತೂರು, ಬಾಗಲಕೋಟೆ, ಬಿಜಾಪುರ, ಬೆಳಗಾವಿ, ದಾವಣಗೆರೆ, ಕೊಪ್ಪಳ, ಬೀದರ್ ಇತ್ಯಾದಿ ಕಡೆಗಳಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು ಅಲ್ಲಿ ನಮ್ಮ ಸಮುದಾಯದವರೇ ಪ್ರಮುಖ ಪಾತ್ರ ವಹಿಸಲಿದ್ದಾರೆ. ಆದ್ದರಿಂದ ರಾಜ್ಯದ ಇವುಗಳಲ್ಲಿ ಯಾವುದಾದರೂ 5 ಕ್ಷೇತ್ರಗಳಲ್ಲಿ ಪಂಚಮಸಾಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಶ್ರೀ ಮಠ ಹಾಗೂ ವೀರಶೈವ ಪಂಚಮಸಾಲಿ ಸಂಘ ಒತ್ತಾಯಿಸುತ್ತದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಶ್ರೀಮಠದ ವತಿಯಿಂದ ಪಂಚ ದಾಸೋಹದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರ ಅಂಗವಾಗಿ ಸಂಘದ ಸದಸ್ಯತ್ವ ಅಭಿಯಾನ, ಭಕ್ತ ಕೋಟಿ ನಿಧಿ, ಮಾಸಿಕ ಸೇವಾ ಕಾಂಕ್ಷಿಗಳು, ಪೀಠದಲ್ಲಿ ಅನ್ನದಾಸೋಹ ನಿಧಿ ಹಾಗೂ ಇಡುಗಂಟು ದಾನಿಗಳು ಎಂಬ ಐದು ದಾಸೋಹಗಳನ್ನು ಆಯೋಜಿಸಲಾಗುವುದು ಇವುಗಳಿಗೆ ಸಮುದಾಯದ ಭಕ್ತ ಮಹಾಶಯರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘದ ಅಧ್ಯಕ್ಷ ಜಿ.ಬಿ.ಪಾಟೀಲ್, ಗೌರವ ಅಧ್ಯಕ್ಷ ಬಾವಿ ಬೆಟ್ಟಪ್ಪ, ಶ್ರೀಮಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಧರ್ಮದರ್ಶಿಗಳಾದ ಜ್ಯೋತಿ ಪ್ರಕಾಶ್, ನಾಗರಾಜ್, ಚಂದ್ರಶೇಖರ್ ಪೂಜಾರಿ, ಪ್ರಕಾಶ್ ಪಾಟೀಲ್ ಸೇರಿದಂತೆ ಪಂಚಮಸಾಲಿ ಸಮುದಾಯದ ಹಲವು ಮುಖಂಡರು, ಮಹಿಳಾ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.