i
ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ರೈತರ ಮನವಿ…
ವರದಿ-ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತೀವ್ರ ಬರಗಾಲಕ್ಕೆ ತುತ್ತಾಗಿರುವ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ರೈತರ ಫಸಲುಗಳು ಸಂಪೂರ್ಣ ಒಣಗುತ್ತಿದ್ದು ಕೂಡಲೇ ಜಿಲ್ಲಾಧಿಕಾರಿಗಳು ತುರ್ತಾಗಿ ವಿವಿ ಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕಾಗಿದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು-ಹಿಂಗಾರು ಎರಡೂ ಅವಧಿಯಲ್ಲಿ ಜಿಲ್ಲೆಯ ವಿವಿ ಸಾಗರಕ್ಕೆ ಹನಿ ನೀರು ಹರಿದು ಬಂದಿಲ್ಲ, ಜೊತೆಯಲ್ಲಿ ಪ್ರತಿ ವರ್ಷ ಜೂನ್-15 ರಿಂದ ಅಕ್ಟೋಬರ್-15ರವರೆಗೆ ಭದ್ರಾ ಡ್ಯಾಂನಿಂದ ವಿವಿ ಸಾಗರಕ್ಕೆ ನೀರು ಹರಿಸಬೇಕಿತ್ತು. ಆದರೆ ಭದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲೂ ಮಳೆ ಕೊರತೆ ಕಾರಣದಿಂದ ಹನಿ ನೀರು ಹರಿಸಿಲ್ಲ. ಇದರಿಂದಾಗಿ ವಿವಿ ಸಾಗರ ಮತ್ತು ವೇದಾವತಿ ನದಿ ಪಾತ್ರ ಸೇರಿದಂತೆ ವಿವಿ ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ಅಂತರ್ಜಲ ಸಂಪೂರ್ಣ ಪಾತಾಳ ಕಂಡಿದ್ದು ಈಗಾಗಲೇ ರೈತರ ಅಡಿಕೆ, ತೆಂಗು, ಮಾವು, ಇತರೆ ತೋಟರಾಗಿಕೆ ಫಸಲುಗಳು ಒಣಗುತ್ತಿವೆ. ಪ್ರಸ್ತುತ ವಿವಿ ಸಾಗರ ಡ್ಯಾಂನಲ್ಲಿ 118 ಅಡಿ ನೀರಿದ್ದು ಆ ನೀರಿನಲ್ಲಿ ಕೂಡಲೇ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಜಿಲ್ಲಾಧಿಕಾರಿಗಳು ವಾಣಿವಿಲಾಸ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಹರಿಸಲು ತೀರ್ಮಾನ ಮಾಡಬೇಕಿದೆ.
ಇದರ ಮಧ್ಯ ಜಲಸಂಪನ್ಮೂಲ ಇಲಾಖೆಯ ಹಿರಿಯೂರು ಅಧಿಕಾರಿಗಳು ರೈತರ ಅಚ್ಚುಕಟ್ಟು ಪ್ರದೇಶಕ್ಕೆ ಸರಾಗವಾಗಿ ನೀರು ಹರಿಸಲು ವಿವಿ ಸಾಗರದ ಎಡ ಮತ್ತು ಬಲ ನಾಲಾ ಕಾಲುವೆಗಳನ್ನು ಸ್ವಚ್ಛ ಮಾಡಿ ನೀರು ಹರಿಸಬೇಕು. ಅದೇ ರೀತಿ ರೈತರು ಕೂಡ ತಮ್ಮ ಜಮೀನುಗಳಲ್ಲಿನ ಕಾಲುವೆಗಳ ಸ್ವಚ್ಛತೆ ಮಾಡಿಕೊಂಡು ನೀರು ಪೋಲು ಆಗದಂತೆ ಎಚ್ಚರವಹಿಸಬೇಕಾಗಿದೆ.
ಪ್ರಸಕ್ತ ಸಾಲಿನಲ್ಲಿ ಡ್ಯಾಂಗೆ ಹನಿ ನೀರು ಹರಿದು ಬಂದಿಲ್ಲ, ಇರುವ ನೀರನ್ನೇ ಇತಿಮಿತಿಯಲ್ಲಿ ಬಳಸಿಕೊಳ್ಳಬೇಕು. ನೀರು ಇದೆ ಎಂದು ಬೇಕಾಬಿಟ್ಟಿಯಾಗಿ ಜಮೀನುಗಳಲ್ಲಿ ನೀರು ನಿಲ್ಲಿಸುವುದು, ಪೋಲಾಗಿ ಹಳ್ಳಕೊಳ್ಳಗಳಿಗೆ ಹರಿಯುವುದು, ಜಮೀನಿನಲ್ಲಿ ಯಾವುದೇ ಫಸಲು ಇಲ್ಲದಿದ್ದರೂ ಸುಮ್ಮನೆ ನೀರು ನಿಲ್ಲುಸಬಾರದು. ಬಹುತೇಕ ರೈತರು ತಮ್ಮ ಹೊಲ, ಗದ್ದೆ, ತೋಟಗಳಲ್ಲಿ ಮೂರು ಅಡಿ ನೀರು ನಿಲ್ಲಿಸುವ ಪದ್ಧತಿ ಕೈಬಿಡಬೇಕು. ಅಗತ್ಯ ಇರುವಷ್ಟು ನೀರನ್ನು ರೈತರು ಬಳಸಿಕೊಳ್ಳಬೇಕು. ತೆಂಗು, ಅಡಿಕೆ, ಮಾವು, ಸಪೋಟದಂತಹ ತೋಟಗಾರಿಕೆ ಬೆಳೆಗಳಿಗಷ್ಟೇ ನೀರು ಪೂರೈಕೆ ಮಾಡುವ ಕಾರ್ಯವನ್ನು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮಾಡಬೇಕಿದೆ. ಹಿರಿಯೂರು ನಗರ ಸುತ್ತ ಮುತ್ತ ಸಾಕಷ್ಟು ಪ್ರದೇಶದಲ್ಲಿ ಜನ ವಸತಿಗಾಗಿ ತೋಟಗಳನ್ನು ಕಡಿದು ನಿವೇಶನ ಮಾಡಲಾಗಿದೆ. ಇಂತಹ ಕಡೆಗಳಲ್ಲೂ ಜಮೀನುಗಳಲ್ಲಿ ಮೂರು ಅಡಿ ನೀರು ಸಲ್ಲಿಸಲಾಗುತ್ತಿದೆ. ಬಳಕೆ ಮಾಡದ ಜಮೀನುಗಳಿಗೆ ಯಾವುದೇ ಕಾರಣಕ್ಕೂ ನೀರು ಹರಿಸಬಾರದು, ಒಂದು ವೇಳೆ ಅಧಿಕಾರಿಗಳ ನಿರ್ಲಭ್ಯ ವಹಿಸಿ ನೀರು ಹರಿಸಿದರೆ ಪೋಲಾಗುತ್ತದೆ, ನೀರು ಪೋಲಾಗದಂತೆ ಎಚ್ಚರವಹಿಸಬೇಕಾಗಿದೆ.
ಅಚ್ಚುಕಟ್ಟು ಪ್ರದೇಶದ ಕೊನೆ ರೈತರಿಗೆ ಮೊದಲು, ನಂತರ ಮಧ್ಯದ ರೈತರು, ಕೊನೆಯದಾಗಿ ಡ್ಯಾಂಗೆ ಹತ್ತಿರುವ ರೈತರಿಗೆ ನೀರು ಬಳಸಿಕೊಳ್ಳುವಂತೆ ಜಿಲ್ಲಾಡಳಿತ ಮನವೊಲಿಕೆ ಮಾಡಬೇಕಿದೆ.
ವಿವಿ ನಾಲೆಗಳಲ್ಲಿ ನೀರು ಬಿಟ್ಟಾಗ ತಹಶೀಲ್ದಾರ್, ಆರ್ಐ, ನೀರಾವರಿ ಇಲಾಖೆ ಇಂಜಿನಿಯರ್ ಗಳು ಸದಾ ವೀಕ್ಷಣೆ ಮಾಡಿ ಪೋಲಾಗುವ ನೀರನ್ನು ತಪ್ಪಿಸಬೇಕಾಗಿದೆ.
ಜನರ ಜೀವನಾಡಿ ವಿವಿ ಸಾಗರ ಜಲಾಶಯದ ಎಡ ಮತ್ತು ಬಲ ದಂಡೆ ಕಾಲುವೆಗಳಲ್ಲಿ ಕಸಕಡ್ಡಿ, ಪ್ಲಾಸ್ಟಿಲ್ ತ್ಯಾಜ್ಯ ವಸ್ತುಗಳು ತುಂಬಿಕೊಂಡಿದ್ದು ಸ್ವಚ್ಛತೆ ಮಾಡದೆ ನೀರು ಹರಿಸಿದರೆ ದೊಡ್ಡ ಪ್ರಮಾಣದ ನೀರು ಪೋಲಾಗಲು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಉದಾಸೀನತೆ ಕಾರಣವಾಗಲಿದೆ.
ಹಿರಿಯೂರು ತಾಲೂಕಿನ ಕುಂದಲಗುರ, ಮ್ಯಾದನಹೊಳೆ, ಸಮುದ್ರದಹಳ್ಳಿ, ಕೂಡ್ಲಹಳ್ಳಿ, ಟಿ.ನಾಗೇನಹಳ್ಳಿ, ಬಿದರೆಕೆರೆ ಸೇರಿದಂತೆ ಮತ್ತಿತರ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶದ ರೈತರ ತೋಟಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎನ್ನುವುದು ರೈತರ ಗೋಳಾಗಿದೆ. ರೈತರ ಸಮಸ್ಯೆಗಳಿಗೆ ಎಇಇ ಸ್ಪಂದಿಸಿ ಕೆಲಸ ಮಾಡಬೇಕಾಗಿದ್ದರೂ ಗಮನ ನೀಡುತ್ತಿಲ್ಲ. ಇದರಿಂದಾಗಿ ಸಾಕಷ್ಟು ನೀರು ಪೋಲಾಗಿ ಹರಿದು ಹಳ್ಳ ಸೇರುತ್ತಿದೆ.
ನೀರು ಪೋಲು- ವಿವಿ ಸಾಗರದ ಡ್ಯಾಂ ಮೇಲ್ಮಟ್ಟದ 9.20 ಕಿ.ಮೀ ಉತ್ತದ ಕಾಲುವೆ, ಎಡ ದಂಡೆ ಕಾಲುವೆ 48 ಕಿ.ಮೀ ಮತ್ತು ಬಲ ದಂಡೆ ಕಾಲುವೆ 46.41 ಕಿ.ಮೀ ಅಂತರ ಹೊಂದಿದ್ದು, ಇಷ್ಟು ದೂರಕ್ಕೆ ಕಾಲುವೆ ಮೂಲಕ ನೀರು ಹರಿಯಬೇಕಿದೆ. ವಿವಿ ಸಾಗರ ಡ್ಯಾಂ ಬುಡದಿಂದ ಸಾಕಷ್ಟು ನೀರು ಸೋರಿಕೆಯಾಗುತ್ತಿದೆ. ಕಾಲುವೆಗಳಲ್ಲಿ ಮುಳ್ಳು ಕಂಟಿ ಗಿಡ ಸಾಕಷ್ಟು ಬೆಳೆದಿದೆ. 45 ಕಿ.ಮೀ ದೂರದ ಎರಡು ಕಾಲುವೆಗಳು ಪೂರ್ತಿ ಅದ್ವಾನಗೊಂಡಿವೆ. ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಅಸಾಧ್ಯವಾಗಿದೆ. ಅಣೆಕಟ್ಟೆಯ ತೂಬ್ ಎತ್ತಿದ ಕ್ಷಣದಿಂದ ಕೊನೆಯ ಹಂತದ ಕಾಲುವೆ ತಲುಪಲು ಕನಿಷ್ಠ 48 ರಿಂದ 60 ಗಂಟೆಗಳು ಸಮಯ ಬೇಕು. ಕಾಲುವೆಗಳ ಎರಡು ಬದಿಗಳಲ್ಲಿ ಬೆಳೆದು ನಿಂತಿರುವ ಸೀಮೆಜಾಲಿ, ಮುಳ್ಳಿನ ಗಿಡ, ಕಾಲುವೆಯಲ್ಲಿ ಬಿದ್ದಿರುವ ಹೂಳು, ಕಸ, ಕಡ್ಡಿ ಎತ್ತಿ ಸ್ವಚ್ಛತೆ ಮಾಡಿ ಕಾಲುವೆಯ ಎರಡು ಬದಿಗಳು, ತಳ(ಕೆಳ) ಭಾಗಕ್ಕೆ ಲೈನ್ನಿಂಗ್ ಮಾಡಿ ಆಧುನಿಕರಣ ಮಾಡಬೇಕಾಗಿದೆ. ಕಾಲುವೆಗಳಲ್ಲಿ ಸಾಕಷ್ಟು ನೀರು (ಸೋರಿಕೆ)ಪೋಲಾಗಿ ಹರಿದು ವೇದಾವತಿಯ ನದಿಗೆ ಸೇರುತ್ತಿದ್ದು ಪ್ರತಿ ಸಲ ನೀರು ಬಿಟ್ಟಾಗ ನೂರಾರು ಕಿಲೋ ಮೀಟರ್ ದೂರಕ್ಕೆ ನೀರು ಹರಿದು ಪೋಲಾಗಿ ಹೋಗುತ್ತಿದೆ. ಈ ಹಿಂದೆ 12-15 ದಿನ ಕಾಲುವೆಗಳಲ್ಲಿ ನೀರು ಹರಿಸಿದರೆ ಎಲ್ಲ ರೈತರಿಗೂ ನೀರು ಲಭ್ಯವಾಗುತ್ತಿತ್ತು. ಈಗ ಒಂದು ತಿಂಗಳು ನೀರು ಹರಿಸಿದರೂ ಕೊನೆ ಭಾಗದ ರೈತರಿಗೆ ಲಭ್ಯವಾಗುತ್ತಿಲ್ಲ. ಇದಕ್ಕೆ ಜಲಸಂಪನ್ಮೂಲ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರ ಹೊಣಗೇಡಿತನದ ನಿರ್ಧಾರಗಳೇ ಕಾರಣವಾಗಿದೆ. ಪೋಲಾಗಿ ಹರಿದು ಹೋಗುತ್ತಿರುವ ನೀರನ್ನು ಸಂರಕ್ಷಿಸಬೇಕಾದರೆ ಎಡ, ಬಲ ಮತ್ತು ಮೇಲ್ಮಟ್ಟದ ಕಾಲುಗಳ ಸ್ವಚ್ಛತೆ ಮಾಡಿಸಬೇಕಾಗಿದೆ.
ಇಡೀ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬಿಸಿಲ ದೆಗೆ ಅಧಿಕವಾಗಿದ್ದು ರೈತರ ತೆಂಗು-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಹಾಗೂ ರೈತರ ಬೆಳೆದಿರುವ ವಿವಿಧ ಪಸಲುಗಳನ್ನು ಉಳಿಸಿಕೊಳ್ಳಲು ನೀರಿನ ಅಗತ್ಯವಿದ್ದು ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತರು ಜಿಲ್ಲಾಧಿಕಾರಿಗಳಲ್ಲಿ ರೈತರಾದ ಹುಚ್ಚವ್ವನಹಳ್ಳಿ, ಮಾಯಸಂದ, ಕೂನಿಕೆರೆ, ಕುರುಬರಹಳ್ಳಿ, ಲಕ್ಕವ್ವನಹಳ್ಳಿ ಸೇರಿದಂತೆ ರೈತರಾದ ರಂಗನಾಥ್, ಮೋಹನ್, ಜಗದೀಶ್, ಮಂಜುನಾಥ್, ಸಣ್ಣಪ್ಪ, ಗಿರೀಶ್ ಮತ್ತಿತರರು ಮನವಿ ಮಾಡಿದ್ದಾರೆ.