i
ಭದ್ರಾ ಯೋಜನೆಗೆ ಶೀಘ್ರ ಹಣ ಬಿಡುಗಡೆ, ಅನುಮಾನ, ಆತಂಕ ಬೇಡ- ಕೇಂದ್ರ ಸಚಿವ ಶೇಖಾವತ್…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ತಾಂತ್ರಿಕ ಕಾರಣದಿಂದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಬಿಡುಗಡೆ ಮಾಡಲು ವಿಳಂಬವಾಗಿದೆ, ಯಾವುದೇ ಕಾರಣಕ್ಕೂ ಅನುದಾನ ಬಿಡುಗಡೆ ತಡೆಹಿಡಿಯುವುದಿಲ್ಲ, ಶೀಘ್ರ ಬಿಡುಗಡೆ ಮಾಡಲಾಗುತ್ತದೆ ಎಂದು
ಕೇಂದ್ರದ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರು ಕರ್ನಾಟಕದ ರೈತ ನಿಯೋಗ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಎ . ನಾರಾಯಣಸ್ವಾಮಿಯವರಿಗೆ ಭರವಸೆ ನೀಡಿದರು.
ಹಿರಿಯೂರು ತಾಲೂಕು ಕೃಷಿಕ ಸಮಾಜದ ವತಿಯಿಂದ ನವದೆಹಲಿಗೆ ತೆರಳಿದ್ದ ರೈತರ ನಿಯೋಗವು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರು ಮತ್ತು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಭೇಟಿಯಾಗಿ ಕಳೆದ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ 5.300 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದು ಬಿಡುಗಡೆ ಮಾಡುವಂತೆ ಮನವಿ ಮಾಡಿದಾಗ ಕೇಂದ್ರ ಜಲಶಕ್ತಿ ಸಚಿವರು ಮೇಲಿನಂತೆ ಭರವಸೆ ನೀಡಿದರು. ರಾಜ್ಯ ಸರ್ಕಾರವು ಸಕಾಲದಲ್ಲಿ ಅಗತ್ಯ ಮಾಹಿತಿ ಒದಗಿಸಿದ್ದರೆ ಈ ವೇಳೆಗೆ ಅನುದಾನ ಬಿಡುಗಡೆ ಆಗುತ್ತಿತ್ತು. ಆದರೆ ತಾಂತ್ರಿಕ ಸಮಸ್ಯೆ ನಿವಾರಣೆ ಮಾಡಲು ವಿಳಂಬ ಮಾಡಿದರು. ಯಾವುದೇ ಕಾರಣಕ್ಕೂ ಅನುದಾನ ಹಿಂಪಡೆದಿಲ್ಲ. ಅಲ್ಲದೆ ಕೇಂದ್ರ ಸರ್ಕಾರದಲ್ಲಿ ಈಗ ಯಾವುದೇ ರಾಷ್ಟ್ರೀಯ ನೀರಾವರಿ ಯೋಜನೆಗಳಿಲ್ಲ, ಬದಲಿಗೆ ಆ ಯೋಜನೆಯನ್ನು ಪರಿವರ್ತಿಸಿ ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆ ಅಗ್ಜಿಲರೇಟೆ್ಡ್ ಇರಿಗೇಷನ್ ಬೆನಿಫಿಟ್ ಪ್ರೋಗ್ರಾಮ್ (PMKSY_AIBP) ಅಡಿ ಅನುದಾನ ಒದಗಿಸಲಾಗುತ್ತದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.
5300 ಕೋಟಿ ರೂ.ಗಳ ಅನುದಾನ ನೀಡಿಕೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಎ . ನಾರಾಯಣಸ್ವಾಮಿಯವರ ಪರಿಶ್ರಮ ಸಾಕಷ್ಟಿದೆ. ಅವರಿಂದಾಗಿಯೇ 5300 ಕೋಟಿ ರೂ. ಮಂಜೂರಾಗಿದೆ. ಈ ಅನುದಾನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ರಾಜ್ಯ ಸರ್ಕಾರ ಕೂಡ ಇದಕ್ಕೆ ಸ್ಪಂದಿಸಿ ಅಗತ್ಯ ಮಾಹಿತಿ ರವಾನೆ ಮಾಡಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ . ನಾರಾಯಣಸ್ವಾಮಿ ಮಾತನಾಡಿ, ನನ್ನ ಮತದಾರರಿಗೆ ನಾನು ಭರವಸೆ ನೀಡಿದಂತೆ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ಅಗತ್ಯ ಅನುದಾನ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳ ಬಿಡುಗಡೆಗೆ ಪ್ರಮಾಣಿಕ ಪ್ರಯತ್ನ ಮಾಡಿರುವೆ. ಶೀಘ್ರದಲ್ಲಿ ಕೇಂದ್ರ ಜಲಶಕ್ತಿ ಸಚಿವರಾದ ಶೇಖಾವತ್ ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು. ನನ್ನ ಕನಸಿನಂತೆ ಚಿತ್ರದುರ್ಗ ಮೆಡಿಕಲ್ ಕಾಲೇಜ್ 80 ಎಕರೆ ಜಾಗದಲ್ಲಿ ಆಗುತ್ತಿಲ್ಲ ಎನ್ನುವ ನೋವು ಇದೆ. ಅಭಿವೃದ್ಧಿ ದೃಷ್ಠಿಯಿಂದ ಮೆಡಿಕಲ್ ಕಾಲೇಜ್ ನಗರದ ಹೊರ ವಲಯದಲ್ಲಿ ಆಗಬೇಕಿತ್ತು ಎಂದು ಅವರು ತಿಳಿಸಿದ್ದಾರೆ.
ಹಿರಿಯೂರು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯ ಮಾತನಾಡಿ, ರಾಜ್ಯ ಸರ್ಕಾರದ ಕೋರಿಕೆಯಂತೆ ಪ್ರದಾನ ಮಂತ್ರಿ ಕಿಸಾನ್ ಸಿಂಚಯ್ ಯೋಜನೆಯಡಿ ಪರಿಗಣಿಸಿ ಮೇಲ್ಕಂಡ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರೂ, ಇದುವರೆವಿಗೂ ಹಣ ಬಿಡುಗಡೆಯಾಗದೆ ಇರುವುದರಿಂದ ಹಾಗೂ ರಾಜ್ಯ ಸರ್ಕಾರವು ಸಹ ತನ್ನ ಪಾಲಿನ ಮೊತ್ತವನ್ನು ಬಿಡುಗಡೆಗೊಳಿಸದೆ, ಯೋಜನೆಯು ಮಂದಗತಿಯಲ್ಲಿ ಸಾಗುತ್ತಿದ್ದು ಕೇಂದ್ರ ಸರ್ಕಾರ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವರಿಕೆ ಮಾಡಿಕೊಟ್ಟರು.ಭದ್ರಾ ಮೇಲ್ದಂಡೆ ಯೋಜನೆಯ ಸದುಪಯೋಗ ಹಾಗೂ ಹೆಚ್ಚಿನ ನೀರಿನ ಬವಣೆ ಅನುಭವಿಸುತ್ತಿರುವ ಮಧ್ಯ ಕರ್ನಾಟಕ ಚಿತ್ರದುರ್ಗ ಜಿಲ್ಲೆಯ ಮತ್ತು ವಾಣಿ ವಿಲಾಸ ಸಾಗರ ಜಲಾಶಯವು ನೀರು ಶೇಖರಣೆಯ ಅಕ್ಷಯ ಪಾತ್ರೆಯಾಗಿದ್ದು ಈ ಡ್ಯಾಂ ಬರಿದಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲಿದೆ, ಅದಕ್ಕಾಗಿ ಯೋಜನೆಗೆ ಅಗತ್ಯ ಇರುವ ಅನುದಾನವನ್ನು ಬಿಡುಗಡೆ ಮಾಡಿ ಆ ಭಾಗದ ರೈತರನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಾಣಿ ವಿಲಾಸ ಸಾಗರ ಜಲಾಶಯದ ಭಾರತ ಭೂಪಟದ ಚಿತ್ರವನ್ನು ನೆನಪಿನ ಕಾಣಿಕೆಯಾಗಿ ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ಮತ್ತು ಕೇಂದ್ರ ಸಚಿವ ನಾರಾಯಣಸ್ವಾಮಿ, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನೀಡಲಾಯಿತು.
ರೈತರ ನಿಯೋಗದಲ್ಲಿ ಹಿರಿಯೂರು ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಹೆಚ್ ಆರ್ ತಿಮ್ಮಯ್ಯ, ವಕೀಲರಾದ ಎಂ ಟಿ ಸುರೇಶ್ ಬಬ್ಬೂರ್, ಪ್ರಗತಿಪರ ರೈತ ಎಂ ರಾಜೇಂದ್ರ (ಎಂಎಂಎಂ ಮಣಿ), ಎಂ ಸಿ ಧ್ರುವ ಕುಮಾರ್ ಉಪಸ್ಥಿತರಿದ್ದರು.