i
ಸರ್ಕಾರಿ ಮಹಿಳಾ ಉದ್ಯೋಗಿ ರೈಲಿನಿಂದ ಬಿದ್ದು ಸಾವು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಶಿವಮೊಗ್ಗ-ಬೆಂಗಳೂರು ರೈಲಿನಿಂದ ಬಿದ್ದು ಸರ್ಕಾರಿ ಮಹಿಳಾ ಉದ್ಯೋಗಿ ಸಾವನ್ನಪ್ಪಿದ ಘಟನೆ ತುಮಕೂರು ಬಳಿ ಸಂಭವಿಸಿದೆ.
ಮೃತ ಮಹಿಳೆ ಅನ್ನಪೂರ್ಣ ( ೫೦) ಭದ್ರಾವತಿ ತಾಲೂಕಿನವರು. ಬೆಂಗಳೂರಿನ ಅರಣ್ಯ ಭವನದಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಮೇಲ್ವಿಚಾರಕಿಯಾಗಿ ಕೆಲಸ ನಿರ್ವಹಿಸಿ ವಾಪಸ್ ಬೆಂಗಳೂರಿಗೆ ತೆರಳುವಾಗ ಈ ಘಟನೆ ಸಂಭವಿಸಿದೆ.
ಇವರ ಸಾವಿನ ಬಗ್ಗೆ ಈಗ ಅನುಮಾನ ವ್ಯಕ್ತವಾಗಿದೆ. ಮಹಿಳೆಯ ಮೃತದೇಹ ತುಮಕೂರು ಸಮೀಪ ಹಿರೇಹಳ್ಳಿಯ ರೈಲ್ವೆ ಹಳಿ ಬಳಿ ಪತ್ತೆಯಾಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಿದ್ದ ಇವರು ಜನವರಿ ೩೦ ರಂದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಅವರ ಸಹೋದರ ಕೂಡ ಬೇರೆ ಬೋಗಿಯಲ್ಲಿದ್ದರು. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಸಹೋದರ ಇಳಿದು ಅನ್ನಪೂರ್ಣ ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಅವರು ಕಾಣದೆ ಇದ್ದಾಗ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರೈಲ್ವೆ ಪೊಲೀಸರು ಪ್ರತಿ ಸ್ಟೇಷನ್ನ ಸಿಸಿ ಕ್ಯಾಮರಾ ಪರಿಶೀಲಿಸಿದಾಗಲೂ ಯಾವುದೇ ವಿಷಯ ಪತ್ತೆಯಾಗಿಲ್ಲ. ಆ ಬಳಿಕ ರೈಲ್ವೆ ಹಳಿಗಳ ಬಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿರೇಹಳ್ಳಿ ಸಮೀಪ ಅನ್ನಪೂರ್ಣರವರ ಮೃತದೇಹ ಪತ್ತೆಯಾಗಿದ್ದು, ಅಲ್ಲಿಯೇ ಸಮೀಪದಲ್ಲಿ ಅವರ ಬ್ಯಾಗ್ ಸಹ ಪತ್ತೆಯಾಗಿದೆ.
ಅನ್ನಪೂರ್ಣರವರು ರೈಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.