i
49 ಜನರಿಗೆ ಮಂಗನ ಕಾಯಿಲೆ ಎರಡು ಸಾವು….
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮಂಗನ ಕಾಯಿಲೆ(ಕೆಎಫ್ ಡಿ)ಕಂಡುಬರುವ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರ ಪ್ರಕರಣಗಳಿಗೆ ಕೆಎಫ್ ಡಿ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಾದ ಡಿ.ರಣದೀಪ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗನ ಕಾಯಿಲೆ(ಕೆಎಫ್ ಡಿ) ಕುರಿತು ಇಂದು ಡಿಹೆಚ್ಒ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ವಾಡಿಕೆಯಂತೆ ಈ ವರ್ಷವೂ ಮೂರು ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ. ಜ.೧ ರಿಂದ ಫೆ.೨ ರವರೆಗೆ ರಾಜ್ಯದಲ್ಲಿ ಒಟ್ಟು ೨೨೮೮ ಕೆಎಫ್ ಡಿ ಪರೀಕ್ಷೆ ನಡೆಸಲಾಗಿದ್ದು ಶಿವಮೊಗ್ಗ ದಲ್ಲಿ ೧೨, ಉತ್ತರ ಕನ್ನಡ ೩೪ ಹಾಗು ಚಿಕ್ಕಮಗಳೂರಿನಲ್ಲಿ ೩ ಸೇರಿ ಒಟ್ಟು ೪೯ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಂದು ಮರಣ ಸಂಭವಿಸಿದೆ.
ಕೆಎಫ್ ಡಿ ಪಾಸಿಟಿವ್ ಪ್ರಕರಣ ಪತ್ತೆಯಾದ ತಕ್ಷಣ ಆಸ್ಪತ್ರೆ ಗೆ ದಾಖಲಿಸಬೇಕು. ರೋಗ ಪ್ರಸರಣ ಸಾಮಾನ್ಯವಾಗಿ ಜನವರಿ ಯಿಂದ ಮಾರ್ಚ್ ವರೆಗೆ ಇದ್ದು ಈ ವೇಳೆ ತಾಲ್ಲೂಕು ಆಸ್ಪತ್ರೆ ಗಳಾದ ತೀರ್ಥ ಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆ ಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಬೇಕು. ಹಾಗು ಅಗತ್ಯ ಔಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದರು.
ಸೋಂಕಿತರಿಗೆ ಎಬಿಎಆರ್ ಕೆ ಅಡಿ ರೆಫರ್ ಮಾಡಿ ಉಚಿತ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯ ರಿಗೆ ಸೂಚಿಸಿದರಲ್ಲದೆ ಜನರಲ್ಲಿ ಕಾಯಿಲೆ ಕುರಿತು ಅರಿವು ಹೆಚ್ಚಿಸಲು ಮಾಹಿತಿ, ಶಿಕ್ಷಣ ಸಂವಹನ ಚಟುವಟಿಕೆಗಳನ್ನು ಮಾಡುವಂತೆ ಸೂಚನೆ ನೀಡಿದರು.
ಕೆಎಫ್ಡಿ ಹೊಸ ಲಸಿಕೆ ಪ್ರಕ್ರಿಯೆಯಲ್ಲಿದ್ದು ಮುಂದಿನ ಅವಧಿಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದರು.
ಸಭೆಯಲ್ಲಿ ಉತ್ತರ ಕನ್ನಡ ಡಿಹೆಚ್ ಒ, ಶಿರಸಿಯಲ್ಲಿ ಕೆಎಫ್ ಡಿ ಪರೀಕ್ಷೆ ನಡೆಸಲು ಒಂದು ಪ್ರಯೋಗಾಲಯ ಸ್ಥಾಪಿಸುವಂತೆ ಮನವಿ ಮಾಡಿದರು.
ಸಭೆಗೂ ಮುನ್ನ ಆಯುಕ್ತರು ವೈರಸ್ ಡಯಾಗ್ನಸ್ಟಿಕ್ ಲ್ಯಾಬ್(ವಿಡಿಎಲ್) ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿ, ಸಿಬ್ಬಂದಿ ಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಪುಷ್ಪಲತ, ಸಿಎಂಡಿ ಜಂಟಿ ನಿರ್ದೇಶಕ ರಾದ ಡಾ.ತ್ರಿವೇಣಿ, ವಿಡಿಎಲ್ ಉಪ ನಿರ್ದೇಶಕ ಡಾ.ರಘುನಂದನ್, ಡಿಹೆಚ್ಒ ಡಾ.ರಾಜೇಶ್ ಸುರಗಿಹಳ್ಳಿ, ವಿಡಿಎಲ್ ಡಿಸಿಎಂಒ, ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಹಾಜರಿದ್ದರು.