i
ಸುದ್ದಿ ನಿರೂಪಕಿ ಹುದ್ದೆಯ ಆಮಿಷ ಒಡ್ಡಿ ಪತ್ರಕರ್ತನಿಂದ ವಂಚನೆ…
ಚಂದ್ರವಳ್ಳಿ ನ್ಯೂಸ್, ಮಡಿಕೇರಿ:
ಸುದ್ದಿ ನಿರೂಪಕಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯಿಂದ ಚಿನ್ನಾಭರಣಗಳನ್ನು ಪಡೆದಿದ್ದ ಪತ್ರಕರ್ತನೊಬ್ಬ ನಂತರ ಆಕೆಗೆ ವಂಚಿಸಿ, ಹಲ್ಲೆ ನಡೆಸಿರುವ ಘಟನೆಯೊಂದು ಗೋಣಿಕೊಪ್ಪಲುವಿನಲ್ಲಿ ನಡೆದಿದೆ.
ಆರೋಪಿಯನ್ನು ಕೊಡಗಿನ ಸ್ಥಳೀಯ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ನಾಗೇಶ್ ಡಿ ಎಂದು ಗುರ್ತಿಸಲಾಗಿದೆ.
ಮಹಿಳೆ ಗೋಣಿಕೊಪ್ಪಲು ಸಮುದಾಯ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ರೂ.10,000 ವೇತನ ನೀಡುವ ಸುದ್ದಿ ನಿರೂಪಕಿ ಕೆಲಸ ಕೊಡಿಸುವುದಾಗಿ ಆರೋಪಿ ಮಹಿಳೆಯನ್ನು ನಂಬಿಸಿದ್ದಾನೆ. ಬಳಿಕ ಉದ್ಯೋಗ ಭದ್ರ ಪಡಿಸಿಕೊಳ್ಳಲು ಹೂಡಿಕೆ ಮಾಡಲು ಹಣ ಬೇಕು ಎಂದು ಹೇಳಿ, ಆಕೆಯ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದಾನೆ.
ಹಲವು ದಿನಗಳು ಕಳೆದರೂ ಕೆಲಸ ಕೊಡಿಸದಿದ್ದಾಗ ಮಹಿಳೆ ತನ್ನ ಚಿನ್ನಾಭರಣವನ್ನು ಹಿಂದಿರುಗಿಸುವಂತೆ ಕೇಳಿದ್ದಾರೆ. ಇದರಿಂದ ಕೆಂಡಾಮಂಡಲಗೊಂಡಿರುವ ಆತ ಮಧ್ಯರಾತ್ರಿ ಆಸ್ಪತ್ರೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಆಕೆಯ ರಕ್ಷಣೆಗೆ ತೆರಳಿದ್ದ ಆಸ್ಪತ್ರೆ ಇತರ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋವನ್ನು ಸ್ಥಳದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಆರೋಪಿ ತಲೆಮರೆಸಿಕೊಂಡಿದ್ದಾನೆ.