i
ಕುಡಿಯುವ ನೀರಿಗೂ ಕನ್ನ ಹಾಕಿದ ಅಧಿಕಾರಿಗಳು, ಅನರ್ಹ ಗುತ್ತಿಗೆದಾರರ ಕಾರುಬಾರು…
ಎಗ್ಗಿಲ್ಲದೆ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ, ಕಳಪೆ ಕಾಮಗಾರಿ, ಬೋಗಸ್ ಬಿಲ್, ಕಣ್ ಮುಚ್ಚಿ ಕೂತ ಸರ್ಕಾರ…
–:ಚಂದ್ರವಳ್ಳಿ ವಿಶೇಷ ವರದಿ:–
ಚಂದ್ರವಳ್ಳಿ ನ್ಯೂಸ್, ತುಮಕೂರು:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಪ್ರತಿ ಮನೆಗೂ ಶುದ್ಧ ಕುಡಿಯುವ ನಲ್ಲಿ ನೀರೊದಗಿಸುವ ಜಲ ಜೀವನ್ ಮಿಷನ್ ಯೋಜನೆ ತುಮಕೂರು ಜಿಲ್ಲೆಯಲ್ಲಿ ಸಂಪೂರ್ಣ ಹಳ್ಳ ಹಿಡಿಯುವ ಹಂತದಲ್ಲಿದೆ. ಅನುಷ್ಠಾನಾಧಿಕಾರಿಯ ಸ್ವಜನ ಪಕ್ಷಪಾತ, ಕೋಟ್ಯಂತರ ರೂ.ಗಳ ಬ್ರಹ್ಮಾಂಡ ಭ್ರಷ್ಟಾಚಾರ, ಮೇಲ್ ಉಸ್ತುವಾರಿ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರ ದಿವ್ಯ ನಿರ್ಲಕ್ಷ್ಯದಿಂದಾಗಿ ಇಡೀ ಯೋಜನೆ ಮೂರಾಬಟ್ಟೆಯಾಗಿದೆ.
ತುಮಕೂರು ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರವೀಶ್ ಅವರು ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರ, ಇವರ ಕೃತ್ಯಗಳಿಗೆಲ್ಲ ಗೋಣು ಹಾಕಿರುವ ಇದೇ ಇಲಾಖೆಯ ಮುಖ್ಯ ಇಂಜಿನಿಯರ್ ಹಾಗೂ ಜಿಪಂ ಸಿಇಒ ಇವರುಗಳ ಕರ್ತವ್ಯ ಲೋಪದಿಂದಾಗಿ ಗುತ್ತಿಗೆ ನಿಮಯಗಳೆಲ್ಲವನ್ನ ಗಾಳಿಗೆ ತೂರಿ ಅನರ್ಹ ಗುತ್ತಿಗೆದಾರರಿಗೆ ಭಾರಿ ಮೊತ್ತದ ಗುತ್ತಿಗೆ ನೀಡಿ ಇಡೀ ಯೋಜನೆ ಹಳ್ಳಿ ಹಿಡಿಯುವಂತೆ ಮಾಡಲಾಗಿದೆ.
ಟೆಂಡರ್ ಪರಿಶೀಲನೆ ಮತ್ತು ಅನುಮೋದನೆ ಸಮಿತಿಯನ್ನು ಕಡೆಗಣಿಸಿ ಏಕಪಕ್ಷೀಯವಾಗಿ ಸಮಿತಿಯ ಗಮನಕ್ಕೂ ಬಾರದೆ ಟೆಂಡರ್ ತೆರೆದು ಕೋಟ್ಯಂತರ ರೂ.ಗಳ ಅಕ್ರಮ ಎಸಗಲಾಗಿರುವ ಕುರಿತು ಜಿಲ್ಲೆಯ ಬಹುತೇಕ ಶಾಸಕರು, ಸಂಸದರು ಸರ್ಕಾರದ ಗಮನಕ್ಕೆ ತಂದರೂ ಏನು ಮಾಡಿಕೊಳ್ಳಲು ಆಗದಂತ ಸ್ಥಿತಿಯಲ್ಲಿ ಸರ್ಕಾರ ಇದ್ದಂತೆ ಕಾಣುತ್ತಿದೆ.
ಟೆಂಡರ್ ಓಪನ್ ಮಾಡಿದ ತಕ್ಷಣ ಗುತ್ತಿಗೆದಾರರಿಗೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಬೇಕು, ಆದರೆ ಕಾರ್ಯಪಾಲಕ ಅಭಿಯಂತರ ರವೀಶ್ ಎರಡು-ಮೂರು ತಿಂಗಳಾದರೂ ಕಾಮಗಾರಿ ಮಾಡಲು ಕಾರ್ಯಾದೇಶ ನೀಡದೆ ಹಣ ಕೊಟ್ಟವರಿಗೆ ಮಾತ್ರ ಕಾರ್ಯಾದೇಶ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಪುಷ್ಠಿ ನೀಡುವಂತೆ ಜಿಲ್ಲೆಯ ಜನಪ್ರತಿನಿಧಿಗಳು ಇದೇ ರೀತಿಯ ದೂರಗಳನ್ನು ಸಿಎಂ ಮತ್ತು ಸರ್ಕಾರಕ್ಕೆ ನೀಡಿರುವುದು ಎದ್ದು ಕಾಣುತ್ತಿದೆ.
ತುಮಕೂರು ಜಿಲ್ಲೆಯ ಬಹುತೇಕ ಶಾಸಕರುಗಳು, ಮಾಜಿ ಶಾಸಕರು, ಹಾಲಿ ಸಂಸದರು ಕಾರ್ಯಪಾಲಕ ಅಭಿಯಂತರ ರವೀಶ್ ಎಸಗಿರುವ ಕೃತ್ಯಗಳ ವಿರುದ್ಧ ಸರ್ಕಾರಕ್ಕೆ ದೂರು ಕೊಟ್ಟಿದ್ದರೂ ಸರ್ಕಾರ ಕೂಡ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ನೋಡಿದರೆ ಈ ಪ್ರಭಾವಿ ಅಧಿಕಾರಿ ಸರ್ಕಾರಕ್ಕಿಂತ ದೊಡ್ಡ ಶಕ್ತಿ ಹೊಂದಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಗುಬ್ಬಿ ಮತ್ತು ತುರುವೆಕೆರೆ ತಾಲೂಕುಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾಮಗಾರಿ ಆಗದಿದ್ದರೂ ಬೋಗಸ್ ಬಿಲ್ ಪಾವತಿ ಮಾಡಿರುವ ನಿದರ್ಶನಗಳಿದ್ದರೂ ಸರ್ಕಾರ ಏಕೆ ಮೌನವಾಗಿದೆ ಎನ್ನುವುದು ಅರ್ಥವಾಗುತ್ತಿಲ್ಲ. 2023ರ ಫೆಬ್ರವರಿ ತಿಂಗಳಲ್ಲಿ ಟೆಂಡರ್ ಕರೆದು ವರ್ಷ ಕಳೆದಿದ್ದರೂ ಇಂದಿಗೂ ಕೆಲ ಗುತ್ತಿಗೆದಾರರಿಗೆ ಕಾಮಗಾರಿ ಮಾಡಲು ಕಾರ್ಯಾದೇಶ ನೀಡದಿರುವುದು ಕೂಡ ಬಹುದೊಡ್ಡ ಕರ್ತವ್ಯ ಲೋಪ ಎದ್ದುಕಾಣುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಏಕೆ ಕಣ್ಮುಚ್ಚಿ ಕೂತಿದ್ದಾರೆ, ಕರ್ತವ್ಯ ಲೋಪ ಎಸಗಿರುವ ಈ ಅಧಿಕಾರಿಗಳ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಈ ಕರ್ಮಕಾಂಡದಲ್ಲಿ ಸಚಿವರ ಪಾಲು ಇದೆಯಾ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡತೊಡಗಿದೆ.
ಏನಿದು ಯೋಜನೆ?
ತುಮಕೂರು ಜಿಲ್ಲೆಯ 10 ತಾಲೂಕಿನ 11 ವಿಧಾನಸಭಾ ಕ್ಷೇತ್ರಗಳ ಪ್ರತಿ ಮನೆ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆ ಮಹತ್ವದಾಗಿದೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು 2231 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರತಿ ಮನೆಗೆ ಕನಿಷ್ಠ ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿ ಇದಾಗಿದೆ. ತುಮಕೂರು ಜಿಲ್ಲೆಯಲ್ಲಿನ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಒಟ್ಟು 3699 ಸಂಖ್ಯೆ ಕಾಮಗಾರಿಗಳಿದ್ದು ಅಂದಾಜು ಮೊತ್ತ 2231.00 ಕೋಟಿ ರೂ.ಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಸದರಿ ಕಾಮಗಾರಿಗಳ ಅನುಷ್ಠಾನಕ್ಕೆ ಫೆಬ್ರುವರಿ 2023 ರಲ್ಲಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈಗಾಗಲೇ 1800 ಕಾಮಗಾರಿಗಳನ್ನು ಟೆಂಡರ್ ಆಧಾರದ ಮೇಲೆ ಗುತ್ತಿಗೆ ವಹಿಸಿರುವುದಾಗಿ ತಿಳಿದುಬಂದಿದೆ. ಉಳಿಕೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಶಿರಾ ಕ್ಷೇತ್ರ ಒಳಗೊಂಡಂತೆ ಇತರೆ ವಿಧಾನಸಭಾ ಕ್ಷೇತ್ರಗಳಲ್ಲಿ ತುಂಬಾ ನಿಧಾನಗತಿಯ ಕಾರ್ಯವೈಖರಿ ನಿರ್ವಹಿಸುತ್ತಿರುವುದ ಹಿಂದೆ ಯಾವ ರೀತಿಯ ತಂತ್ರ ಕುತಂತ್ರ ಅಡಗಿದೆಯೋ ತಿಳಿಯದಾಗಿದೆ.ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಭೆಗಳಲ್ಲಿ ಜಿಲ್ಲೆಯ ಬಹುತೇಕ ಶಾಸಕರು ಧ್ವನಿ ಎತ್ತಿ ಟೆಂಡರ್ ಪ್ರಕ್ರಿಯೆಯಲ್ಲಿ ಟೆಂಡರ್ ನಿಯಮಾವಳಿಗಳನ್ನು ಪರಿಗಣಿಸದೇ, ಟೆಂಡರ್ ಪರಿಶೀಲನೆ ಮತ್ತು ಅನುಮೋದನೆ ಸಮಿತಿಯನ್ನು ಕಡೆಗಣಿಸಿ ಏಕಪಕ್ಷೀಯವಾಗಿ, ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ಟೆಂಡರ್ ವಹಿಸಿರುವುದು ಎದ್ದು ಕಾಣುತ್ತಿದೆ. ಒಬ್ಬ ಮೂರನೇ ದರ್ಜೆ ಗುತ್ತಿಗೆದಾರನಿಗೆ 25 ಕೋಟಿ ರೂ. ಕಾಮಗಾರಿ ನಿರ್ವಹಿಸಲು ಯಾವುದೇ ಅರ್ಹತೆ ಇಲ್ಲದಿದ್ದರೂ ದಿಢೀರ್ ಆಗಿ ಆ ಗುತ್ತಿಗೆದಾರರಿಗೆ ಬೋಗಸ್ ವರ್ಕ್ ಡನ್ ಸರ್ಟಿಫಿಕೇಟ್ ನೀಡಿ ಹೆಚ್ಚು ಹೆಚ್ಚು ಮೊತ್ತದ ಅದರೆ 25 ಕೋಟಿಯವರೆಗೂ ಕಾಮಗಾರಿಗಳನ್ನು ವಹಿಸಿರುವ ಪ್ರಕರಣವನ್ನು ಗಂಭೀರವಾಗಿ ರಾಜ್ಯ ಸರ್ಕಾರ ಪರಿಗಣಿಸಬೇಕು. ಅನಾನುಭವಿ, ಅನರ್ಹ ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಹೇಗೆ ಸಾಧ್ಯ ಈ ಕುರಿತೇ ಸರ್ಕಾರ ಪ್ರತ್ಯೇಕ ತನಿಖೆ ಮಾಡುವ ಅಗತ್ಯ ವಿದೆ. ಅನರ್ಹ ಗುತ್ತಿಗೆದಾರರಿಗೆ 25 ಕೋಟಿ ರೂ. ತನಕ ಗುತ್ತಿಗೆ ನೀಡುವ ಮೂಲಕ ಕೋಟ್ಯಂತರ ರೂ.ಭ್ರಷ್ಟಾಚಾರ ಎಸಗಿರುವುದು ಎದ್ದು ಕಾಣುತ್ತಿದೆ. ಇನ್ನೂ ಮಹತ್ವದ ವಿಷಯ ಎಂದರೆ ಕೋಟ್ಯಂತರ ರೂ.ಗಳ ಟೆಂಡರ್ ನೀಡುವಲ್ಲಿ ಇಇ ರವೀಶ್ ಅವರು ಸ್ವಜನ ಪಕ್ಷಪಾತ ಎಸಗಿ ಕಾಮಗಾರಿ ಹಂಚಿಕೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿ ಬಂದಿದೆ. ಈ ವಿಷಯವಾಗಿ ಬಿಡ್ ನಲ್ಲಿ ಭಾಗವಹಿಸಿದ್ದ ಬಹುತೇಕ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ. ಕೆಲವು ಕಡೆ ಕಾಮಗಾರಿ ನಿರ್ವಹಿಸದೇ ಭ್ರಷ್ಟಾಚಾರಕ್ಕೋಸ್ಕರವೇ ಬಿಲ್ ಪಾವತಿಸಿರುವುದು, ಟೆಂಡರ್ ಸಮಿತಿಯನ್ನು ಪರಿಗಣಿಸದೇ ಟೆಂಡರ್ ಅನುಮೋದಿಸಿ, ಇದನ್ನು ಸರಿಪಡಿಸಲು ಟೆಂಡರ್ ಸಮಿತಿಯ ಸದಸ್ಯರುಗಳ ಮೇಲೆ ಘಟನೋತ್ತರವಾಗಿ ಸಹಿ ಮಾಡುವಂತೆ ಒತ್ತಡ ತಂದಿರುವುದು, ಇಂತಹ ಎಲ್ಲಾ ವಿಚಾರಗಳು ಸಾರ್ವಜನಿಕ ಸಭೆಗಳಲ್ಲಿ ಮತ್ತು ಗುತ್ತಿಗೆದಾರರಿಂದ, ಸಂಘ ಸಂಸ್ಥೆಗಳ ಮೂಲಕ ಸಾರ್ವಜನಿಕ ಜಾಲತಾಣಗಳ ಮುಖೇನಾ ಚರ್ಚೆ ಆಗುತ್ತಿದ್ದರೂ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪರಮೇಶ್ವರ್ ಅವರ ದಿವ್ಯ ಮೌನ ಚರ್ಚೆಗೆ ಗ್ರಾಸವಾಗಿದೆ.
ಕೆಲವು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ ಕೂಡ ಅನುಷ್ಠಾನಾಧಿಕಾರಿ ರವೀಶ್ ಅವರು ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ನೀಡಿಲ್ಲ ಎನ್ನುವ ಗಂಭೀರ ಆರೋಪ ಕೂಡ ಕೇಳಿ ಬಂದಿದೆ. ಕಾರ್ಯಾದೇಶ ನೀಡಿಯೂ ಸಹ ಆರೇಳು ತಿಂಗಳುಗಳ ಕಾಲ, ಸಂಬಂಧಿಸಿದ ಕಡತಗಳನ್ನು ರವೀಶ್ ಅವರು ತನ್ನ ವಶದಲ್ಲಿಯೇ ಇಟ್ಟುಕೊಂಡು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳು ಸಾಮಾನ್ಯವಾಗಿ ಕೇಳಿ ಬಂದಿದೆ. ಗುತ್ತಿಗೆದಾರರು ದಿನವೂ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಒದಗಿ ಬಂದಿದೆ.ರವೀಶ್ ಎನ್ನುವ ಅಧಿಕಾರಿಯು ಟೆಂಡರ್ ಸಮಿತಿ ಕಡೆಗಣಿಸಿ, ಸ್ವಜನ ಪಕ್ಷಪಾತ ಎಸಗಿ, ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ಟೆಂಡರ್ ವಹಿಸಿರುವುದು, ಉದ್ದೇಶ ಪೂರ್ವಕವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬ ದೋರಣೆ ಅನುಸರಿಸಿರುವುದು, ಕೆಲವು ಕಡೆ ಕಾಮಗಾರಿಗಳನ್ನು ನಿರ್ವಹಿಸದೇ ಬೋಗಸ್ ಬಿಲ್ಲುಗಳನ್ನು ಪಾವತಿಸಿರುವುದನ್ನು ನೋಡಿದರೆ ಕೋಟ್ಯಂತರ ರೂ.ಗಳ ಭಾರೀ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆ ಅಧಿಕಾರಿ ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಇತರೆ ಅಧಿಕಾರಿಗಳ ಮೇಲೆ ಒತ್ತಡ ತಂದಿರುವುದು ಗುಟ್ಟಾಗಿ ಉಳಿದಿಲ್ಲ.
ಈ ಎಲ್ಲಾ ಸತ್ಯಾಂಶಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹೊರತೆಗೆಯಲು ಸದರಿ ಅಧಿಕಾರಿಯನ್ನು ಅಮಾನತ್ತಿನಲ್ಲಿರಿಸಿ ವಿಚಾರಣೆಗೊಳಿಪಡಿಸಲು ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಿಸಿದ ಆರ್ಡಿಪಿಆರ್ ಇಲಾಖೆ ಸಚಿವರು ವಿಫಲವಾಗಿರುವುದರಿಂದ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮತ್ತು ಘನ ನ್ಯಾಯಾಲಯಗಳ ನ್ಯಾಯಾಧೀಶರು ತಮ್ಮ ವಿಟೊ ಅಧಿಕಾರಿ ಬಳಸಿಕೊಂಡು ಸ್ವಯಂ ದೂರು ದಾಖಲು ಮಾಡಿ ತನಿಖೆಗೆ ಆದೇಶ ಮಾಡಬೇಕಾಗಿದೆ.
ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ನೀಡದಿರುವುದು ಮಾನವ ಹಕ್ಕುಗಳ ಸ್ವಷ್ಟ ಉಲ್ಲಂಘನೆಯಾಗಿರುವುದು ಎದ್ದು ಕಾಣುತ್ತಿದೆ. ಸರ್ಕಾರ, ಮುಖ್ಯಮಂತ್ರಿಗಳು, ಆರ್ ಡಿಪಿಆರ್ ಇಲಾಖೆ ಸಚಿವರು ಈಗಲಾದರೂ ಎಚ್ಚೆತ್ತುಕೊಂಡು ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸಮಗ್ರ ತನಿಖೆ ಮಾಡಿ ಶಿಸ್ತು ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಾಗಿದೆ.
ದೂರು ನೀಡಿದ ಜನಪ್ರತಿನಿಧಿಗಳು-
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರಿಗೆ ಇಡೀ ಕಾಮಗಾರಿ ಲೋಪದೋಷ, ಭ್ರಷ್ಟಾಚಾರ ಕುರಿತು ಟಿಪ್ಪಣಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಸಂಸದ ಜಿ.ಎಸ್.ಬಸವರಾಜ್ ಯೋಜನೆಯಲ್ಲಿ ಅಕ್ರಮ, ಭ್ರಷ್ಟಾಚಾರ ಅವ್ಯವಹಾರ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇವರ ಆರೋಪ ಮತ್ತು ಇವರು ಸರ್ಕಾರಕ್ಕೆ ಬರೆದ ಪತ್ರಕ್ಕೆ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪ ಸ್ವಾಗತಿಸಿ ತನಿಖೆಗೆ ಒತ್ತಾಯಿಸಿದ್ದಾರೆ. ಇದಲ್ಲದೆ ತುರುವೆಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ.ಎಸ್.ಜಯರಾಮ್ ಇವರುಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಲಿಖಿತವಾಗಿ ಪತ್ರ ಬರೆದು ಜೆಜೆಎಂ ಯೋಜನೆಯಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡರು ಅಧಿವೇಶನದಲ್ಲಿ ಪ್ರಶ್ನಿಸಿ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕಾರ್ಯಪಾಲಕ ಅಭಿಯಂತರ ಸೇರಿದಂತೆ ಇತರರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಮಾನ್ಯ ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ. ಎಸ್ ಸಿಎಸ್ ಪಿ ಮತ್ತು ಟಿಎಸ್ ಪಿ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಕರ್ನಾಟಕ ಮೂಲ ನಿವಾಸಿಗಳ ಮಹಾಸಭಾ, ವಾಲ್ಮೀಕಿ ಸ್ವಾಭಿಮಾನಿ ಸಂಘ, ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಬಣ, ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಮತ್ತಿತರ ಸಂಘಟನೆಗಳು ಬೆಂಗಳೂರಿನಲ್ಲಿ ಜಲ ಜೀವನ್ ಮಿಷನ್ ಯೋಜನೆ ಕುರಿತು ಬೃಹತ್ ಹೋರಾಟ ಮಾಡಿದ್ದವು.
ಇದಕ್ಕೆಲ್ಲ ಸ್ಪಂದಿಸಬೇಕಿದ್ದ ಸರ್ಕಾರ ಏನೂ ಕ್ರಮ ಕೈಗೊಳ್ಳದೆ ಇರುವುದನ್ನು ನೋಡಿದರೆ ಸರ್ಕಾರ ಸತ್ತಿದೆಯೋ? ಬದುಕಿದೆಯೋ? ಎನ್ನುವ ಅನುಮಾನ ಮೂಡಿದೆ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೂಡಲೇ ಇದರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಸರ್ಕಾರಕ್ಕಿಂತ ಕಾರ್ಯಪಾಲಕ ಅಭಿಯಂತರನೇ ದೊಡ್ಡ ಶಕ್ತಿಯೇ?
ಸಂಪುಟದರ್ಜೆಯ ಕರ್ನಾಟಕ ಸರ್ಕಾರದ ವಿಶೇಷ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಹಾಲಿ ಸಂಸದರು, ಹಾಲಿ ಶಾಸಕರು, ಮಾಜಿ ಶಾಸಕರು, ದಲಿತ ಸಂಘಟನೆಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹೋರಾಟ ಮಾಡಿ ಜಲ ಜೀವನ್ ಮಿಷನ್ ಯೋಜನೆ ಅಡಿ ಆಗಿರುವ ಲೋಪದೋಷ, ನಿಯಮಗಳನ್ನು ಗಾಳಿಗೆ ತೂರು ಟೆಂಡರ್ ನೀಡಿರುವುದು, ಈ ಹಂತದಲ್ಲಿ ನಡೆದಿರಬಹುದಾದ ಭಾರೀ ಭ್ರಷ್ಟಾಚಾರ, ಕಳಪೆ ಕಾಮಗಾರಿ, ಬೋಗಸ್ ಬಿಲ್ ಹಾವಳಿ, ಸಿಸಿ ರಸ್ತೆ ಅಗೆತ, ಕೋಟ್ಯಂತರ ರೂ.ಖರ್ಚು ಮಾಡಿದ್ದರೂ ಸಾರ್ವಜನಿಕರಿಗೆ ಹನಿ ನೀರು ಪೂರೈಕೆ ಮಾಡದೆ ಕರ್ತವ್ಯ ಲೋಪ ಎಸಗಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರವೀಶ್, ತುಮಕೂರು, ಗುಬ್ಬಿ, ತುರುವೆಕೆರೆ ಮತ್ತಿತರ ತಾಲೂಕುಗಳ ಎಇಇ ಗಳ ವಿರುದ್ಧ ಸೂಕ್ತ ತನಿಖೆ ಮಾಡಬೇಕಿದೆ. ತನಿಖೆ ಪೂರ್ಣಗೊಳ್ಳುವ ತನಕ ಸಂಬಂಧಿಸಿದ ಅನುಷ್ಠಾನಾಧಿಕಾರಿಗಳೆಲ್ಲರನ್ನೂ ಅಮಾನತ್ತಿನಲ್ಲಿಟ್ಟು ತನಿಖೆ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕಿದೆ. ಜನ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಹಲವಾರು ಅಕ್ರಮ, ಅವ್ಯವಹಾರ ಎಸಗಿರುವ ವ್ಯಕ್ತಿ ಇಇ ರವೀಶ್ ಹೆಚ್ಚು ಶಕ್ತಿಶಾಲಿಯಾಗಿದ್ದು ಸರ್ಕಾರ ಇವರನ್ನು ಏನು ಮಾಡಿಕೊಳ್ಳಲು ಆಗದ ಸ್ಥಿತಿ ತಲುಪಿದೆಯಾ ಎನ್ನುವ ಅನುಮಾನ ಕಾಡತೊಡಗಿದೆ. ಸರ್ಕಾರಕ್ಕಿಂತ ಈ ಅಧಿಕಾರಿಗಳೇ ದೊಡ್ಡ ಶಕ್ತಿಯಾಗಿದ್ದಾರೆ. ಇದಕ್ಕೆಲ್ಲ ಮುಕ್ತಿ ಕಾಣಿಸಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧ್ಯ ಪ್ರವೇಶ ಮಾಡಬೇಕು. ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ?
ಇದೇ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಕೈಗೊಂಡಿದ್ದ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಅನುಷ್ಠಾನಗೊಳಿಸಲು ವಿಫಲರಾಗಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಪ್ರಭಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಲಾಸ ಭೋಸ್ಲೆ, ಕೊಪ್ಪಳ ವಿಭಾಗದ ಬಸನಗೌಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮನತ್ತುಗೊಳಿಸಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ ಆದೇಶ ಹೊರಡಿಸಿದ್ದರು.
ಸರ್ಕಾರದ ಹಂತದಲ್ಲಿ ಪರಿಶೀಲನೆ ಮಾಡಿ ಇಬ್ಬರು ಅಧಿಕಾರಿಗಳ ವಿರುದ್ಧ ಗಂಭೀರ ಸ್ವರೂಪದ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವದರಿಂದ ಇಲಾಖೆ ವಿಚಾರಣೆ ಕೈಗೊಳ್ಳುವುದನ್ನು ಬಾಕಿ ಇಟ್ಟು ಸೇವೆಯಿಂದ ಅಮನತ್ತುಗೊಳಿಸಿ ಆದೇಶಿಸಿರುತ್ತಾರೆ.
ಆದರೆ ಅದಕ್ಕಿಂತ ಗಂಭೀರ ಪ್ರಮಾಣದ ಲೋಪಗಳು ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ನಡೆದಿದ್ದರೂ ತುಮಕೂರು ಜಿಲ್ಲೆಯ ಕಾರ್ಯಪಾಲಕ ಅಭಿಯಂತರ ರವೀಶ್, ಎಇಇಗಳು, ಗುತ್ತಿಗೆದಾರರು ಸೇರಿದಂತೆ ಮತ್ತಿತರರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಹಲವು ಅನುಮಾನುಗಳು ಮೂಡತೊಡಗಿವೆ.
ಲೋಪದೋಷ: ಕೊಪ್ಪಳ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿ 11 ಅಧಿಕಾರಿಗಳ ತಂಡ ರಚಿಸಿ ಕಾಮಗಾರಿಗಳ ತಪಾಸಣೆ ನಡೆಸಿ ತನಿಖಾ ವರದಿ ಸಲ್ಲಿಸಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಿದ್ದರು. ಕಾಮಗಾರಿಯಲ್ಲಿನ ಲೋಪದೋಷ, ಕಳಪೆ ಕಾಮಗಾರಿ ಕುರಿತು ವರದಿ ನೀಡಿದ್ದರಿಂದ ವಿಲಾಸ್ ಮತ್ತು ಬಸನಗೌಡ ಅವರನ್ನು ಅಮಾನತ್ತು ಮಾಡಲಾಗಿತ್ತು.
ಅದೇ ಮಾದರಿಯಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಏಕೆ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ಮಾಡಿಸಿ ಶಿಸ್ತು ಕ್ರಮ ಕೈಗಳ್ಳುತ್ತಿಲ್ಲ ಎನ್ನುವುದು ನಿಗೂಢವಾಗಿದೆ.
ಜೆಜೆಎಂ ಕಾಮಗಾರಿ ಕುರಿತು ತುಮಕೂರು ಜಿಪಂ ಸಿಇಒ ಜಿ.ಪ್ರಭು ಅವರನ್ನು ಮೊಬೈಲ್, ವಾಟ್ಸ್ಅಪ್ ಮೂಲಕ ಸಂಪರ್ಕಿಸಿದರೂ ಅವರು ದೂರವಾಣಿ ಕರೆ ಸ್ಪೀಕರಿಸಲಿಲ್ಲ. ಹಾಗಾಗಿ ಅವರ ಹೇಳಿಕೆ ಕೋಟ್ ಮಾಡಲಾಗಿಲ್ಲ.
ಕಾಮಗಾರಿ ಷರತ್ತುಗಳು:1) ಈ ಅನುಮೋದಿತ ಕುಡಿಯುವ ನೀರಿನ ಯೋಜನೆಯ ವ್ಯಾಪ್ತಿಗೆ ಬರುವ ಹಳ್ಳಿ / ಜನವಸತಿಗಳು ಮತ್ಯಾವುದೇ ಯೋಜನೆಗಳಡಿ ಸೇರ್ಪಡೆಯಾಗಿರಬಾರದು.2) ಈ ಯೋಜನೆಯ DBOT ಟೆಂಡರ್ ಗಳನ್ನು KTPP ಪಾರರ್ದಶಕ ನಿಯಮಗಳನ್ನು ಅನುಸರಿಸಿ ಅದರಂತೆ ಕ್ರಮವಹಿಸತಕ್ಕದ್ದು.3) ಟೆಂಡರ್ ಅವಾರ್ಡ್ ಮಾಡುವ ಮೊದಲು ಅಗತ್ಯವಿರುವ ಅನುದಾನವನ್ನು ಲಭ್ಯತೆ ಮಾಡಿಕೊಂಡು ಕ್ರಿಯಾ ಯೋಜನೆಯಲ್ಲಿ ಅಳವಡಿಸಿದ ನಂತರ ನಿಯಮಾನುಸಾರ ಮುಂದಿನ ಕ್ರಮವಹಿಸುವುದು.4) ಈ ಯೋಜನೆಯ ಅನುಷ್ಠಾನ ಮತ್ತು ಅನುದಾನ ವಿನಿಯೋಗದಲ್ಲಿ ಅನುಮೋದಿತ ಟೆಂಡರ್ ಮೊತ್ತ ಮೀರಿ ಹೆಚ್ಚಳವಾಗದಂತೆ ಅನುಷ್ಠಾನ ಅಧಿಕಾರಿಗಳು ನಿಗಾವಹಿಸಿ ಪ್ರಚಲಿತ ನಿಯಮಗಳನುಸಾರ ಅಗತ್ಯವಿರುವ ನಿಬಂಧನೆಗಳನ್ನು ಅಳವಡಿಸಿಕೊಂಡು ಸೂಕ್ತ ರೀತಿಯಲ್ಲಿ ಒಡಂಬಡಿಕೆ ಮಾಡಿಕೊಳ್ಳತಕ್ಕದ್ದು.
5) ಯಶಸ್ವಿ ಗುತ್ತಿಗೆದಾರರು ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಿ ಕಾರ್ಯಗತಗೊಳಿಸಬೇಕು. ತದನಂತರ ಐದು ವರ್ಷಗಳ ಕಾಲ ಸದರಿ ಯೋಜನೆಯ ಸಂಪೂರ್ಣ ನಿರ್ವಹಣೆ ಹಾಗೂ ಕಾರ್ಯಾಚರಣೆ ಜವಾಬ್ದಾರಿಯನ್ನು (ವಿದ್ಯುತ್ ಶುಲ್ಕ ಹೊರತುಪಡಿಸಿ) ಸದರಿ ಸಂಸ್ಥೆ ನಿರ್ವಹಿಸತಕ್ಕದ್ದು.6) ಯೋಜನಾ ವ್ಯಾಪ್ತಿಯ ಜನವಸತಿಗಳಿಗೆ 55 (ಐವತ್ತೈದು) LPCD ನೀರನ್ನು ಒದಗಿಸುವುದು. ಯಾವುದೇ ಕಾರಣಕ್ಕೂ ಅನುಮೋದಿತ ಯೋಜನಾ ಅಂದಾಜು ವೆಚ್ಚದಲ್ಲಿ ಹೆಚ್ಚಳವಾದಲ್ಲಿ ಗುತ್ತಿಗೆದಾರರೇ ಅಂತಹ ಹೆಚ್ಚಳ ಭರಿಸತಕ್ಕದ್ದು.7)ಗುತ್ತಿಗೆದಾರರು ಸಿದ್ಧಪಡಿಸುವ ಡಿ.ಪಿ.ಆರ್ಗೆ ಮುಖ್ಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ರವರ ಹಂತದಲ್ಲಿರುವ DBOT ತಾಂತ್ರಿಕ ಸಮಿತಿ, ತಾಂತ್ರಿಕ ಸಿಂಧುತ್ವವನ್ನು ಪರಿಶೀಲಿಸಿ ದೃಢೀಕರಿಸಬೇಕು. ಹೀಗೆ ದೃಢೀಕರಿಸುವಾಗ ವಾಸ್ತವಿಕವಾಗಿ ಅಗತ್ಯವಿರುವ ಪ್ರಮಾಣದ ಶುದ್ಧ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆಗೆ ಅಗತ್ಯವಿರುವ ಎಲ್ಲಾ ತಾಂತ್ರಿಕ ವಿನ್ಯಾಸಗಳು ಮತ್ತು ಕಾಮಗಾರಿಗಳು ಪೂರಕವಾಗಿರುವುದನ್ನು ದೃಢಪಡಿಸಿಕೊಳ್ಳಬೇಕು.8) ಈ ಯೋಜನೆಯ ಕಾಮಗಾರಿಯನ್ನು 18 ತಿಂಗಳ ಕಾಲಮಿತಿಯೊಳಗೆ ಅನುಷ್ಠಾನಗೊಳಿಸತಕ್ಕದ್ದು. ಯಾವುದೇ ವಿಳಂಬಕ್ಕೆ ಅವಕಾಶ ಕೂಡದು ಯೋಜನೆಯ ಘಟಕದಲ್ಲಿನ ಸಾಮಗ್ರಿಗಳ ಬೆಲೆ ಹೆಚ್ಚಳಕ್ಕೆ ಅವಕಾಶವಿರುವುದಿಲ್ಲ. ಬಲ್ಕ್ವಾಟರ್ ಮೀಟರ್ಗಳನ್ನು ಎಲ್ಲಾ ಜನವಸತಿಗಳ OHT ಬಳಿ ಅಳವಡಿಸತಕ್ಕದ್ದು.
9) ಯೋಜನಾ ಅಂದಾಜು ಮೊತ್ತದ ಕನಿಷ್ಠ 10%ನ್ನು ಯೋಜನೆ ಕಾರ್ಯಗತಗೊಳಿಸಿ ತೃಪ್ತಿಕರ O&M ವ್ಯವಸ್ಥೆ ನಿರೂಪಿಸುವ ಕಾರ್ಯಕ್ಷಮತೆ ಆಧರಿಸಿ ನಂತರ ಗುತ್ತಿಗೆದಾರರಿಗೆ ಪಾವತಿಸಬೇಕು.10) ಈ ಯೋಜನೆಯ ಮುಖ್ಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ ನಂತರ, ಅವುಗಳ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಮತ್ತು PMC ವರದಿ ಆಧರಿಸಿ ಅನುಮೋದಿತ ToR ಹಾಗೂ ಟೆಂಡರ್ ಕರಾರಿನಂತೆ ನಿಯಮಾನುಸಾರ ಬಿಲ್ ಪಾವತಿಸಲು ಅನುಷ್ಠಾನಾಧಿಕಾರಿಗಳು ಹಾಗೂ ಮುಖ್ಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ರವರು ಕ್ರಮವಹಿಸಬೇಕು. ಕಾಮಗಾರಿಯ ಕಾಲಕಾಲಿಕ ಪ್ರಗತಿ ಮತ್ತು ಗುಣಮಟ್ಟ ಪರಿಶೀಲಿಸಿ ಮುಖ್ಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ಇವರಿಗೆ ವರದಿ ಮಾಡತಕ್ಕದ್ದು.11) ಈ ಯೋಜನೆಯ ವಿನ್ಯಾಸದ ಕಾರ್ಯಸಿಂಧುತ್ವ ಪರಿಶೀಲಿಸುವುದು, ಕಾಲಮಿತಿಯೊಳಗೆ ಯೋಜನೆ ಅನುಷ್ಠಾನಗೊಳಿಸುವುದು ಮತ್ತು ಯೋಜನೆಯ ಕಾಮಗಾರಿಗಳ ಗುಣಮಟ್ಟ ಪರಿವೀಕ್ಷಣೆ ಸಲುವಾಗಿ ಆಗತ್ಯವಿರುವ ಯೋಜನಾ ಉಸ್ತುವಾರಿ ಘಟಕವನ್ನು ಟೆಂಡರ್ ಮುಖೇನ ಗೊತ್ತುಪಡಿಸಿ, ಸರ್ಕಾರದ ಅನುಮೋದನೆ ಪಡೆಯಲು ಮುಖ್ಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ರವರು ಜರೂರಾಗಿ ಕ್ರಮವಹಿಸತಕ್ಕದ್ದು.12) ಮೇಲ್ಕಂಡ ಅನುಮೋದಿತ ಮೊತ್ತ DBOT ತಾಂತ್ರಿಕ ಸಮಿತಿ ದೃಢೀಕರಿಸುವ ಯೋಜನೆಯ ಮುಖ್ಯ ಕಾಮಗಾರಿಗಳ ವಾಸ್ತವಿಕ ಅಂದಾಜು ಮೊತ್ತದ ನಿಬಂಧನೆಗೊಳಪಟ್ಟಿರುತ್ತದೆ. ಅಂತೆಯೇ, ಅನುಮೋದಿತ ಸಂಸ್ಥೆಯೊಡನೆ MoU/ಕರಾರು ಪತ್ರ ಮಾಡಿಕೊಳ್ಳುವ ಮೊದಲು ಗರಿಷ್ಠ ಮಿತವ್ಯಯ ಅಳವಡಿಸಿ, ಸರ್ಕಾರದ ಅನುಮತಿ ಪಡೆದು ಯೋಜನೆಯ ಅನುಷ್ಠಾನ ಕುರಿತು ಮುಖ್ಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ರವರು ಮುಂದಿನ ಕ್ರಮವಹಿಸತಕ್ಕದ್ದು ಎನ್ನುವ ಬಹುತೇಕ ಷರತ್ತುಗಳನ್ನು ಅಧಿಕಾರಿಗಳು ಗುತ್ತಿಗೆದಾರರು ನೀಡುವ ಎಂಜಲು ಕಾಸಿಗೆ ಬಲಿಯಾಗಿ ಎಲ್ಲ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಆದರೂ ಸರ್ಕಾರ ಮತ್ತು ಸಂಬಂಧಿಸಿದ ಸಚಿವರು ದಿವ್ಯ ಮೌನಕ್ಕೆ ಶರಣಾಗಿದ್ದಾರೆ.