i
ದಲಿತ-ಬಲಿತ ಪತ್ರಿಕೆಗಳ ನಡುವೆ ಪೈಪೋಟಿ ಸಲ್ಲದು :ಡಾ.ಪುಷ್ಪಾ ಅಮರನಾಥ್ …
ಚಂದ್ರವಳ್ಳಿ ನ್ಯೂಸ್, ಮೈಸೂರು:
ಪ್ರಸ್ತುತ ದಲಿತ ಮತ್ತು ಬಲಿತ ರಾಜಕಾರಣದ ನಡುವೆ ಸಂಘರ್ಷ ಏರ್ಪಟ್ಟಿರುವಂತೆಯೇ ಮಾಧ್ಯಮ ಕ್ಷೇತ್ರದಲ್ಲೂ ದಲಿತ ಮತ್ತು ಬಲಿತ ಪತ್ರಿಕೋದ್ಯಮದ ನಡುವೆ ಸಮರ ಏರ್ಪಟ್ಟಿದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ಮೈಸೂರು ನಗರ ಹೊರ ಹೊಲಯದ ಚಿತ್ರವನ ರೆಸಾರ್ಟ್ನಲ್ಲಿ ನಡೆದ `ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಉದ್ಯಮಶೀಲತೆ ಮತ್ತು ಸವಾಲುಗಳು‘ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗೆ ಪತ್ರಿಕೆಗಳ ಸಾಮಾಜಿಕ ಹೊಣೆಗಾರಿಕೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಾಲಿಕತ್ವದ ಪತ್ರಿಕೆಗಳು ಬಂಡವಾಳದ ಕೊರತೆ, ಆಧುನಿಕತೆಯ ಭರಾಟೆಯೊಳಗೆ ನಲುಗಿ ಹೋಗಿವೆ. ಆದ್ದರಿಂದ ಬಲಿತ ಪತ್ರಿಕೆಗಳ ಜೊತೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಕಾರ ಜಾಹೀರಾತು ಸೇರಿದಂತೆ ಎಲ್ಲ ಬಗೆಯ ಮೀಸಲಾತಿ ಸೌಲಭ್ಯವನ್ನು ಮಾಧ್ಯಮ ಕ್ಷೇತ್ರಕ್ಕೆ ವಿಸ್ತರಿಸಬೇಕೆಂದು ತಿಳಿಸಿದರು.
ದಲಿತ ಪತ್ರಕರ್ತರು ಸಮಾಜ ಸುಧಾರಣೆಯ ಜೊತೆಗೆ ದಲಿತ ರಾಜಕಾರಣವನ್ನು ಗುರುತಿಸುವತ್ತ ಚಿಂತನೆ ನಡೆಸಬೇಕು. ಏಕೆಂದರೆ, ಪತ್ರಕರ್ತರು ಮತ್ತು ರಾಜಕಾರಣಿಗಳು ಬೇರೆ-ಬೇರೆಯಾಗಿ ಉಳಿದಿಲ್ಲ. ರಾಜ್ಯದಲ್ಲಿ ಹೊಸ ನಾಯಕತ್ವವನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕೆಂದು ಮನವಿ ಮಾಡಿದರು.
ವಿಷಯ ಕುರಿತು ಮಾತನಾಡಿದ ಪತ್ರಕರ್ತ ಕೆ.ದೀಪಕ್, ಪತ್ರಿಕೋದ್ಯಮದ ಮುಖ್ಯ ಧ್ಯೇಯ ಸಮಾಜಸೇವೆ ಎಂದು ಗಾಂಧೀ ಹೇಳಿದ್ದಾರೆ. ಭಾರತ ಪತ್ರಿಕೋದ್ಯಮ ಅಂದು ವೃತ್ತಿಯಾಗಿತ್ತು, ಇಂದು ವ್ಯಾಪಾರವಾಗಿದೆ ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ. ಇದರ ನಡುವೆ ಪತ್ರಕರ್ತರು ಯಶಸ್ವಿ ಉದ್ಯಮಿಗಳಾಗಬೇಕಾದರೆ ಲಾಭದ ಬಗ್ಗೆ ಯೋಜಿಸಬೇಕು. ಲಾಭದ ಬಗ್ಗೆ ಯೋಚಿಸಿದರೆ ಪತ್ರಿಕಾ ಮೌಲ್ಯವನ್ನು ಬಿಡಬೇಕು. ಇಂತಃ ಸಂದಿಗ್ಧತೆಯಲ್ಲಿ ಮಾಧ್ಯಮ ಕ್ಷೇತ್ರ ಸಿಲುಕಿದೆ ಎಂದು ವಿಷಾಧಿಸಿದರು.
ದಲಿತ ಪತ್ರಕರ್ತರು ಯಶಸ್ವಿ ಉದ್ಯಮಶೀಲತೆಯನ್ನು ಮೈಗೂಡಿಸಿಕೊಳ್ಳಬೇಕಾದರೆ, ಅವರು ಸಾಲ ಮಾಡುವ ಧೈರ್ಯ, ಹೊಸತನಕ್ಕೆ ಹೊಂದಿಕೊಳ್ಳುವ ಗುಣ, ಸವಾಲುಗಳನ್ನು ಎದುರಿಸುವ ಧೈರ್ಯ, ನಾಯಕತ್ವದ ಗುಣ, ದೂರದೃಷ್ಟಿಯನ್ನು ಹೊಂದಿರಬೇಕು. ಹಾಗೂ, ತಂತ್ರಜ್ಞಾನ ಬದಲಾದಂತೆ ನಾವೂ ಬದಲಾವಣೆಗೆ ಹೊಂದಿಕೊಳ್ಳಬೇಕು. ನಮ್ಮ ಪತ್ರಿಕೆಗಳು ವಾರ್ತಾ ಇಲಾಖೆಗೆ ತಲುಪುವ ಪತ್ರಿಕೆಗಳಾಗಿರದೆ, ಜನರನ್ನು ತಲುಪವ ಪತ್ರಿಕೆಯಾಗಬೇಕೆಂದು ತಿಳಿಸಿದರು. ಎಂದು ತಿಳಿಸಿದರು.
ಇಂದು ದಲಿತ ಪತ್ರಕರ್ತರು ಮತ್ತು ದಲಿತ ಮಾಲೀಕತ್ವದ ಪತ್ರಿಕೆಗಳನ್ನು ಮೂರನೇ ದರ್ಜೆ ಪತ್ರಕರ್ತರು ಮತ್ತು ಪತ್ರಿಕೆಗಳಂತೆ ಸರಕಾರ ಮತ್ತು ವ್ಯವಸ್ಥೆ ಕಾಣುತ್ತಿದೆ. ಇದು ಬದಲಾಗಬೇಕಾದರೆ, ನಾವು ತಮ್ಮ ಸಾಮಾಜಿಕ ಬದ್ಧತೆ ಮತ್ತು ವೃತ್ತಿ ಪರತೆಯನ್ನು ಗಟ್ಟಿಕೊಳಿಸಿಕೊಳ್ಳಬೇಕೆಂದರು. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಎಷ್ಟು ಮುಖ್ಯವೋ ನಮ್ಮಿಂದ ಸಮಾಜ ನಿರೀಕ್ಷೆ ಮಾಡುತ್ತಿರುವುದನ್ನು ಈಡೇರಿಸುವುದೂ ಸಹ ಅಷ್ಟೇ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರದ ಜಾಹೀರಾತು ತಾರತಮ್ಯವನ್ನು ಹೋಗಲಾಡಿಸಬೇಕು. ಆರ್ಥಿಕ ಸಂಕಷ್ಟದ ನಡುವೆಯೂ ಹತ್ತಾರು ವರ್ಷಗಳಿಂದ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳಿಗೆ ವಿಶೇಷವಾಗಿ ಹೆಚ್ಚುವರಿ ಜಾಹೀರಾತು ನೀಡಿ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚೆಲುವರಾಜು ವಹಿಸಿದ್ದರು. ಕಾರ್ಯಕ್ರಮವನ್ನು ಎನ್. ರವಿಕುಮಾರ್ (ಟೆಲೆಕ್ಸ್ ) ಸಂಯೋಜನೆ ಮಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 80ಕ್ಕೂ ಹೆಚ್ಚು ಪತ್ರಿಕೆಗಳ ಸಂಪಾದಕರು ಭಾಗವಹಿಸಿದ್ದರು.