i
ಪಾಕ್ ಪರ ಘೋಷಣೆ, ತನಿಖೆ ಅವಶ್ಯಕತೆ ಇಲ್ಲ: ವಿಜಯೇಂದ್ರ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ತನಿಖೆ ನಡೆಸುವ ಅವಶ್ಯಕತೆ ಇಲ್ಲ. ಘೋಷಣೆ ಕೂಗಿದವರನ್ನು ಮೊದಲು ಒದ್ದು ಒಳಗೆ ಹಾಕಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಶಿಕಾರಿಪುರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದ್ರೋಹಿಗಳನ್ನು ಹಿಡಿಯಿರಿ ಅಂದ್ರೆ, ದೇಶದ್ರೋಹಿಗಳ ವಿರುದ್ಧ ದನಿ ಎತ್ತಿದವರ ವಿರುದ್ಧ ಕ್ರಮ ತೆಗೆದುಕೊಳ್ತಿರಾ ಎಂದು ಪ್ರಶ್ನಿಸಿದರು.
ನಟ ಪ್ರ್ರಕಾಶ್ ರೈ ಹೇಳಿಕೆಗೆ ಕಿಡಿ:
ಯಾರೋ ಒಬ್ಬ ಅಯೋಗ್ಯ ಮಾತಾಡ್ತಾರೆ ಅಂತಾ ಅವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಮೋದಿಯವರನ್ನು ದೇಶದ ಎಲ್ಲಾ ವರ್ಗದ ಜನರು ಒಪ್ಪಿದ್ದಾರೆ. ದೇಶದ ಪ್ರಧಾನಿಯಾಗಿ ಮೋದಿಯವರೇ ಆಯ್ಕೆಯಾಗಬೇಕೆಂದು ಜನರು ಬಯಸಿದ್ದಾರೆ. ಖರ್ಗೆಯವರು ಕೂಡ ಅದೇ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ೪೦೦ಕ್ಕೂ ಹೆಚ್ಚು ಸೀಟು ಗೆದ್ದು ಮೋದಿ ಪ್ರಧಾನಿಯಾಗ್ತಾರೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಮೋದಿಯವರೇ ಪ್ರಧಾನಿ ಆಗುತ್ತಾರೆ. ಉಡಾಫೆಯಾಗಿ ಮಾತನಾಡುವವರಿಗೆ ದೇಶದ ಜನರೇ ಉತ್ತರಿಸುತ್ತಾರೆ ಎಂದು ಹೇಳಿದರು.
ಶಾಸಕ ಸೋಮಶೇಖರ್, ಹೆಬ್ಬಾರ್ ವಿರುದ್ಧ ಕ್ರಮ:
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಎಸ್.ಟಿ.ಸೋಮಶೇಖರ್ ಹಾಗೂ ಮತದಾನದಿಂದ ಹಿಂದೆ ಸರಿದ ಶಿವರಾಂ ಹೆಬ್ಬಾರ್ ವಿರುದ್ಧ ಕೇಂದ್ರದ ನಾಯಕರು ಕಾನೂನು ತಜ್ಞರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಲೋಕಸಭೆ ಚುನಾವಣೆ ಕ್ಷೇತ್ರ ಹಂಚಿಕೆ ವಿಚಾರ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸೀಟು ಹಂಚಿಕೆ ಕುರಿತು ಮುಂದಿನ ವಾರದಲ್ಲಿ ಜೆಡಿಎಸ್ ಜೊತೆಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಮಂಡ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದರು.