i
ಗ್ರಾಪಂ ವಿವಿಧ ಬೇಡಿಕೆ ಈಡೇರಿಕೆಗೆ ಶೀಘ್ರವೇ ರಾಜ್ಯದಾದ್ಯಂತ ಹೋರಾಟ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ತಮ್ಮ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಸಂಬಂಧಿತ ಕೌಶಾಲ್ಯಾಭಿವೃದ್ಧಿ ಸಚಿವರ ಸಮ್ಮುಖದಲ್ಲಿ ಚರ್ಚಿಸಿದ್ದರೂ ಕೆಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಸಚಿವರು ವಿಫಲರಾಗಿದ್ದಾರೆ ಎಂದಿರುವ ಕರ್ನಾಟಕ ರಾಜ್ಯ ಗ್ರಾಪಂ ಮುಖ್ಯಪುಸ್ತಕ ಬರಹಗಾರರ ಒಕ್ಕೂಟ (ಎಂಬಿಕೆ) ದವರು ಇದನ್ನು ಪ್ರತಿಭಟಿಸಿ ಕಾನೂನುಬದ್ಧವಾಗಿ, ಶಾಂತಯುತವಾಗಿ ಅನಿರ್ದಿಷ್ಟ ಹೋರಾಟವನ್ನು ಶೀಘ್ರವೇ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ಒಕ್ಕೂಟದ ರಾಜ್ಯಾಧ್ಯಕ್ಷೆ ರುದ್ರಮ್ಮ, ನೌಕರರರನ್ನು ಖಾಯಂ ಮಾಡಬೇಕೆಂದು ಕೇಳಿಕೊಳ್ಳಲಾಗಿತ್ತು ಅದು ಸಾಧ್ಯವೇ ಇಲ್ಲವೆಂದು ನಿರಾಕರಿಸಿದ್ದಾರೆ. ಗೌರವಧನವನ್ನು ಮೊದಲು ಸರ್ಕಾರದಿಂದ ಒಕ್ಕೂಟಕ್ಕೆ, ಒಕ್ಕೂಟದಿಂದ ಎಂಬಿಕೆ ಎಲ್ ಸಿ ಆರ್ ಪಿ ಗಳಿಗೆ ವಿತರಿಸಲಾಗುತ್ತಿದೆ. ಇದರಿಂದ ಗೌರವಧನವನ್ನು ತೆಗೆದುಕೊಳ್ಳುವುದು ಸ್ವಲ್ಪ ಕಷ್ಟವಾಗಿದೆ ಹಾಗಾಗಿ ಗೌರವ ಧನವನ್ನು ನೇರವಾಗಿ ಖಾತೆಗೆ ಜಮಾ ಮಾಡಿ ಎಂದು ಬೇಡಿಕೆ ಇಡಲಾಗಿತ್ತು ಅದನ್ನು ಸಹ ಸಾಧ್ಯವಿಲ್ಲವೆಂದು ಹೇಳಿದ್ದಾರೆ ಎಂದರು.
ತೆಲಂಗಾಣ ಮಾದರಿಯಲ್ಲಿ ಗೌರವಧನವನ್ನು ವೇತನವನ್ನಾಗಿ ವಿತರಿಸುವ ಬಗ್ಗೆ, ಚರ್ಚೆ ನಡೆಸಲಾಗಿದೆ ತೀರ್ಮಾನವನ್ನು ಗೊಂದಲದಲ್ಲಿ ಮುಗಿಸಲಾಗಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಸರಕಾರ ನೀಡಬೇಕು. ಐಡಿ, ಕಾರ್ಡ್ನ್ನು ಇಲಾಖೆಯಿಂದ ವಿತರಿಸಲಾಗುವುದೆಂದು ತಿಳಿಸಿದ್ದಾರೆ. ಯೂನಿಫಾರ್ಮ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ತಕ್ಷಣ ಬಗ್ಗೆ ಸರ್ಕಾರ ಗಮನ ವಹಿಸಬೇಕು. ಬೆಳಗ್ಗೆ ೧೦ ರಿಂದ ಸಂಜೆ ೫ ದರವರೆಗೂ ಮೊಬೈಲ್ನಲ್ಲಿ ಹಾಜರಾತಿ ಹಾಕಬೇಕಾಗಿದೆ. ಅದನ್ನು ತೆಗೆದುಕೊಳ್ಳುವುದೇ ನಿಜವಾದರೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹಾಗಾದರೆ ಮಾತ್ರ ಈ ಹಾಜರಾತಿಯನ್ನು ಹಾಕುತ್ತೇವೆ. ಇಲ್ಲವಾದಲ್ಲಿ ಅದನ್ನು ಇಡೀ ರಾಜ್ಯಾದ್ಯಂತ ತಿರಸ್ಕರಿಸುತ್ತೇವೆ ಎಂದರು.
ಹಲವು ಎಂಬಿಕೆ ನೌಕರರು ಅಪಘಾತದಲ್ಲಿ, ನಾಲೈದು ಜನ ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಅವರಿಗೆ ಇನ್ಸೂರೆನ್ಸ್ ಮತ್ತು ಇತರ ಸರ್ಕಾರದ ರಕ್ಷಣೆಗೆ ಸಂಬAಧಪಟ್ಟ ಸೇವೆಯನ್ನು ಕೊಡಿ ಎಂದು ಒತ್ತಾಯಿಸಲಾಗಿತ್ತು. ಆದರೆ ಸರ್ಕಾರ. ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಮಾಡಿಸಿಕೊಳ್ಳಿ ಎಂದಿದೆ. ಇದರಿಂದ ಯಾವುದೇ ರಕ್ಷಣೆ ಸಿಗುವುದಿಲ್ಲ ಇಲಾಖೆಯಿಂದ ವಿಮೆಯನ್ನು ಭರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಎಂಬಿಕೆಯ ಸಿಬ್ಬಂದಿಗಳಿಗೆ ಸರಕಾರ ಇಷ್ಟೆಲ್ಲ ಅನ್ಯಾಯ ಮಾಡುತ್ತಿದೆ. ತಮ್ಮ ಶಕ್ತಿ ಪ್ರದರ್ಶನವನ್ನು ಸರಕಾರಕ್ಕೆ ತೋರಿಸಬೇಕಿದೆ ಎಂದ ಅವರು, ಸದ್ಯವೇ ಹೋರಾಟದ ರೂಪುರೇಶೆಯನ್ನು ನಿರ್ಧರಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಂಬಿಕೆಯ ಹೊಸನಗರದ ಶ್ರೀಲತಾ, ಭಾಗ್ಯ ಮೊದಲಾದವರಿದ್ದರು.