i
ಪೊಲೀಸ್ ರಕ್ಷಣೆಯೊಂದಿಗೆ ಆರಂಭವಾದ ಭದ್ರಾ ಕಾಮಗಾರಿ…
ಚಂದ್ರವಳ್ಳಿ ನ್ಯೂಸ್, ತರೀಕೆರೆ:
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪದ ಅಬ್ಬಿನಹೊಳಲು ಸಮೀಪ ರೈತರ ಬಿಗಿ ಹಠದಿಂದಾಗಿ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತು ಭೂ ಸ್ವಾಧೀನ ಪ್ರಕ್ರಿಯೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ ಭರವಸೆ ಮೇರೆಗೆ ಪೊಲೀಸರ ರಕ್ಷಣೆಯೊಂದಿಗೆ ಶುರುವಾಗಿದೆ.ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಅಡ್ಡಿಯಾಗಿದ್ದ ಅಬ್ಬಿನಹೊಳಲು ಬಳಿಯ ಭೂ ಸ್ವಾಧೀನ ಪ್ರಕ್ರಿಯೆ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಗುರುವಾರ ಬೆ.8.30ರ ನಂತರ ಶುರುವಾಯಿತು.ಅಹಿತಕ ಘಟನೆ ನಡೆಯದಂತೆ ಅಲ್ಲಿನ ಜಿಲ್ಲಾಡಳಿತವು 170 ಮಂದಿ ಪೋಲೀಸರು, ಆತ್ಮಾಹುತಿ ತಡೆ ದಳ ಸೇರಿದಂತೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಜೊತೆ ಜೊತೆಯಲ್ಲಿಯೇ ಕಾಲುವೆ ನಿರ್ಮಾಣದ ಕಾಮಗಾರಿಯೂ ಕೂಡ ಪ್ರಾರಂಭಿಸಲಾಗಿದೆ. ಕಳೆದ ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭೂ ಸ್ವಾಧೀನ ಪ್ರಕ್ರಿಯೆ ಪುನರ್ ಆರಂಭವಾಗಿರುವುದು ಬಯಲು ಸೀಮೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಸುಮಾರು 21 ಸಾವಿರ ಕೋಟಿ ರೂ.ಗಳ ಈ ಬೃಹತ್ ಯೋಜನೆಗೆ ಕೇವಲ ನಾಲ್ಕು ಮಂದಿ ರೈತರು ತಡೆ ಒಡ್ಡಿದ್ದರು. ಇತ್ತೀಚೆಗೆ ರೈತರೊಂದಿಗೆ ಸಭೆ ನಡೆಸಿ ಕಾಮಗಾರಿ ಆರಂಭಿಸಲಾಗುತ್ತದೆ, ರೈತರ ಹಠ ಬಿಟ್ಟು ಕಾಮಗಾರಿ ನಡೆಯಲು ಸಹಕಾರ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದರು.ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಅಬ್ಬಿನಹೊಳಲು ಗ್ರಾಮದ 1.7 ಕಿ.ಮೀ ಭೂಮಿ ವಶಕ್ಕೆ ಪಡೆಯುವ ಹಾಗೂ ಕಾಮಗಾರಿ ನಡೆಸಲು ರೈತರು ಅಡ್ಡಿ ಮಾಡಿದ್ದರು.ಕಳೆದ ಮಾರ್ಚ್-3 ರಂದು ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದ್ದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ರೈತರಿಗೆ ಅನ್ಯಾಯ ಮಾಡುವುದಿಲ್ಲ, ಕಾನುನಿನ ಚೌಕಟ್ಟಿನಲ್ಲಿಯೇ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು. ಅದೇ ರೀತಿ ಕಾಲುವೆ ನಿರ್ಮಾಣಕ್ಕೆ ಭೂಮಿ ಬಿಟ್ಡು ಕೊಡದಿದ್ದರೆ ಕಾನೂನಾತ್ಮಕ ವಾಗಿ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದರು.ಸಚಿವರು ಬಂದು ಹೋದ ಮೂರು ದಿನಗಳ ನಂತರ ಪೊಲೀಸರ ಭದ್ರತೆಯ ನಡೆವೆ ಕಾಮಗಾರಿಗಾಗಿ ಭೂಮಿ ವಶಕ್ಕೆ ಪಡೆಯುವ ಕಾರ್ಯ ಕೈಗೊಳ್ಳಲಾಗಿದೆ.ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಅಬ್ಬಿನಹೊಳಲು ಭೂ ವಶಕ್ಕೆ ಮಂಗಳವಾರ ಮನವಿ ಮಾಡಿದ್ದ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕೊನೆಗೂ ಕಾಮಗಾರಿ ಆರಂಭಿಸುವ ಮೂಲಕ ಯೋಜನೆ ಅನುಷ್ಠಾನ ಕುರಿತು ಭರವಸೆ ಮೂಡಿಸಿದೆ.ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಕೆ.ಎಂ.ಶಿವಪ್ರಕಾಶ್ ನೇತೃತ್ವದಲ್ಲಿ ಭೂಮಿ ವಶ ಪಡೆಯವ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ಕಾಮಗಾರಿ ಆರಂಭಿಸುವ ಮುನ್ನ ರೈತರು ಸಾಕಷ್ಟು ಪ್ರತಿರೋಧ ವ್ಯಕ್ತಪಡಿಸಿದರೂ ಅನುಷ್ಠಾನಾಧಿಕಾರಿಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ಕಾಮಗಾರಿ ಆರಂಭಿಸಿದ್ದಾರೆ.