i
ಮಳೆ..ಬಂತು..ಮಳೆ: ಕಾಫಿನಾಡಲ್ಲಿ ವರ್ಷದ ಮೊದಲ ಭರ್ಜರಿ ವರ್ಷಧಾರೆ…
ಚಂದ್ರವಳ್ಳಿ ನ್ಯೂಸ್,
ಚಿಕ್ಕಮಗಳೂರು: Rain..came..rain: first heavy rain of the year in Kafinada…
ಬೇಸಿಗೆ ಧಗೆ ಬಿಸಿಲಿನಿಂದ ಕಂಗೆಟ್ಟಿದ್ದ ಕಾಫಿನಾಡಿನ ಜನರಿಗೆ ವರುಣ ತಂಪೆರೆದಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಕಾದ ಕಾವಲಿಯಂತಾಗಿದ್ದ ಭೂಮಿ ವರುಣ ದೇವನ ಕೃಪೆಯಿಂದ ತಂಪಾಗಿದೆ.
ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ತಪ್ಪಲಿನ ಜಾಗರ ಹೋಬಳಿಯ ಕೊಳಗಾಮೆ ಗ್ರಾಮ ಹಾಗೂ ಮೇಲಿನಹುಲುವತ್ತಿ ಇಂದು (ಮಾರ್ಚ್ 14) ಗುರುವಾರ ಮಧ್ಯಾಹ್ನ ಭಾರೀ ಮಳೆಯಾಗಿದ್ದು, ಒಂದೇ ಗಂಟೆಗೆ ಒಂದೂವರೆ ಇಂಚಿನಷ್ಟು ವರ್ಷಧಾರೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಹಲವು ಹಳ್ಳಿಗಳಲ್ಲಿ 20-30-40 ಸೆನ್ಸ್ ನಷ್ಟು ಮಳೆಯಾಗಿದೆ.
ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ಸಮೀಪದ ಗ್ರಾಮಗಳಲ್ಲಿ ವರ್ಷದ ಮೊದಲ ಮಳೆಯೇ ಭರ್ಜರಿಯಾಗಿ ಸುರಿದ್ದಿದ್ದು, ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು ಹಾಗೂ ಕಾಫಿ ಬೆಳೆಗಾರರು ಸಂತೋಷಗೊಂಡಿದ್ದಾರೆ. ರಣ ಬಿಸಿಲಿನಿಂದ ಕಂಗೆಟ್ಟು ಅಡಿಕೆ, ಕಾಫಿ ಹಾಗೂ ಮೆಣಸು ಉಳಿಕೊಳ್ಳಲು ಪರದಾಡುತ್ತಿದ್ದ ಬೆಳೆಗಾರರು ಮೊದಲ ಮಳೆಯಿಂದ ಸಂತಸಗೊಂಡಿದ್ದಾರೆ.
ಕೊಡಗಿನಲ್ಲೂ ಮಳೆ
ಕಳೆದ ಬಾರಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ಈ ವರ್ಷ ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಆದರೆ ಈ ಬಾರಿ ಹವಾಮಾನ ಮುನ್ಸೂಚನೆಗಳ ಪ್ರಕಾರ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೇ ಹಾಗೂ ಜೂನ್ ನಡುವೆ ರಾಜ್ಯದಲ್ಲಿ ಮಳೆಗಾಲ ಶುರುವಾಗಲಿದ್ದು, ವ್ಯಾಪಕ ಮಳೆಯಾಗಲಿದೆ ಎಂದು ವರದಿಯಾಗಿದೆ.
ಬುಧವಾರ ಮಧ್ಯಾಹ್ನ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಕಿಗ್ಗಾಲುವಿನಲ್ಲಿ ಉತ್ತಮ ಮಳೆಯಾಗಿದೆ. ಅದಾದ ಬಳಿಕ ಕಾಕೋಟು, ಪರಂಬು ಪ್ರದೇಶಗಳಲ್ಲಿ ಕೂಡ ಸಾಧಾರಣ ಮಳೆ ಸುರಿದಿದೆ. ಕುಶಾಲನಗರ, ಪಿರಿಯಾಪಟ್ಟಣದ ನಡುವೆ ಹಲವು ಕಡೆಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿತ್ತು.