i
ಮಾ.16 ರಿಂದ ಕೋಡಿಹಳ್ಳಮ್ಮ ದೇವಿ ಜಾತ್ರೆ ಆರಂಭ…
ಮಲ್ಲಪ್ಪನಹಳ್ಳಿ ಎಂ.ಎಲ್.ಗಿರಿಧರ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಒಂದೇ ಜಾತಿಯ ಎರಡು ಕುಲಗಳ ಮಧ್ಯ ಇರುವ ಮೂಢನಂಬಿಕೆಯಿಂದಾಗಿ ಆ ಕುಲಗಳ ಮಧ್ಯ ಪರಸ್ಪರ ಅಶ್ಪೃಶ್ಯತೆ ಇಂದಿಗೂ ಜೀವಂತವಾಗಿದ್ದು ಗಂಡು, ಹೆಣ್ಣುಗಳ ಮದುವೆಯನ್ನು ನಿಷೇಧಿಸಲಾಗಿದೆ.
ವರಸೆಯಲ್ಲಿ ನೆಂಟರಾದರೂ ವೈವಾಹಿಕ ಸಂಬಂಧಗಳು ನಿಷಿದ್ಧ, ಒಬ್ಬರ ಮನೆಗೆ ಒಬ್ಬರು ಹೋಗುವುದಿಲ್ಲ, ಮುಖ ಕೊಟ್ಟು ಮಾತನಾಡಿಸುವುದಿಲ್ಲ, ಆ ದೇವತೆ ನೆಲೆಯೂರಿರುವ ಊರಿಗೆ ಆವಿನ ಕುಲದವರು ಕಾಲಿಡುವುದಿಲ್ಲ!, ಆ ದೇವರು ಕೂಡ ಮತ್ತೊಂದುರಿಗೆ ಹೋಗವ ಸಂದರ್ಭ ಬಂತೆಂದರೆ ಮುಖ ಮುಚ್ಚಿಕೊಂಡೇ ಆ ಗ್ರಾಮದಿಂದ ತೆರಳಬೇಕಾಗಿದೆ. ಇವಿಷ್ಟು ಕ್ರಿ.ಶ 1222 ರಿಂದ ನಡೆದುಕೊಂಡು ಬಂದಿರುವ ಪದ್ಧತಿಯೋ ಅಥವಾ ಮೂಢ ನಂಬಿಕೆಯೋ ತಿಳಿಯದಾಗಿದೆ.
ಆವಿನ ಕಾಮರಾಯನ ಕುಲದವರು, ಕೋಡಿಹಳ್ಳಿ ಜಾನಕಲ್ ಈ ಎರಡು ಕುಲಗಳ ಮಧ್ಯೆ ಇಷ್ಟೆಲ್ಲ ಮೂಢನಂಬಿಕೆ, ಆಚಾರ ವಿಚಾರಗಳು ಮೇಳೈಸಲು ಪ್ರಮುಖ ಕಾರಣ ಬಲಿಷ್ಠ ಎರಡು ಹೆಣ್ಣು ದೇವತೆಗಳ(ವರಸೆಯಲ್ಲಿ ಬಂಧುಗಳು) ಮಧ್ಯ ಆಗಿರುವ ಮನಸ್ತಾಪ.
ಹಿರಿಯೂರು ತಾಲೂಕಿನ ಕೋಡಿಹಳ್ಳಿಯಲ್ಲಿ ನೆಲೆಸಿರುವ ಶಕ್ತಿ ದೇವತೆ ಶ್ರೀರೇಣುಕಾ ಪರಮೇಶ್ವರಿ(ಕೋಡಿಹಳ್ಳಮ್ಮ) ದೇವಿ ಹಾಗೂ ಶಿರಾ ತಾಲೂಕು ಬರಗೂರಿನಲ್ಲಿ ನೆಲೆಸಿರುವ ಬರಗೂರು ವೀರಮ್ಮಾಜಿ ದೇವಿ. ಈ ಇಬ್ಬರು ಸಹೋದರಿ ದೇವತೆಗಳ ಮಧ್ಯ ಉಂಟಾಗಿರುವ ಮನಸ್ತಾಪದಿಂದಾಗಿ ಇಂದಿಗೂ ಕೋಡಿಹಳ್ಳಿ ಕಟ್ಟೆಮನೆಯ ಜಾನಕಲ್ ಕುಲಬಳ್ಳಿಗಳು ಮತ್ತು ಹರಿಯಬ್ಬೆ ಗ್ರಾಮದ ಆವಿನ ಕಾಮರಾಯ ಕಟ್ಟೆಮನೆ ಕುಲಬಳ್ಳಿಗಳು ದೇವತೆಗೆ ದಿಗ್ಭಂಧನ ಹಾಕಿದ್ದಾರೆ. ಹಿಂದುಳಿದ ಬುಡಕಟ್ಟು ಸಂಸ್ಕೃತಿಯುಳ್ಳ ಕಟ್ಟೆಮನೆಗಳ ಮೂಲ ದ್ರಾವಿಡ ಕುಂಚಿಟಿಗ ಜಾತಿಯ 48 ಕುಲಗಳಲ್ಲಿ ಆವಿನ ಕುಲದವರು, ಕೋಡಿಹಳ್ಳಿ ಜಾನಕಲ್ ಕುಲದವರೆಂಬ ಎರಡು ಕುಲಗಳ ಮಧ್ಯೆ ನಡೆದುಕೊಂಡು ಬರುತ್ತಿರುವ ಅಶ್ಪೃಶ್ಯತೆ ಹೋಗಲಾಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಏಕೆಂದರೆ ಆವಿನ ಕುಲದ ಬರಗೂರು ವೀರಮ್ಮ ದೇವಿ ಹಾಕಿರುವ ಶಪತ ಕಾರಣವಾಗಿದೆ.
ಹರಿಯಬ್ಬೆ ಕಟ್ಟೆಮನೆಯ ಕಾಮರಾಯನ ಆವಿನ ಕುಲದರು ಶಕ್ತಿ ದೇವತೆ ಶ್ರೀರೇಣುಕಾಪರಮೇಶ್ವರಿ ದೇವಿ ನೆಲೆಸಿರುವ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮಕ್ಕೆ ಇಂದಿಗೂ ಹೆಜ್ಜೆ ಇಡುವುದಿಲ್ಲ, ಆ ದೇವರಿಗೆ ಕೈ ಮುಗಿಯುವುದಿಲ್ಲ, ಕಷ್ಟ ಕಾರ್ಪಣ್ಯಗಳನ್ನು ನಿವಾರಿಸು ತಾಯೆ ಎಂದು ಪ್ರಾರ್ಥನೆ ಸಲ್ಲಿಸುವುದಿಲ್ಲ, ರೇಣುಕಾ ದೇವಿಯ ಭಕ್ತರಾದ ಕೋಡಿಹಳ್ಳಿ ಜಾನಕಲ್ ಕುಲದ ಮನೆಗಳಲ್ಲಿ ನೀರು ಕುಡಿಯುವುದಿಲ್ಲ, ಅವರ ಮನೆಗೆ ಕಾಲಿಡುವುದಿಲ್ಲ, ಇವರ ಮನೆಗಳಿಗೂ ಅವರನ್ನು ಬಿಟ್ಟುಕೊಳ್ಳುತ್ತಿಲ್ಲ. ಆವಿನ ಕುಲದವರು ನೆಲೆಸಿರುವ ಹರಿಯಬ್ಬೆ, ಪಿಟ್ಲಾಲಿ, ಗೌನಹಳ್ಳಿ, ಶಿರಾ ತಾಲೂಕು ಚಿಕ್ಕೇನಹಳ್ಳಿ, ಖಂಡೇನಹಳ್ಳಿ ಮತ್ತಿತರ ಹಳ್ಳಿಗಳಿಗೆ ಕೋಡಿಹಳ್ಳಿಯ ಶ್ರೀರೇಣುಕಾಪರಮೇಶ್ವರಿ ದೇವಿಯ ಆಗಮನ ನಿಷಿದ್ಧ(ದಿಗ್ಬಂಧನ) ಮಾಡಲಾಗಿದೆ.
ಒಂದು ವೇಳೆ ಅನಿವಾರ್ಯವಾಗಿ ಆವಿನ ಕುಲದವರು ನೆಲೆಸಿರುವ ಗ್ರಾಮಗಳ ಮಾರ್ಗ ಮಧ್ಯೆ ಹಾದು ಹೋಗಬೇಕೆಂದರೆ ದೇವಿಯ ಮುಖವನ್ನು ಬಟ್ಟೆಯಿಂದ ಪೂರ್ಣ ಪ್ರಮಾಣದಲ್ಲಿ ಮುಚ್ಚಿಕೊಂಡು ಹೋಗಬೇಕು. ಆವಿನ ಕುಲದ ಮುಖಂಡರ ವ್ಯಕ್ತಿಗಳ ಅನುಮತಿ ಪಡೆಯದೆ ಶಿರಾ ತಾಲೂಕಿನ ಗುಂಡಪ್ಪ ಚಿಕ್ಕೇನಹಳ್ಳಿಗೆ ಕೋಡಿಹಳ್ಳಮ್ಮ ದೇವಿಯನ್ನು ಕರೆದೊಯ್ಯರಿಂದ ದೊಡ್ಡ ಪ್ರಮಾಣದ ಹೊಡೆದಾಟವೇ ಆಗಿ ಈ ಎರಡು ಕುಲಗಳ ಮಧ್ಯ ದೊಡ್ಡ ರಾಜಿ ಪಂಚಾಯ್ತಿ ನಡೆದು ಹೋಗಿದ್ದು ಒಡಂಬಡಿಕೆ ಪ್ರಕಾರ ಅನಿವಾರ್ಯ ಕಾರಣಗಳಿಂದ ರೇಣುಕಾದೇವಿ ನಮ್ಮೂರು ಪ್ರವೇಶ ಮಾಡಿದರೆ ಮುಖ ಮುಚ್ಚಿಕೊಂಡು ಹೋಗಬೇಕು, ನಮ್ಮ ಆವಿನ ಕುಲದವರಿಗೆ ದೇವಿಯ ಮುಖ ತೋರಿಸಬಾರೆಂದು ಕಟ್ಟಪ್ಪಣೆ ಹೊರಡಿಸಿ ಅದೇ ರೀತಿ ಕಳೆದ ಒಂದು ಸಾವಿರ ವರ್ಷದಿಂದ ನಡೆದುಕೊಳ್ಳುತ್ತಿದ್ದಾರೆ.
ಒಂದು ವೇಳೆ ಒಡಂಬಡಿಕೆ ಧಿಕ್ಕರಿಸಿ ಸಾಮಾಜಿಕ, ಧಾರ್ಮಿಕ ಕಾರ್ಯಗಳು ಆವಿನವರ ಕುಲ ಮತ್ತು ಜಾನಕಲ್ ಕುಲಗಳ ಮಧ್ಯೆ ನಡೆದರೆ ಅದಕ್ಕೆ ತಕ್ಕ ತೊಂದರೆ, ಅಥವಾ ಸಮಸ್ಯೆಗಳನ್ನು ಇಂದಿಗೂ ಜನರು ಅನುಭವಿಸುತ್ತಿದ್ದಾರೆ. ಎರಡು ದೇವತೆಗಳಿಗೆ ಹೆದರಿ ಈ ಜನರು ಮೂಢನಂಬಿಕೆಯುಳ್ಳ ಆಚಾರಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇಂಥಹ ಆಧುನಿಕ ಕಾಲದಲ್ಲೂ ಈ ಪದ್ಧತಿ ನಡೆದುಕೊಂಡು ಬುರುತ್ತಿರುವುದು ವಿಪರ್ಯಾಸವೇ ಸರಿ.
ಐತಿಹಾಸಿಕ ಚರಿತ್ರೆ-
ಹಿರಿಯೂರು ತಾಲೂಕಿನ ವೇಣುಕಲ್ಲಗುಡ್ಡದ ಸಂಸ್ಥಾನವನ್ನು ಕ್ರಿ.ಶ 1222 ರಲ್ಲಿ ಕಸ್ತೂರಿ ರಂಗಪ್ಪ ನಾಯಕ ಎಂಬ ರಾಜ ಆಳ್ವಿಕೆ ಮಾಡುತ್ತಿದ್ದಾಗ ಇವರ ಸಂಸ್ಥಾನದಲ್ಲಿ ಕುಂಚಿಟಿಗ ಜಾತಿಯ ಆವಿನ ಕುಲದ ಬೊಮ್ಮಯ್ಯಲಿಂಗ(ದಳಪತಿ) ಎಂಬ ವ್ಯಕ್ತಿಯನ್ನು ಬರಗೂರು ವೀರಮ್ಮ ಎನ್ನುವಳು ಮದೆಯಾಗಿರುತ್ತಾಳೆ. ನಿಡಿಗಲ್ಲು ಪಾಳೆಗಾರರು ಮತ್ತು ವೇಣುಕಲ್ಲಗುಡ್ಡದ ಮಾಜಿ ದಳಪತಿ ಕೆರೆ ನಾಯಕ ಇವರ ಕುತಂತ್ರದಿಂದಾಗಿ ದಳಪತಿ ಬೊಮ್ಮಯ್ಯಲಿಂಗನ ತಲೆಯನ್ನು ಕಡೆಯಲಾಗುತ್ತದೆ. ಆತನ ಮಹಾಸತಿ ಬರಗೂರು ವೀರಮ್ಮನವರು ಸತಿಸಹಗಮನ ಪದ್ಧತಿಯಿಂತೆ ಕೆಂಡಕೊಂಡ ಹಾಯಲು(ಅಗ್ನಿಪ್ರವೇಶ) ಗಂಡನ ಮನೆಯಾದ ಮೂಲ ಆವಿನವರ ಕಟ್ಟೆಮನೆ ಇರುವ ಹರಿಯಬ್ಬೆಯಲ್ಲಿ ಕುಂಚಿಟಿಗ ಆವಿನವರ ವಂಶದ ಮೂಲ ಪುರುಷ ಆವಿನ ಕಾಮರಾಯರು ಹರಿಯಬ್ಬೆ ಗ್ರಾಮದಲ್ಲಿ ಜೀವ ಸಮಾದಿಯಾಗಿರುವುದರಿಂದ ಬಂಧುವಾಗಿದ್ದ ಪಕ್ಕದ ಕೋಡಿಹಳ್ಳಿ ಗ್ರಾಮದಲ್ಲಿದ್ದ ರೇಣುಕಾಪರಮೇಶ್ವರಿ(ಕೋಡಿಹಳ್ಳಮ್ಮ)ಯನ್ನು ಸತಿಸಹಗಮನ ಹೊಂದಲು ಸ್ಥಳ ಕೇಳುತ್ತಾಳೆ. ಅದಕ್ಕೆ ನಿನ್ನಂಥ ಗಂಡ ಸತ್ತ ಮುಂಡೆಗೆ ಈ ಗ್ರಾಮದಲ್ಲಿ ಸ್ಥಳ ನೀಡಲು ಸಾಧ್ಯವಿಲ್ಲ ಎಂದು ಹೀನಮಾನವಾಗಿ ಬೈದು ಕಳುಹಿಸಿದ್ದರಿಂದ ಮನನೊಂದ ಬರಗೂರು ವೀರಮ್ಮ ಸಂಬಂಧಿಕಳಾದರೂ ಈ ರೀತಿ ನಿಂಧನೆ ಮಾಡಿದಳಲ್ಲ ಎಂದು ಕೋಪಗೊಂಡು ಅಂದು ನೀಡಿದ ಶಾಪ ಎಂದರೆ ನನ್ನ ಆವಿನ ಕುಲದ ವಂಶಸ್ಥರು ನಿನಗೆ ಪ್ರಾರ್ಥನೆ ಸಲ್ಲಿಸಿದರೆ, ಕೈಮುಗಿದರೆ, ನಿನ್ನ ಹೊಲಮರೆ(ಊರಿನ ಗಡಿ)ಯನ್ನು ತುಳಿದರೆ ಕಷ್ಟ ಕಾರ್ಪಣ್ಯಗಳು ಬರಲಿವೆ ಎಂದು ಶಾಪ ನೀಡಿದ ಫಲವೇ ಇಂದು ಆವಿನವರು ಮತ್ತು ಜಾನಕಲ್ ಕುಲಬಳ್ಳಿಗಳ ಮಧ್ಯ ಯಾವುದೇ ಸಾಮಾಜಿಕ, ಧಾರ್ಮಿಕ ಕಾರ್ಯಗಳು, ಕೊಡುಕೊಳ್ಳುವಿಕೆ, ಮದುವೆ ಮುಂಜಿ ಇತ್ಯಾದಿಗಳು ನಡೆಯುತ್ತಿಲ್ಲ. ಈ ಎರಡು ಕುಲಗಳು ವರಸೆಯಲ್ಲಿ ನಂಟರದರೂ ಕೊಡುಕೊಳ್ಳುವಿಕೆ, ಮದುವೆ ಮುಂಜಿ ಇತರೆ ಸಾಮಾಜಿಕ ಕಾರ್ಯಗಳು ಆ ಎರಡು ಕುಲಗಳ ಮಧ್ಯ ನಿಷಿದ್ಧವಾಗಿರುವುದರಿಂದ ಇಂದಿಗೂ ಆವಿನ ಕುಲದವರಿಗೂ ಕೋಡಿಹಳ್ಳಿ ಜಾನಕಲ್ ಕುಲದವರಿಗೂ ಅಶ್ಪೃಶ್ಯತೆ ಆಚರಣೆಯಲ್ಲಿದೆ ಎಂದು ವೇಣುಕಲ್ಲುಗುಡ್ಡದ ಹಾಲಪ್ಪಯ್ಯ ಸ್ವಾಮಿ ಮಠದ ಶ್ರೀಗಳಾದ ಚಂದ್ರಶೇಖರಯ್ಯ ಸ್ವಾಮೀಜಿ ಅವರು ತಿಳಿಸಿದ್ದಾರೆ.
ಶಕ್ತಿ ದೇವತೆ ರೇಣುಕಾದೇವಿ ಉತ್ಸವ-
ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮದ ಶ್ರೀರೇಣುಕಾ ಪರಮೇಶ್ವರಿಯ ಜಾತ್ರೆ ಉತ್ಸವವು ಇದೇ ಮಾ.16 ರಂದು ಕಂಕಣ ಧಾರಣೆಯಿಂದ ಆರಂಭವಾಗುವ ಜಾತ್ರಾ ಮಹೋತ್ಸವವು ಮಾರ್ಚ್-22 ರಿಂದು ಅಧಿಕೃತವಾಗಿ ದೇವತಾ ಕಾರ್ಯಗಳು ನಡೆಯಲಿದೆ.
ಮಾ.22 ರಂದು ಶುಕ್ರವಾರ ಜಲಧಿ ಉತ್ಸವ, ದೊಡ್ಡ ಪೂಜೆ, ಆರತಿ, ಉತ್ಸವದ ಪ್ರಮುಖ ಘಟ್ಟ ಮಾ.24 ಭಾನುವಾರ ಕಲ್ಲುಗಾಲಿ ರಥೋತ್ಸವ,
ಮಾ.25 ರಂದು ಮೊದಲು ಸಿಡಿ ಉತ್ಸವ, ಬೆಳ್ಳಿ ಆನೆ ಅಂಬಾರಿ ಉತ್ಸವದಲ್ಲಿ ಬಾಯಿಗೆ ಬೀಗ ಹಾಕಿಸಿಕೊಳ್ಳುವುದು, ಬೆನ್ನಿನ ಚರ್ಮಕ್ಕೆ ಕೊಕ್ಕೆ ಹಾಕಿಕೊಂಡು ಹರಕೆ ತೀರಿಸುವುದು ನಡೆಯುತ್ತಿದೆ. ಮಾ. 26 ರಂದು ಮಂಗಳವಾರ ನಡೆಯುವ ಅಗ್ನಿಗೊಂಡ(ಕುಂಡ), ಬಣ್ಣದ ಆನೆ ಅಂಬಾರಿ ಉತ್ಸವ, ನೂತನ ರೇಷ್ಮೆ ಸೀರೆಗೆ ಮೂರು ಬೊಗಸೆ ಕೆಂಡವನ್ನು ಕೈಯಿಂದ ಹಾಕಿ ಕಟ್ಟಲಾಗುತ್ತದೆ ಆದರೆ ರೇಷ್ಮೆ ಸೀರೆ ಸುಡಿವುದಿಲ್ಲ, ಕಲೆ ಬೀಳುವುದಿಲ್ಲ ಇದು ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆದು ಅಚ್ಚರಿ ಮೂಡಿಸುತ್ತಿದೆ.
ಮಾ.27 ರಂದು ಬುಧವಾರ ಆರತಿಗಳು, ಮಾ.28 ರಂದು ಗುರುವಾರ ಬೆಳಿಗ್ಗೆ ಬೆಳ್ಳಿ ಪಲ್ಲಕ್ಕಿ ಉತ್ಸವ, ಓಕಳಿ, ಮೈಲಾರಸೇವೆ, ಶಸ್ತ್ರದಾರತಿ, ಸಂಜೆ ಕಂಕಣ ವಿಸರ್ಜನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ರಾಜ್ಯಾದ್ಯಂತ ಲಕ್ಷಾಂತರ ಭಕ್ತ ಸಮೂಹ ಹೊಂದಿರುವ ಶ್ರೀರೇಣುಕಾಪರಮೇಶ್ವರಿಯ ಜಾತ್ರೆಯು ಅತ್ಯಂತ ವಿಜೖಂಭಣೆಯಿಂದ ನಡೆಸಲಾಗುತ್ತದೆ.