i
ಮಾರ್ಚ್-17ರಂದು ಭಾನುವಾರ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಅಭಿನಂದನಾ ಸಮಾರಂಭ…
ಚಂದ್ರವಳ್ಳಿ ನ್ಯೂಸ್, ಮೈಸೂರು:
9 ಬಾರಿ ಪಾರ್ಲಿಮೆಂಟ್ ಎಲೆಕ್ಷನ್, 4 ಬಾರಿ ವಿಧಾನಸಭಾ ಚುನಾವಣೆ ಎದುರಿಸಿ, 2 ಬಾರಿ ಆಯ್ಕೆಯಾಗಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಅವರ ಕೇಂದ್ರ ಸರ್ಕಾರದಲ್ಲಿ ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ, 1974 ಮಾರ್ಚ್ 17 ರಿಂದ 2024ರವರಗೆ 14 ಬಾರಿ ಚುನಾವಣೆ ಎದುರಿಸಿದ್ದು ನನ್ನ ಚುನಾವಣಾ ರಾಜಕೀಯಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಸುವರ್ಣ ಮಹೋತ್ಸವ ಆಚರಿಸುತ್ತಿದ್ದಾರೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಘಟಿಕೋತ್ಸವ ಸಭಾಂಗಣದಲ್ಲಿ ಮಾರ್ಚ್-17ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಮಹತ್ವದ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ, ವೀರಪ್ಪ ಮೋಯ್ಲಿ, ಸಾಹಿತಿ ಡಾ ಚಂದ್ರಶೇಖರ್ ಕಂಬಾರ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಪಿಜಿಆರ್ ಸಿಂಧ್ಯಾ ಸೇರಿ ಹಲವರು ಭಾಗಿ ಆಗಲಿದ್ದಾರೆ ಎಂದು ತಿಳಿಸಿದರು.
ಸ್ವತಃ ನಾನೇ ಸ್ವಾಭಿಮಾನಿ ನೆನೆಪುಗಳು ಅಭಿಮಾನದ ಗ್ರಂಥ ಬರೆಯುತ್ತಿದ್ದೇನೆ. ಪಾರ್ಲಿಮೆಂಟ್ ನಲ್ಲಿ ನನ್ನ ಮಾತುಗಳು ಸಾಧನೆಗಳು ಸೇರಿದಂತೆ ಎಲ್ಲಾ ವಿಚಾರಗಳನ್ನು ಕೂಡಾ ಬರೆಯುತ್ತೇನೆ, ಇನ್ನು ಮುಂದೆ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ, ಯಾವುದೇ ಪಕ್ಷದಲ್ಲೂ ಇರುವುದಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.
ನನ್ನ ರಾಜಕೀಯ ಜೀವನದಲ್ಲಿ 7 ಜನ ಪ್ರಧಾನಿಗಳನ್ನು ನೋಡಿದ್ದೇನೆ, ಇವರೆಲ್ಲರ ಆಡಳಿತ ವೈಖರಿ ಕುರಿತು ಮುಂದಿನ ದಿನಗಳಲ್ಲಿ ಪುಸ್ತಕ ಬರೆಯುತ್ತೇನೆ. ನನ್ನ ಜೀವಿತ ಅವಧಿಯಲ್ಲಿ ಸ್ವಾಮಿಮಾನದ ರಾಜಕೀಯ ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡಿದ ಆತ್ಮ ತೃಪ್ತಿ ನನಗಿದೆ ಎಂದ ಸಂಸದರು, ಯಾವ ಪಕ್ಷಕ್ಕೆ ಹೋಗಿದ್ದರೂ ಕೂಡಾ ಯಾರಿಗೂ ಹೊರೆಯಾಗದಂತೆ ನಡೆದುಕೊಂಡಿದ್ದೇನೆ. ನನ್ನ ಪುಸ್ತಕದಲ್ಲಿ ಸಾಕಷ್ಟು ವಿಚಾರಗಳು ಇರಲಿವೆ ಎಂದು ತಿಳಿಸಿದರು.