i
ಶಾಂತವೇರಿ ಗೋಪಾಲಗೌಡರು ಮೌಲ್ಯಗಳನ್ನು ಬಿಟ್ಟುಹೋದ ಸಾಧಕ : ಡಿ.ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಭದ್ರಾವತಿ:
ಪ್ರಜೆಗಳಂತೆಯೇ ರಾಜಕಾರಣಿಗಳಿಗೂ ಜವಾಬ್ದಾರಿಗಳಿವೆ ಎಂಬುದನ್ನು ತಿಳಿಸಿದ ಜವಾಬ್ದಾರಿಯುತ ರಾಜಕಾರಣಿ ಶಾಂತವೇರಿ ಗೋಪಾಲಗೌಡರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಗು ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಗರದ ಲಯನ್ಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ತಲೆಮಾರಿಗೆ ಗೋಪಾಲಗೌಡರ ಜೀವನ ಒಂದು ಕಥೆ ಅನಿಸಬಹುದು. ಆದರೆ ಅವರ ಜೀವನ ಆದರ್ಶ ಮತ್ತು ಮುಂದಿನ ಪೀಳಿಗೆಗೆ ಮಾದರಿ. ಬದುಕಿದ್ದು 49ವರ್ಷವಾದರೂ ಅವರ ಸಾಧನೆ ಬಹಳಷ್ಟು. ಗೋಪಾಲಗೌಡರ ಮಾತಿಗೆ ಬಹಳಷ್ಟು ಜನರು ಸೇರುತ್ತಿದ್ದರು. ಇದಕ್ಕೆ ಕಾರಣ ಅವರು ಪ್ರಜಾಪ್ರಭುತ್ವದ ಆಶಯಗಳನ್ನು ಜನರಿಗೆ ತಿಳಿಸುತ್ತಿದ್ದ ರೀತಿ ಎಂದರು.
ಶಾಂತವೇರಿ ಗೋಪಾಲಗೌಡರು ಸಮಾಜವಾದದ ಪ್ರಜ್ವಲಿಸುವ ಕಿಡಿಯಾಗಿದ್ದರು. ಅವರು ಅನೇಕ ಮೌಲ್ಯಗಳನ್ನು ಬಿಟ್ಟುಹೋದ ಸಾಧಕ. ಶಾಂತವೇರಿಯವರ ಭಾಷಣ ಕೇಳಿದ ಬ್ರಟಿಷರು ಅವರನ್ನು ಕೊಲ್ಲಲು ನಿರ್ಧರಿಸಿದ್ದರು. ಆದರೆ ಜಾಣ್ಮೆಯಿಂದ ತಪ್ಪಿಸಿಕೊಂಡು ಜನರನ್ನು ಸಂಘಟಿಸಿದ ಯಶಸ್ವಿನಾಯಕ ಗೋಪಾಲಗೌಡರು ಎಂದರು.
ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ಗಣಪತಿ ಬಿ. ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಎಸ್.ರಾಜೇಶ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷೆ ಎಂ.ಎಸ್.ಸುಧಾಮಣಿ, ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಎಂ.ಆರ್.ರೇವಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.