i
ಮಠ ಮಾನ್ಯಗಳತ್ತ ದೌಡಾಯಿಸಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಅಭ್ಯರ್ಥಿ ವಿ.ಸೋಮಣ್ಣ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮಂಗಳವಾರ ಚಿತ್ರದುರ್ಗ ಅವಿಭಜಿತ ಜಿಲ್ಲೆಯ ವಿವಿಧ ಮಠ ಮಾನ್ಯಗಳ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಇತ್ತೀಚೆಗೆ ಸಿದ್ದಗಂಗಾ ಮಠದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದ ಅವರು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿನ ಹಲವು ಮಠಾಧೀಶರ ಭೇಟಿ ಮಾಡಿ ರಾಜಕೀಯ ಚರ್ಚೆ ಮಾಡಿದರಲ್ಲದೆ ತಮ್ಮ ಗೆಲುವಿಗೆ ಆಶೀರ್ವಾದ ಮಾಡುವಂತೆ ಕೋರಿಕೊಂಡರು.
ಮಾದಾರ ಚನ್ನಯ್ಯ ಗುರುಪೀಠಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಮಾಡುವಂತೆ ಕೋರಿಕೊಂಡರು. ಇದಾದ ನಂತರ ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಭೇಟಿ ನೀಡಿದ ಅವರು ಭೋವಿ ಗುರುಪೀಠಾಧ್ಯಕ್ಷರಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಯಾದವ ಗುರುಪೀಠದ ಶ್ರೀ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಹಡಪದ ಗುರುಪೀಠದ ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಕೊರಟಗೆರೆಯ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಠದ ಶ್ರೀ ಮಹಾಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸಿ.ಹನುಮಂತೇಗೌಡ, ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಸಂಪತ್ ಕುಮಾರ್, ಚಿತ್ರದುರ್ಗ ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ದ್ಯಾಮಣ್ಣ, ಜಿಲ್ಲಾ ವಕ್ತಾರ ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ ಸೇರಿದಂತೆ ಇತರರಿದ್ದರು.
ಚಿತ್ರದುರ್ಗ ಜಿಲ್ಲೆಯ ಸ್ವಾಮೀಜಿಗಳ ಭೇಟಿ ನಂತರ ವಿ.ಸೋಮಣ್ಣ ಅವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಾಧ್ಯಕ್ಷರಾದ ಪ್ರಸನ್ನಾನಂದ ಮಹಾಸ್ವಾಮೀಜಿ ಅವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸಿ.ಹನುಮಂತೇಗೌಡ ಸೇರಿದಂತೆ ದಾವಣಗೆರೆ ಜಿಲ್ಲೆಯ ಬಿಜೆಪಿ ಘಟಕದ ಪದಾಧಿಕಾರಿಗಳು ಹಾಜರಿದ್ದರು.ಮಠಾಧೀಶರಗಳ ಭೇಟಿ ನಂತರ ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ವಿ.ಸೋಮಣ್ಣ, ಜಿಲ್ಲೆಯ ಎಲ್ಲ ಮಠಗಳಿಗೆ ಭೇಟಿ ನೀಡಿ ವಿವಿಧ ಸಮುದಾಯಗಳ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ್ದೇನೆ. ಸ್ವಾಮೀಜಿಗಳು ಕೂಡಾ ತುಂಬು ಹೃದಯದಿಂದ ಗೆದ್ದು ಬರುವಂತೆ ಆಶೀರ್ವಾದಿಸಿದ್ದಾರೆ. ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಾನು ಸದಾ ಸಮಾಜ ಸೇವೆ ಮಾಡಿಕೊಂಡು ಬಂದಿರುವೆ. ನನ್ನನ್ನು ಕೇವಲ ಒಂದು ಜಾತಿಗೆ ಸೀಮಿತವಾದ ವ್ಯಕ್ತಿ ಎಂದು ಯಾವ ಸಮಾಜದವರು ಕಾಣುತ್ತಿಲ್ಲ, ನಾನು ಎಲ್ಲ ಸಮಾಜಗಳನ್ನು ಅತ್ಯಂತ ಪ್ರೀತಿಯಿಂದ ಗೌರವಿಸುವುದರ ಜೊತೆಯಲ್ಲಿ ಆ ಸಮುದಾಯಗಳ ಕಷ್ಟು ಸುಃಖಗಳಿಗೆ ಸ್ಪಂದಿಸಿ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು.ಇನ್ನೂ ಚಿತ್ರದುರ್ಗ ಜಿಲ್ಲೆಯ ಮಾದಾರಚನ್ನಯ್ಯ ಗುರುಪೀಠಕ್ಕೂ ಮತ್ತು ನಮಗೂ ಅವಿನಾಭವ ಸಂಬಂಧ ಇದೆ. ಹಾಗಾಗಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳು ಸೇರಿದಂತೆ ಜಿಲ್ಲೆಯ ವಿವಿಧ ಸಮಾಜಗಳ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆಂದು ಅವರು ತಿಳಿಸಿದರು.ತುಮಕೂರಿನಲ್ಲಿ ನಾನು ಸ್ಪರ್ಧೆ ಮಾಡಿರುವುದರಿಂದ ಹೊರಗಿನವರು ಎನ್ನುವ ಪ್ರಶ್ನೆ ಬರುವುದಿಲ್ಲ, ಸದಾ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ಹತ್ತಾರು ವರ್ಷ ನಾನು ಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಹೊರಗಿನವರು, ಒಳಗಿನವರು ಎನ್ನುವುದಕ್ಕಿಂತ, ಈ ದೇಶದ ಭವುಷ್ಯಕ್ಕಾಗಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದು ಅವರ ಕೈ ಬಲ ಪಡಿಸುವ ಉದ್ದೇಶದಿಂದ ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಇಡೀ ವಿಶ್ವವೇ ಮೆಚ್ಚುವಂತ ಉತ್ತಮ ಕೆಲಸ ಮಾಡಿದ್ದಾರೆ. ಮೂರನೇ ಸಲ ದೇಶದ ಪ್ರಧಾನಿ ಆಗಿ ಆಯ್ಕೆ ಆಗಲಿದ್ದಾರೆ ಎನ್ನುವ ಅಚಲ ನಂಬಿಕೆ ಎಲ್ಲರಲ್ಲೂ ಇದೆ ಎಂದು ತಿಳಿಸಿದರು.ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. 28 ಕ್ಷೇತ್ರಗಳಿಗೆ ಮಾತ್ರ ಟಿಕೆಟ್ ಕೊಡಲು ಸಾಧ್ಯ, 29 ಜನರಿಗೆ ಟಿಕೆಟ್ ಕೊಡಲು ಆಗಲ್ಲ. ಬಿಜೆಪಿ ವರಿಷ್ಠರು ಸಮೀಕ್ಷೆ ಮಾಡಿಸಿದ್ದಾರೆ. ಅಲ್ಲದೆ ಗುಪ್ತ ವರದಿಗಳು ಸೇರಿದಂತೆ ಇತ್ಯಾದಿ ಗೌಪ್ಯ ಮಾಹಿತಿಗಳನ್ನು ತರಿಸಿಕೊಂಡು ಟಿಕೆಟ್ ನೀಡಿದ್ದಾರೆ. ತುಮಕೂರು ಕ್ಷೇತ್ರಕ್ಕೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಅಲ್ಲದೆ ನಾನು ಮಾಡಿರುವಂತ ಹಲವು ಕೆಲಸ ಕಾರ್ಯಗಳನ್ನು ನೋಡಿ ಹೈಕಮಾಂಡ್ ಟಿಕೆಟ್ ಕೊಟ್ಟಿದೆ ಎಂದು ಸೋಮಣ್ಣ ಹೇಳಿದರು.ಮಾಜಿ ಸಚಿವ ಮಾಧುಸ್ವಾಮಿ ಅವರನ್ನು ಒಮ್ಮೆ ಭೇಟಿ ಮಾಡಿ ಮಾತಾಡಿಸಿದೆ, ಆದರೆ ಅವರು ಬರಬೇಡ ಅಂದ್ರು, ಇನ್ನೂ ಒಮ್ಮೆ ಕೇಳುತ್ತೇನೆ. ನಾಳೆ ಮಾಧುಸ್ವಾಮಿ ಅವರಿಗೆ ಟಿಕೆಟ್ ಕೊಟ್ಟರೂ ಸೋಮಣ್ಣ ಬೇಕು. ಹಿಂದೆ ಬಸವರಾಜ್ ಅವರಿಗೆ ಟಿಕೆಟ್ ಕೊಟ್ಟಾಗಲೂ ನಾವು ಕೆಲಸ ಮಾಡಿದ್ದೇವೆ.ಈ ಚುನಾವಣೆಯಲ್ಲಿ ನಾವೆಲ್ಲಾ ಗೌಣ. ಮೋದಿ ಅವರ ಅಗತ್ಯ ಅರ್ಥ ಮಾಡಿಕೊಂಡು ಜನ ಮೋದಿ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಸ್ಪರ್ಧೆ ಕುರಿತು ಕೇಳಲಾದ ಪ್ರಶ್ನೆಗೆ, ಸೋಮಣ್ಣ ಪ್ರತಿಕ್ರಿಯಿಸಿ ಈಶ್ವರಪ್ಪನವರು ಹಿರಿಯರು, ನಾನು ಅವರ ಅಭಿಮಾನಿ, ವರಿಷ್ಠರು ಎರಡು ಮೂರು ದಿನಗಳಲ್ಲಿ ಸರಿ ಮಾಡುತ್ತಾರೆ. ಅವರಿಗೆ ಆಗಿರುವ ನೋವನ್ನು ವರಿಷ್ಠರು ಶಮನ ಮಾಡುತ್ತಾರೆ ಎಂದು ಸೋಮಣ್ಣ ತಿಳಿಸಿದರು.