i
ಕೃಷಿ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಅರಣ್ಯ ದಿನ ಆಚರಣೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಅರಣ್ಯ ಮತ್ತು ಪರಿಸರ ವಿಜ್ಞಾನ ವಿಭಾಗದವರು ದಿನಾಂಕ:21-3-2024 ರಂದು ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದಲ್ಲಿ ಅಂತರಾಷ್ಟ್ರೀಯ ಅರಣ್ಯ ದಿನ-2024 ರ ಪ್ರಯುಕ್ತ ಅರಣ್ಯ ಸಂಪನ್ಮೂಲ ನಿರ್ವಹಣೆ ತರಬೇತಿ ಶಿಬಿರವನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ: ಎಸ್.ವಿ. ಸುರೇಶರವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರತಿ ದಿನ ಅರಣ್ಯ ದಿನಚಾರಣೆಯನ್ನು ಆಚರಿಸುವ ಅಗತ್ಯತೆಯಿದೆ. ಮನುಷ್ಯನ ದುರಾಸೆಯಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದ್ದು ಪ್ರತಿ ವರ್ಷ 10 ಮಿಲಿಯನ್ ಹೆಕ್ಟೇರ್ ಕಾಡು ನಾಶವಾಗುತ್ತಿದೆ. ಶೇ.33ರಷ್ಟು ಇರಬೇಕಿದ್ದ ಕಾಡು ಶೇ.22ರಷ್ಟಿದೆ. ಅರಣ್ಯ ಪ್ರದೇಶಗಳು, ಮರಗಿಡಗಳ ಕ್ಷೀಣತೆಯು ಪರಿಸರ ಹಾಗೂ ಹವಾಮಾನದ ಮೇಲೆ ನೇರ ಪರಿಣಾಮ ಬೀರಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ, ರಾಷ್ಟ್ರೀಯ ಅರಣ್ಯ ನೀತಿ ಗುರಿಯನ್ನು ತಲುಪಲು ಅರಣ್ಯ ಪ್ರದೇಶಗಳಲ್ಲಿನ ಖಾಲಿ ಸ್ಥಳಗಳು, ಅರಣ್ಯೇತರ ಸರ್ಕಾರಿ ಸ್ಥಳಗಳು, ರಸ್ತೆ ಬದಿಗಳು, ಶೈಕ್ಷಣಿಕ ಸಂಸ್ಥೆಗಳ ಅವರಣ ವಿಶ್ವವಿದ್ಯಾಲಯಗಳ ಆವರಣ, ಸರ್ಕಾರಿ ಇಲಾಖೆಗಳ ಅವರಣ, ರೈತರ ಜಮೀನುಗಳ ಬದುಗಳು ಹಾಗೂ ಕರೆ ಅಂಗಳಗಳು ಇತ್ಯಾದಿ ಪ್ರದೇಶಗಳಲ್ಲಿ ಹಸರೀಕರಣ ಕಾರ್ಯಕ್ರಮವನ್ನು ಅಭಿಯಾನವನ್ನಾಗಿ ಅನುಷ್ಠಾನಗೊಳಿಸುವುದು ಅವಶ್ಯಕವಾಗಿದೆ, ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಪ್ರಸ್ತುತ ವರ್ಷದಲ್ಲಿ 6 ಸಾವಿರದಷ್ಟು ಗಿಡಗಳನ್ನು ನೆಟ್ಟು ವಿಶ್ವವಿದ್ಯಾನಿಲಯವನ್ನು ಹಸರೀಕರಣ ಮಾಡುವತ್ತ ದಾಪುಕಾಲು ಹಾಕುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪದ್ಮಶ್ರೀ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಅವರು ಪ್ರತಿಯೊಬ್ಬ ಪ್ರಜೆಯು ಮರಗಳನ್ನು ಬೆಳೆಸಲು ಮುಂದಾಗಬೇಕು, “ಪರಿಸರ ಜಿವಂತವಾಗಿದ್ದಾಗ ಮಾತ್ರ ಮಾನವ ಜೀವಂತವಾಗಿರಲು ಸಾಧ್ಯ” ಎಂದು ತಿಳಿಸಿದರು.
ಕಾರ್ಯಕ್ರಮದ ಕೃಷಿ ವಿಶ್ವವಿದ್ಯಾನಿಲಯದ ಶಿಕ್ಷಣ ನಿರ್ದೇಶಕರಾದ ಡಾ.ಕೆ.ಸಿ ನಾರಾಯಣಸ್ವಾಮಿ, ಮಹೇಶ್ಕುಮಾರ್ ಶಂಬು, ಭಾರತೀಯ ಅರಣ್ಯ ಸೇವೆ, ಉಪ ಮಹಾನಿರ್ದೇಶಕರು, ಬೆಂಗಳೂರು, ಅಂಜನ್ಕುಮಾರ್.ಬಿ.ಎನ್, ಭಾರತೀಯ ಅರಣ್ಯ ಸೇವೆ, ಸಹಾಯಕ ನಿರ್ದೇಶಕರು, ಬೆಂಗಳೂರು ಹಾಗೂ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಭಾಗವಹಿಸಿದ್ದರು.