i
ಶ್ರಮ ಸಂಸ್ಕೃತಿಯ ತಾಯಿ ಬೇರು ಶರಣ ಸಂಸ್ಕೃತಿಯಲ್ಲಿದೆ- ಬಸವಪ್ರಭು ಸ್ವಾಮೀಜಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರಮ ಸಂಸ್ಕೃತಿಯ ತಾಯಿ ಬೇರು ಶರಣ ಸಂಸ್ಕೃತಿಯಲ್ಲಿದ್ದು. ಅಲ್ಲಿ ಎಲ್ಲ ಕಾಯಕ ಮೂಲದವರನ್ನು ಒಳಗೊಂಡ ಬಹುಮುಖಿ ನೆಲೆ ಅದಾಗಿತ್ತು. ಅಲ್ಲಿ ಯಾವುದೇ ತಾರತಮ್ಯ ಇಲ್ಲದ ಸಮಾನತೆಯ ಬದುಕು ಅನಾವರಣವಾಗಿತ್ತು. ಅದನ್ನೇ ನಾವಿಂದು ಪದವಿ, ಪದವಿಪೂರ್ವ ಹಾಗೂ ಉನ್ನತ ಶಿಕ್ಷಣ ವಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಶಿಕ್ಷಣದಲ್ಲಿ ಅಳವಡಿಸಿ ವಿದ್ಯಾರ್ಥಿಗಳಲ್ಲಿ ಸೇವಾ ಮೌಲ್ಯ ಕಲಿಸುವ ಮೂಲಕ ಎಲ್ಲ ರೀತಿಯಲ್ಲೂ ಸಮರ್ಪಣಾ ಮನೋಭಾವ, ನಾಡು ನುಡಿಯ ಬಗ್ಗೆ ಕಾಳಜಿ, ಸಂವಿಧಾನದ ಆಶಯದ ಮೂಲಕ ನಡೆಯುವ ಕಾರ್ಯಕ್ರಮ ಈ ರಾಷ್ಟ್ರೀಯ ಸೇವಾ ಯೋಜನೆಯ ಗುರಿಯಾಗಿದೆ ಎಂದು ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಹಾಗೂ ದಾವಣಗೆರೆ ವಿರಕ್ತಮಠದ ಶ್ರೀಗಳು ಬಸವಪ್ರಭು ಸ್ವಾಮೀಜಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಗಳು ಚಿತ್ರದುರ್ಗದ ಎಸ್.ಜೆ .ಎಂ.ವಿದ್ಯಾಪೀಠ , ಯುವ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ, ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಎಸ್. ಜೆ.ಎಮ್. ಪಾಲಿಟೆಕ್ನಿಕ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಪಂಡರಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ 2023- 24 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತಾಡಿದ ಅವರು, ಭಾರತ ಬಹು ಸಂಸ್ಕೃತಿಯ ನೆಲೆವೀಡು. ಹಾಗೆಯೇ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ಅಂತ ರಾಷ್ಟ್ರದಲ್ಲಿ ಸರ್ವರೂ ಐಕ್ಯತೆಯಿಂದ ಬಾಳಲು, ವಿದ್ಯಾರ್ಥಿ ದೆಸೆಯಲ್ಲಿ ಇಂತಹ ರಾಷ್ಟ್ರೀಯ ಸೇವಾ ಯೋಜನೆಗಳು ಪೂರಕ ಮತ್ತು ಸಹಕಾರಿ ಎಂದು ತಿಳಿಸಿದರು.
ನೀವುಗಳು ಇಲ್ಲಿ ಇರುವಷ್ಟು ಕಾಲ ನಿಯಮದಂತೆ ತಮಗೆ ಒಪ್ಪಿಸಿದ ಕೆಲಸ ಕಾರ್ಯಗಳನ್ನು ಚಾಚೂ ತಪ್ಪದೆ ಮಾಡಿ ಗ್ರಾಮದವರ ಮೆಚ್ಚುಗೆ ಪಡೆದು ವಿದ್ಯಾಪೀಠ ಮತ್ತು ಕಾಲೇಜಿಗೆ ಗೌರವ ತರಬೇಕೆಂದು ಸಲಹೆ ನೀಡಿದರು.
ಇಷ್ಟ ಪಟ್ಟು ಯಾವುದೇ ಕೆಲಸ ಮಾಡಿದರೂ ಯಶಸ್ಸು ಖಂಡಿತ ಸಿಗುತ್ತದೆ. 12ನೇ ಶತಮಾನದ ಬಸವಾದಿ ಶಿವಶರಣರು ಕಾಯಕ ಜೀವಿಗಳು. ಅಲ್ಲಿ ಯಾರೂ ಸಹ ದುಡಿಯದೇ ತಿನ್ನುತ್ತಿರಲಿಲ್ಲ. ಹಾಗಾಗಿ ಅಂದು ಅವರ ಸಮೂಹದಲ್ಲಿ ನೀಡುವವರಿದ್ದರೇ ಹೊರತು ಬೇಡುವವರಿರಲಿಲ್ಲ. ಸ್ವಾಭಿಮಾನ ಪೂರ್ಣ ಬದುಕು ಅವರದಾಗಿತ್ತು. ಅಂತಹ ದಾರ್ಶನಿಕರ ಆದರ್ಶ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಸಾಗುತ್ತಾ ದುಶ್ಚಟ ದುರ್ಗುಣಗಳನ್ನು ತ್ಯಜಿಸಿ ಸುಸಂಸ್ಕೃತ ನಡೆಯ ಪ್ರಜೆಗಳಾಗಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾಣಿಕೆ ಇರಲಿ ಎಂದು ಕರೆ ನೀಡಿದರು.
ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ದಿನೇಶ್ ಗೌಡಗೆರೆ, ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ ಯಶೋಧ ಮಾತನಾಡಿ ವಿದ್ಯಾರ್ಥಿಗಳು ಅತಿಯಾದ ವೇಗದ ವಾಹನ ಚಾಲನೆ, ಅತಿ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಕಾನೂನು ಪರಿದಿಯಲ್ಲಿ ನಿಮ್ಮಗಳ ವರ್ತನೆ ಇರಬೇಕು. ಯಾರೂ ಸಹ ನಿಗದಿತ ವಯಸ್ಸಿಗಿಂತ ಮೊದಲು ಯಾವುದೇ ವಾಹನ ಚಾಲನೆ ಮಾಡಬಾರದು. ಅದು ಶಿಕ್ಷಾರ್ಹ ಅಪರಾಧ. ಅದಕ್ಕೆ ನೀವು ಒಳಗಾಗಬೇಡಿ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಎಲ್ .ಮಧು ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಎಸ್.ವಿ. ರವಿಶಂಕರ್ ಅಧ್ಯಕ್ಷತೆ ವಹಿಸಿ ಪಂಡರಹಳ್ಳಿ ಗ್ರಾಮದ ಮುಖಂಡರು ಕಾಲೇಜಿನ ವತಿಯಿಂದ ನಡೆಯುವ ಈ ವಾರ್ಷಿಕ ಶಿಬಿರಕ್ಕೆ ಅತ್ಯಂತ ಕಾಳಜಿ ವಹಿಸಿ ತುಂಬಾ ಸಹಕಾರ ನೀಡಿದ್ದಾರೆ. ನಮ್ಮ ವಿದ್ಯಾರ್ಥಿಗಳು ಈ ಶಿಬಿರದ ಧ್ಯೇಯಗಳನ್ನು ಪಾಲಿಸಿ ಯಶಸ್ವಿಗೆ ಕಾರಣರಾಗಬೇಕೆಂದು ಸಲಹೆ ಮಾಡಿದರು. ಗೊಡಬನಾಳ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಾರುತಿ. ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕರು ಹಾಗೂ ಶಿಬಿರಾಧಿಕಾರಿ ಟಿ .ಗೋವಿಂದರಾಜು ಶಿಬಿರದ ಮೂಲ ಉದ್ದೇಶ ಮತ್ತು ಆಶಯಗಳು ಅವುಗಳನ್ನು ಅನುಸರಿಸುವ ಮತ್ತು ಅನುಷ್ಠಾನಕ್ಕೆ ತರುವ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು.
ಶಿಬಿರದ ವಿದ್ಯಾರ್ಥಿಗಳಿಂದ ಸೇವಾ ಯೋಜನೆಯ ಗೀತೆಯ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭವಾಯಿತು. ಬೋಧಕ ಕೆ. ಸುರೇಶ್ ಸ್ವಾಗತಿಸಿದರು. ಎನ್. ಟಿ.ಲಿಂಗರಾಜು ನಿರ್ವಹಿಸಿ ವಂದಿಸಿದರು.
ಕಾರ್ಯಕ್ರಮದ ನಂತರ ಬದುಕಿನಲ್ಲಿ ಹಾಸ್ಯ ಮತ್ತು ಸಂಗೀತ ಗಾಯನ ಕಾರ್ಯಕ್ರಮವನ್ನು ಶಿಕ್ಷಕ, ಸಾಹಿತಿ ಪರಮೇಶ್ವರಪ್ಪ ಕುದರಿ ಅವರ ತಂಡದ ಸದಸ್ಯರಾದ ಪಿಎಸ್ಐ ಯಶೋಧ, ಸಂತೋಷ್ ಹಾಗೂ ಎಂಬತ್ತರ ವಯೋಮಾನದ ಎಪಿಎಂಸಿ ನಿವೃತ್ತ ಅಧಿಕಾರಿ ಮೃತ್ಯುಂಜಯಪ್ಪ ಅವರು ನಡೆಸಿಕೊಟ್ಟು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಶಿಬಿರಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಬಿರದ ಮಹತ್ವ ಸಾರುವ ಗೀತೆಗಳನ್ನು ಹಾಡುತ್ತಾ ಪಥ ಸಂಚಲನ ನಡೆಸಿದರು.
ಶಿಬಿರದ ಎರಡನೇ ದಿನವಾದ ಗುರುವಾರ ಬೆಳಗ್ಗೆ ಶಾಲಾ ಆವರಣದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಎಸ್. ವಿಜಯ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಂತರ ಆರೋಗ್ಯವಂತ ಬದುಕಿಗೆ ಯೋಗಾಸನ ಪ್ರಾಣಾಯಾಮ ಮತ್ತು ಧ್ಯಾನ ಕುರಿತಾಗಿ ಅದರ ಪ್ರಯೋಜನ ಕುರಿತಾಗಿ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಯೋಗಚಾರ್ಯ ಎಲ್.ಎಸ್. ಚಿನ್ಮಯಾನಂದ ಅವರು ಶಿಬಿರಾರ್ಥಿಗಳಿಗೆ ಎಲ್ಲ ಸಂಪತ್ತಿಗಿಂತ ಬಹು ಮುಖ್ಯವಾದದ್ದು ಆರೋಗ್ಯ. ಅದನ್ನು ನೀವು ವಿದ್ಯಾರ್ಥಿ ದೆಸೆಯಲ್ಲಿ ಹಾಳು ಮಾಡಿಕೊಳ್ಳದೆ ಸದುಪಯೋಗಪಡಿಸಿಕೊಳ್ಳಿ ಎಂಬ ಮಾತುಗಳನ್ನು ಕೆಲ ಪ್ರಾಯೋಗಿಕ ಆಸನ ಮಾಡಿ ತೋರಿಸುವ ಮೂಲಕ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಟಿ.ಗೋವಿಂದರಾಜು, ಮಾರುತಿ .ಎ,ಕೆ .ಸುರೇಶ್, ಎಂ.ಸಿ. ಮಲ್ಲಿಕಾರ್ಜುನ ಸ್ವಾಮಿ ಹಾಗೂ ಈ. ಗೋಪಿನಾಥ್ ಅವರು ಉಪಸ್ಥಿತರಿದ್ದರು.
ನಂತರದಲ್ಲಿ ಚಿತ್ರದುರ್ಗ ಎಸ್ ಜೆ. ಎಂ .ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಗ್ರಾಮದ ಜನತೆಗೆ ,ವಿದ್ಯಾರ್ಥಿಗಳಿಗೆ ಹಾಗೂ ಶಿಬಿರಾರ್ಥಿಗಳಿಗೆ ಉಚಿತ ದಂತ ತಪಾಸಣಾ ಶಿಬಿರವು ತಜ್ಞ ವೈದ್ಯ ಡಾ. ಪ್ರೀತಿ ಮತ್ತು ತಂಡದವರಿಂದ ನೆರವೇರಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಶೇಖರಪ್ಪ, ಟಿ. ಗೋವಿಂದರಾಜು ಮಾರುತಿ. ಎ, ಕೇಶವಮೂರ್ತಿ. ಎಂ, ಕೆ ಸುರೇಶ್ ಹಾಗೂ ಎಸ್ .ವಿಜಯ್ ಮತ್ತಿತರರು ಉಪಸ್ಥಿತರಿದ್ದರು.