i
ಜೆಜಿಹಳ್ಳಿ ಚೆಕ್ ಪೋಸ್ಟ್ ನಲ್ಲಿ ಕೋಟ್ಯಂತರ ರೂ.ವಶ, ಮದ್ಯ ನಗದು ವಶ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಚುನಾವಣಾ ಎಸ್ಎಸ್ ಟಿ ತಂಡ ದಿಢೀರ್ ಪರಿಶೀಲನೆ ಮಾಡಿ ಕೋಟ್ಯಂತರ ರೂ.ನಗದು, 5479 ಗಾರ್ಮೆಂಟ್ಸ್ (ಬಟ್ಟೆ) ವಸ್ತುಗಳನ್ನು ವಶಕ್ಕೆ ಪಡೆದು ಲಕ್ಷಾಂತರ ರೂ.ತಂಡ ವಿಧಿಸಲಾಗಿದೆ.
ಹಿರಿಯೂರು ತಾಲೂಕಿನ ಜೆ ಜಿ ಹಳ್ಳಿ ಗ್ರಾಮದ ಚೆಕ್ ಪೋಸ್ಟ್ ನಲ್ಲಿ ತಹಶೀಲ್ದಾರ್ ಸಿ.ರಾಜೇಶ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಕಾಳಿಕೃಷ್ಣ, ರಾಘವೇಂದ್ರ, ಮತ್ತು ಎಸ್ಎಸ್ ಟಿ(SST team) ತಂಡದ ಸುಧೀರ್ ಇವರುಗಳ ನೇತೃತ್ವದಲ್ಲಿ ವಾಹನ ತಪಾಸಣೆ ಮಾಡಿ (1,44,0000) ಒಂದು ಕೋಟಿ ನಲವತ್ತು ನಾಲ್ಕು ಲಕ್ಷ ರೂಪಾಯಿಗಳನ್ನು ಸೀಜ್ ಮಾಡಿದ್ದಾರೆ.
ಎಟಿಎಂಗೆ ಹಣ ತುಂಬಲು ತುಮಕೂರು ನಗರದಿಂದ ಶಿರಾ ನಗರದವರೆಗೆ ಅನುಮತಿ ಪತ್ರ ಪಡೆದಿದ್ದ ವಾಹನವು ಶಿರಾ ನಗರದಲ್ಲಿ ಎಟಿಎಂಗೆ ಹಣ ಭರ್ತಿ ಮಾಡದೆ ಹಿರಿಯೂರು ತಾಲೂಕಿಗೆ ಅನುಮತಿ ಇಲ್ಲದೆ ಏಕೆ ಬಂದಿತ್ತು ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಎಲ್ಲ ಮಗ್ಗಲುಗಳಿಂದ ಐಟಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ರೂ.6.32 ಲಕ್ಷದ ಗಾರ್ಮೆಂಟ್ಸ್ ವಶ : ಜಿ.ಎಸ್.ಟಿ ದಂಡ ವಸೂಲಿ…
ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಿಂದ ಮಾರ್ಚ್ 22 ಬೆಳಿಗ್ಗೆ 9 ಗಂಟೆಯಿಂದ ಮಾರ್ಚ್ 23 ರ ಬೆಳಿಗ್ಗೆ 9 ಗಂಟೆಯವರೆಗೆ ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿ, 6,32,553 ರೂ.ಮೌಲ್ಯದ 5479 ಗಾರ್ಮೆಂಟ್ಸ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂದ 62968 ರೂ.ಜಿ.ಎಸ್.ಟಿ ದಂಡ ವಸೂಲಿ ಮಾಡಲಾಗಿದೆ ಎಂದು ವಾಣಿಜ್ಯ ತೆರೆಗೆ ಇಲಾಖೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಕಾರ್ಯಚರಣೆ: 42 ಸಾವಿರ ರೂ.ಮೌಲ್ಯದ ಮದ್ಯ ವಶ
ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಮಾರ್ಚ್ 22 ಬೆಳಿಗ್ಗೆ 9 ಗಂಟೆಯಿಂದ ಮಾರ್ಚ್ 23ರ ಬೆಳಿಗ್ಗೆ 9 ಗಂಟೆಯವರೆಗೆ ಜಿಲ್ಲೆಯಾದ್ಯಂತ ಪೊಲೀಸ್ ಕಾರ್ಯಾಚರಣೆಯಲ್ಲಿ 42,105 ರೂ. ಮೌಲ್ಯದ 85.37 ಲೀಟರ್ ಮದ್ಯ ವಶ ಪಡಿಸಿಕೊಳ್ಳಲಾಗಿದೆ. ಈ ಸಂಬಂಧ 11 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದ್ರ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 45,38,000 ರೂ.ನಗದು, 1,08,687 ರೂ.ಮೌಲ್ಯದ 232 ಲೀಟರ್ ಮದ್ಯ, 47,760 ರೂ. ಮೌಲ್ಯದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾವುದೇ ರೀತಿಯ ಮಾದಕ ವಸ್ತುಗಳು ಹಾಗೂ ಚಿನ್ನಾಭರಣಗಳನ್ನು ದೊರಕಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುರುವನೂರು ಚೆಕ್ಪೋಸ್ಟ್ ದಾಖಲೆ ಇಲ್ಲದ 1.50 ಲಕ್ಷ ರೂ.ವಶ-…
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ.1.50 ಲಕ್ಷ ಹಣವನ್ನು ತುರುವನೂರು ಹೋಬಳಿ ಚೆಕ್ಪೋಸ್ಟ್ನಲ್ಲಿ ಶನಿವಾರ ವಶಕ್ಕೆ ಪಡೆಯಲಾಗಿದೆ.
ಎಫ್ಎಸ್ಟಿ ತಂಡದ ಮುಖ್ಯಸ್ಥ ಟಿ.ಕೆ.ಸಂತೋಷ್ ಕುಮಾರ್ ಅವರು ತುರುವನೂರು ಹೋಬಳಿ ಚೆಕ್ಪೋಸ್ಟ್ನಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಹನಗಳನ್ನು ಪರಿಶೀಲನೆ ಮಾಡುವಾಗ ಕೊಪ್ಪಳದ ಇರ್ಪಾನ್ ಶೇಕ್ ಬಿನ್ ದಾದಾಪೀರ್ ಎಂಬುವರು ಕಾರಿನಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ರೂ. 1.50 ಲಕ್ಷ ಹಣವನ್ನು ಎಫ್ಎಸ್ಟಿ ತಂಡ ತಪಾಸಣೆ ನಡೆಸಿ, ಹಣ ವಶಪಡಿಸಿಕೊಂಡಿದೆ.
ಜಪ್ತಿ ಪಡಿಸಿಕೊಂಡ ಹಣವನ್ನು ನಗದು ವಶಪಡಿಸಿಕೊಳ್ಳುವ ಪರಿಹಾರ ಸಮಿತಿ ಗಮನಕ್ಕೆ ತಂದಿದ್ದು, ಈ ಹಣವನ್ನು ಚಳ್ಳಕೆರೆಯ ಉಪ ಖಜಾನೆಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಚಳ್ಳಕೆರೆ ತಹಶೀಲ್ದಾರ್ ತಿಳಿಸಿದ್ದಾರೆ.