i
ಲೋಕಸಭೆ ಚುನಾವಣಾ ಕಣದಿಂದ ಹಿಂದೆ ಸರಿದ ಇಬ್ಬರು ಬಿಜೆಪಿ ಅಭ್ಯರ್ಥಿಗಳು…
ಚಂದ್ರವಳ್ಳಿ ನ್ಯೂಸ್, ಗಾಂಧಿನಗರ:
ಗುಜರಾತ್ನ ವಡೋದರಾ ಮತ್ತು ಸಬರ್ಕಾಂತ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
ವಡೋದರದ ಹಾಲಿ ಸಂಸದೆ ಹಾಗೂ ಬಿಜೆಪಿ ಅಭ್ಯರ್ಥಿ ರಂಜನ್ ಭಟ್ ಅವರು ವೈಯುಕ್ತಿಕ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ.
ಬಿಜೆಪಿ ಮಾರ್ಚ್ 14ರಂದು ಪ್ರಕಟಿಸಿದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ರಂಜನ್ ಭಟ್ ಅವರ ಹೆಸರನ್ನು ಘೋಷಿಸಿತ್ತು. ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ರಂಜನ್ ಭಟ್ ಅವರಿಗೆ ಮೂರನೇ ಬಾರಿಯೂ ಟಿಕೆಟ್ ನೀಡಿರುವುದಕ್ಕೆ ಬಿಜೆಪಿಯಲ್ಲಿ ಆಂತರಿಕ ವಿರೋಧ ವ್ಯಕ್ತವಾಗಿತ್ತು. ರಂಜನ್ ಭಟ್ ಅವರಿಗೆ ಟಿಕೆಟ್ ನೀಡದಂತೆ ಕೆಲ ದಿನಗಳ ಹಿಂದೆ ವಡೋದರದಾದ್ಯಂತ ಪೋಸ್ಟರ್ಗಳು ಕಾಣಿಸಿಕೊಂಡಿತ್ತು.
2014ರಲ್ಲಿ ವಾರಣಾಸಿ ಕ್ಷೇತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಟ್ಟು ಕೊಟ್ಟಿದ್ದ ರಂಜನ್ ಭಟ್ ಅವರು, ವಡೋದರದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ದಾಖಲಿಸಿದ್ದರು.
ಗುಜರಾತ್ನ ಸಬರ್ಕಾಂತ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಿಕಾಜಿ ಠಾಕೂರ್ ಅವರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.