i
ಶನೇಶ್ವರ ಸ್ವಾಮಿ ಮತ್ತು ಶ್ರೀ ಚಕ್ಕಾಪುರದಮ್ಮ ದೇವರ ವಿಜೃಂಭಣೆಯ ಜಾತ್ರೋತ್ಸವ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಅರ್ಚಕ ರಘುಸ್ವಾಮಿ ಅವರ ಹೇಳಿಕೆಗಳು ನುಡಿದಂತೆ ನಡೆಯುತ್ತವೆ ಎಂಬ ನಂಬಿಕೆಗೆ ಪಾತ್ರವಾಗಿರುವ ತಾಲೂಕಿನ ರಾಮೇನಕೊಪ್ಪ ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ಮತ್ತು ಶ್ರೀ ಚಕ್ಕಾಪುರದಮ್ಮ ಮೂಲ ದೇವಾಲಯ ಹಾಗೂ ಶ್ರೀ ಮೊರಬ ಶ್ರೀ ವೀರಭದ್ರ ಸ್ವಾಮಿ ದೇವಾಲಯದ ೨೭ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ ೨೪ರ ಭಾನುವಾರ ಬೆಳಿಗ್ಗೆ ಕೆಂಡಾರ್ಚನೆ, ಮಹಾ ಮಂಗಳಾರತಿ ಮತ್ತಿತರೆ ಧಾರ್ಮಿಕ ಕಾರ್ಯಗಳು ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನಡೆಯಿತು.
ನೀಲಗುಂದ ವಂಶಸ್ತರು ಚಳ್ಳಕೆರೆಯಿಂದ ಶಿವಮೊಗ್ಗ ಮಾರ್ಗವಾಗಿ ತಂದಿದ್ದ ಮೊರಬ ವೀರಭದ್ರ ಸ್ವಾಮಿ ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ವಾದ್ಯಮೇಳದೊಂದಿಗೆ ಉತ್ಸವ ಮೂರ್ತಿಗಳನ್ನು ಪಲಕ್ಕಿಯಲ್ಲಿ ಹೊತ್ತು ವೀರಗಾಸೆ ಒಡಪು ಹಾಡುತ್ತ ಗ್ರಾಮದದ ಬೀದಿಯಲ್ಲಿ ಮೆರವಣಿಗೆ ನಡೆಸಿ ದೇವಾಲಯದ ಆವರಣಕ್ಕೆ ತರಲಾಯಿತು.
ದೇವರಿಗೆ ಗಂಗಾಭಿಷೇಕದ ನಂತರ ವಿಶೇಷ ವಸ್ತ್ರ ಹಾಗೂ ಪುಷ್ಪದೊಂದಿಗೆ ಸಿಂಗರಿಸಲಾಯಿತು. ಅರ್ಚಕರು ಅಗ್ನಿಕುಂಡವನ್ನು ಸಿದ್ಧಗೊಳಿಸಿ ಸಾಂಪ್ರದಾಯಿಕ ಪೂಜಾವಿಧಿಗಳು ಮತ್ತು ನೈವೇದ್ಯೆ ಸಮರ್ಪಣೆ ಮಾಡಿದರು. ದೇವರುಗಳ ಪಲಕ್ಕಿ ಹೊತ್ತವರು ಭಗವಂತನ ನಾಮಸ್ಮರಣೆ ಮಾಡುತ್ತ ಕೆಂಡದ ರಾಶಿ ಹಾಯ್ದರು. ಭಕ್ತರು ಇವರನ್ನು ಹಿಂಬಾಲಿಸಿದರು.
ಸಕಲವಾದ್ಯ ಮೇಳದೊಂದಿಗೆ ದೇವಸ್ಥಾನಕ್ಕೆ ಮರಳಿದ ದೇವರ ಮೂರ್ತಿಗಳಿಗೆ ಮಹಾಮಂಗಳಾರತಿ ಮಾಡಲಾಯಿತು. ಭಕ್ತರು ದೇವಿಗೆ ಉಡಿ ತುಂಬಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.
ಅರ್ಚಕ ರಘುಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಗಳಲ್ಲಿ ರಾಮೇನಕೊಪ್ಪ ಸುತ್ತಮುತ್ತಲಿನ ಗ್ರಾಮಗಳು, ಶಿವಮೊಗ್ಗ, ಬೆಂಗಳೂರು, ಚಳ್ಳಕೆರೆ ಮತ್ತಿತರೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.