i
ಚೆಕ್ ಪೋಸ್ಟ್ ಗಳಲ್ಲಿ ಎಲ್ಲ ವಾಹನಗಳ ತಪಾಸಣೆ ಕಡ್ಡಾಯ: ನಿರ್ಲಕ್ಷಿಸಿದರೆ ಕಾನೂನು ಕ್ರಮ-ಜಿಲ್ಲಾಧಿಕಾರಿ ವೆಂಕಟೇಶ್ ಎಚ್ಚರಿಕೆ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಂಡಿದ್ದು, ವಿಶೇಷವಾಗಿ ಚುನಾವಣಾ ಸಂದರ್ಭದಲ್ಲಿ ಹೆಚ್ಚಿನ ಹಣ ಹಾಗೂ ವಸ್ತುಗಳು ಕಾನೂನು ಬಾಹಿರವಾಗಿ ಮತದಾರರಿಗೆ ತಲುಪುವ ವ್ಯವಸ್ಥೆಯನ್ನು ಸಂಪೂರ್ಣ ತಡೆಯುವ ನಿಟ್ಟಿನಲ್ಲಿ ತಪಾಸಣಾ(ಚೆಕ್ ಪೋಸ್ಟ್) ಕೇಂದ್ರ ಸ್ಥಾಪಿಸಿದ್ದು, ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ವರ್ಗ ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಬೇಕು, ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸಲುಸಾಧ್ಯವಿಲ್ಲ. ಲೋಪವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಗಂಭೀರ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ವೆಂಕಟೇಶ್ ನೀಡಿದರು. ಅವರು, ಭಾನುವಾರ ಚಳ್ಳಕೆರೆ ನಗರದ ನಾಯಕಹಟ್ಟಿ ಕ್ರಾಸ್, ಚಿತ್ರದುರ್ಗ ರಸ್ತೆ, ಪರಶುರಾಮಪುರ ಮತ್ತು ಜಾಜೂರು ಗ್ರಾಮದ ಸುತ್ತಮುತ್ತಲ ತಪಾಸಣಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಬ್ಬಂದಿ ವರ್ಗಕ್ಕೆ ಮಾರ್ಗದರ್ಶನದೊಂದಿಗೆ ಎಚ್ಚರಿಕೆ ನೀಡಿದರು. ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ತಪಾಸಣಾ ಕಾರ್ಯಚುರುಕುಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಪ್ರಾರಂಭದಲ್ಲಿ ಕೆಲವೊಂದು ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಹೋಗುವಂತೆ ನಿರ್ದೇಶನ ನೀಡಲಾಗಿದೆ. ತಪಾಸಣಾ ಕೇಂದ್ರಗಳ ಕಾರ್ಯಗಳ ಬಗ್ಗೆ ಅಲ್ಲಲ್ಲಿ ಅಪಸ್ವರವಿದೆ. ಆದ್ದರಿಂದ ಸಿಬ್ಬಂದಿ ವರ್ಗ ಈ ನಿಟ್ಟಿನಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುವ ಅವಶ್ಯಕತೆ ಹೆಚ್ಚಿದೆ. ಎಲ್ಲಾ ಸಿಬ್ಬಂದಿ ವರ್ಗ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದರು.
ತಹಶೀಲ್ದಾರ್ ರೇಹಾನ್ಪಾಷ ವಿವಿಧ ತಪಾಸಣಾ ಕೇಂದ್ರಗಳ ಅಧಿಕಾರಿಗಳು, ಕಂದಾಯಾಧಿಕಾರಿ ಲಿಂಗೇಗೌಡ, ರಾಜೇಶ್, ಗ್ರಾಮ ಲೆಕ್ಕಿಗ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.