i
ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯನಿರ್ವಹಿಸಿ- ಪ್ರಾಜಕ್ತ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಚುನಾವಣಾ ಕಾರ್ಯ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ನೇಮಕಗೊಂಡಿರುವ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಭಂದಿಗಳು ತಮ್ಮ ಜವಾಬ್ದಾರಿಯರಿತು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯನಿರ್ವಹಿಸುವಂತೆ ವೆಚ್ಚ ವೀಕ್ಷಕಿ ಪ್ರಾಜಕ್ತ ಪಿ.ಠಾಕೂರ್ ಹೇಳಿದರು.ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಎಲ್ಲಾ ಸಮಿತಿಗಳ ನೋಡಲ್ ಅಧಿಕಾರಿಗಳು, ಲೆಕ್ಕಪತ್ರ ನಿರ್ವಾಹಕ ಅಧಿಕಾರಿಗಳು ಮತ್ತು ಸಿಬ್ಬಂಧಿಗಳೊಂದಿಗೆ ಸಮಾಲೋಚನೆ ನಡೆಸಿ, ಈವರೆಗೆ ನಿರ್ವಹಿಸಿದ ಕೆಲಸ-ಕಾರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯುತ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಲವು ಸಮಿತಿಗಳನ್ನು ರಚಿಸಿ, ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಕ್ರಮ ತಡೆಗೆ ಜಿಲ್ಲೆಯಾದ್ಯಂತ ನಿರಂತರ ಕಣ್ಗಾವಲು ಇರಿಸಲಾಗಿದೆ. ಪೆಟ್ರೋಲ್ ಬಂಕ್, ಬ್ಯಾಂಕುಗಳಲ್ಲಿನ ಅಸಹಜವಾದ ವಹಿವಾಟು, ಜಿಲ್ಲೆಯ ಗಡಿ ಪ್ರದೇಶಗಳಲ್ಲಿನ ಸರಕು ಸಾಗಾಣಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹೊರಗಿನಿಂದ ಜಿಲ್ಲೆಯ ಗಡಿಯೊಳಗೆ ಬರಬಹುದಾದ ಮಾದಕ ವಸ್ತು, ಮದ್ಯ, ಮೌಲ್ಯಯುತ ಸರಕುಗಳು, ನಗದು ಸೇರಿದಂತೆ ಅಕ್ರಮ ವಹಿವಾಟಿನ ಬಗ್ಗೆ ವಿಶೇಷ ಗಮನಹರಿಸಬೇಕು. ಬ್ಯಾಂಕುಗಳಲ್ಲಿನ ಅನಿಯಮಿತ ಹಾಗೂ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುವಂತೆ ಸೂಚಿಸಿದ ಅವರು, ಅಕ್ರಮಗಳ ನಿಯಂತ್ರಿಸುವಲ್ಲಿ ಹಗಲಿರುಳು ಕಣ್ಗಾವಲು ಇರಬೇಕು. ಅಲ್ಲದೇ ಅಧಿಕಾರಿಗಳು ಎಲ್ಲಾ ವಿಷಯಗಳಲ್ಲಿ ತಾವು ನಿರ್ವಹಿಸಿದ ಕಾರ್ಯ ಹಾಗೂ ಕೈಗೊಂಡ ಕ್ರಮಗಳ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಸಕಾಲದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡುವಂತೆ ಸೂಚಿಸಿದರು.ಜಿಪಂ ಸಿಇಒ ಹಾಗೂ ಸ್ಪೀಪ್ ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್ ಮಾತನಾಡಿ, ಶೇ.೭೦ಕ್ಕಿಂತ ಕಡಿಮೆ ಮತದಾನ ನಡೆದಿರುವ ಮತಗಟ್ಟೆಗಳ ಪ್ರದೇಶದ ವ್ಯಾಪ್ತಿಯಲ್ಲಿ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿನ ದೈನಿಕಗಳು, ಸುದ್ದಿವಾಹಿನಿಗಳು ಹಾಗೂ ಸಿಟಿ ಕೇಬಲ್ ನೆಟ್ವರ್ಕ್ಗಳಲ್ಲಿ ಪ್ರಸಾರಗೊಳ್ಳುವ ಜಾಹಿರಾತು ಹಾಗೂ ಕಾಸಿಗಾಗಿ ಸುದ್ದಿಗಳ ಮೇಲೆ ವಿಶೇಷ ಗಮನಹರಿಸಬೇಕು. ಪ್ರಕಟಗೊಳ್ಳುವ ಪ್ರಚಾರ ಸಾಮಗ್ರಿಗಳು, ಪತ್ರಿಕಾ ಜಾಹಿರಾತುಗಳ ಖರ್ಚು-ವೆಚ್ಚಗಳ ಬಗ್ಗೆಯೂ ಗಮನಹರಿಸಬೇಕು. ಸಂಬಂಧಿತ ಸಮಿತಿಗಳ ಅಧಿಕಾರಿಗಳು ಕಾಲಕಾಲಕ್ಕೆ ಇವುಗಳ ಕುರಿತು ವೆಚ್ಚನಿರ್ವಾಹಕರಿಗೆ ಮಾಹಿತಿ ನೀಡುವಂತೆ ಸೂಚಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಅಲ್ಲದೇ ರಕ್ಷಣಾಕಾರ್ಯಕ್ಕೆ ಅಗತ್ಯ ಸಿಬ್ಬಂಧಿಗಳನ್ನು ನಿಯೋಜಿಸಲಾಗಿದೆ. ಈವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ವರದಿ ಇರುವುದಿಲ್ಲ ಎಂದು ತಿಳಿಸಿದರು.ಸಭೆಯಲ್ಲಿ ಚುನಾವಣೆಗೆ ನಿಯೋಜಿತ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು, ಚುನಾವಣಾ ಸಿಬ್ಬಂಧಿಗಳು ಉಪಸ್ಥಿತರಿದ್ದರು.