i
ದಲಿತರಿಗೆ ಸ್ಮಶಾನ ಮಂಜೂರು ಮಾಡಿದ ತಾಲೂಕು ಆಡಳಿತ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಗುಳಗೊಂಡನಹಳ್ಳಿಯಲ್ಲಿ ದಲಿತರಿಗೆ ಸ್ಮಶಾನ ಇಲ್ಲದೆ ಇರುವುದರಿಂದ ಅನಾನುಕೂಲವಾಗಿದ್ದು ಅನೇಕ ಬಾರಿ ಗ್ರಾಮಕ್ಕೆ ಸ್ಮಶಾನ ಮಂಜೂರು ಮಾಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಿದರೂ ಇಲ್ಲಿಯವರೆಗೂ ಸ್ಮಶಾನ ಮಂಜೂರು ಮಾಡಿರುವುದಿಲ್ಲ ಎಂದು ದಲಿತರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಗ್ರಾಮದ ಎ.ಕೆ.ಜನಾಂಗದ ಗುಡದಪ್ಪ(85) ಮರಣ ಹೊಂದಿರುತ್ತಾರೆ. ಕೂಡಲೇ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ದಲಿತರಿಗೆ ಸ್ಮಶಾನ ಕಲ್ಪಿಸಿಕೊಡದಿದ್ದರೆ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಶವವನ್ನು ಇಟ್ಟು ಮಹಾನಾಯಕ ದಲಿತಸೇನೆ ಸಂಘಟನೆಯ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಎಚ್ಚರಿಸಿದರು.
ಗುಳಗೊಂಡನಹಳ್ಳಿ ಗ್ರಾಮಕ್ಕೆ ತಹಶೀಲ್ದಾರವರು ಭೇಟಿ ನೀಡಿ ಗ್ರಾಮದ ದಾಖಲೆಗಳನ್ನು ಪರಿಶೀಲನೆ ಮಾಡಿ ಈಗಾಗಲೇ ಗುಳಗೊಂಡನಹಳ್ಳಿ ಗ್ರಾಮಕ್ಕೆ ಸ್ಮಶಾನ ಮಂಜೂರು ಆಗಿದ್ದು ಸದರಿ ಜಾಗದಲ್ಲಿ ಸರ್ಕಾರಿ ಶಾಲೆ ಮತ್ತು ಮನೆಗಳನ್ನು ನಿರ್ಮಿಸಿಕೊಂಡಿರುವುದರಿಂದ ಈಗ ಪಹಣಿಯಲ್ಲಿ ಬರುತ್ತಿರುವ ಸ್ಮಶಾನ ಭೂಮಿಯನ್ನು ರದ್ದು ಮಾಡಿ ಹೊಸದಾಗಿ ಗ್ರಾಮದ ಪಕ್ಕದಲ್ಲಿ ಸ್ಮಶಾನ ಭೂಮಿಯನ್ನು ಏಪ್ರಿಲ್ 10ರೊಳಗೆ ಮಂಜೂರು ಮಾಡುವುದಾಗಿ ತಿಳಿಸಿದರು. ಹಾಗೂ ಗ್ರಾಮದ ಸವರ್ಣಿಯರು ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಹೋರಾಟ ವಾಪಸ್ ಹಿಂಪಡೆಲಾಯಿತು. ಈ ಸಂದರ್ಭದಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಕೆ.ತಿಮ್ಮರಾಜು, ಮಹಾನಾಯಕ ದಲಿತಸೇನೆ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್, ರಾಜ್ಯ ಕಾರ್ಯದರ್ಶಿ ಓಂಕಾರ್, ಭಾರತೀಯ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಆರ್, ತಾಲ್ಲೂಕು ಕಾರ್ಯದರ್ಶಿ ಕೆಂಚಪ್ಪ, ಮಂಜುನಾಥ್, ಸಂದೀಪ್, ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.