i
ಅಬಕಾರಿ ಅಧಿಕಾರಿಗಳ ದಾಳಿ: ಅಕ್ರಮ ಮದ್ಯ ಸಾಗಾಟ ಎರಡು ಪ್ರಕರಣ ದಾಖಲು…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದು ಬುಧವಾರ ಬೆಳಗಿನಿಂದ ಸಂಜೆವರೆಗೆ ಚಳ್ಳಕೆರೆ ತಾಲ್ಲೂಕು ಸೇರಿದಂತೆ ಇತರೆಡೆ ಮಿಂಚಿನ ದಾಳಿ ನಡೆಸಿ ಅಕ್ರಮ ಮದ್ಯ, ಸಾಗಾಟಕ್ಕೆ ಉಪಯೋಗಿಸಿದ ವಾಹನ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ಧಾರೆ. ಜಿಲ್ಲಾ ಅಬಕಾರಿ ಉಪ ಆಯುಕ್ತ ನಿರ್ದೇಶನ, ಹಿರಿಯೂರು ಉಪವಿಭಾಗದ ಅಬಕಾರಿ ಉಪಾಧೀಕ್ಷಕರ ಮತ್ತು ಚಳ್ಳಕೆರೆ ಅಬಕಾರಿ ನಿರೀಕ್ಷಕ ಜಂಟಿ ಕಾರ್ಯಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕ ಹಾಗೂ ಸಿಬ್ಬಂದಿ ವರ್ಗ ಈ ದಾಳಿಯಲ್ಲಿ ಭಾಗವಹಿಸಿ ವಿಶೇಷ ಕಾರ್ಯಚರಣೆ ನಡೆಸಿದ್ಧಾರೆ. ನಗರದ ಬೆಂಗಳೂರು ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿ ಹಿರೋಫ್ಯಾಷನ್ ದ್ವಿಚಕ್ರವಾಹನದಲ್ಲಿ ಸುಮಾರು ೭೩೮೦ ಲೀಟರ್ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ದೊಡ್ಡೇರಿಯ ಟಿ.ದಯಾನಂದ ಎಂಬುವನನ್ನು ವಶಕ್ಕೆ ಪಡೆದು ೩೨೮೦ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ರಸ್ತೆಯ ನಗರಂಗೆರೆ ಗ್ರಾಮದಕ್ಕೆ ಹೋಗುವ ತಿರುವಿನಲ್ಲಿ ಹಿರೋಪ್ಯಾಷನ್ ದ್ವಿಚಕ್ರ ವಾಹನದಲ್ಲಿ ದೇವರಮರಿಕುಂಟೆಯ ಜಯಣ್ಣ ಎಂಬುವವರು ೩೧೨೦ ರೂ ಮೌಲ್ಯದ ೭೮೦೦ ಲೀಟರ್ ಮದ್ಯ ಸಾಗಾಟ ಮಾಡುತ್ತಿದ್ದು, ವಾಹನ ಸಮೇತ ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ. ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕ ಸಿ.ನಾಗರಾಜು, ಅಬಕಾರಿ ಉಪ ನಿರೀಕ್ಷಕರಾದ ಡಿ.ಟಿ.ತಿಪ್ಪಯ್ಯ, ರೇಖಾ, ಮುಖ್ಯಪೇದೆಗಳಾದ ನಾಗರಾಜು, ಸೋಮಶೇಖರ್, ಮಂಜುಳಾ ಭಾಗವಹಿಸಿದ್ದರು.