i
ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರವಾಗಿ ಶಾಸಕರು ಚುನಾವಣಾ ಕೆಲಸ ಮಾಡಲ್ವಾ?, ಸಿಎಂ ಶಾಸಕರಿಗೆ ಏಕೆ ಆ ರೀತಿ ಹೇಳಿದ್ರು?…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆ ನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರಿಗೆ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು ಚುನಾವಣೆ ಕೆಲಸ ಮಾಡುತ್ತಿಲ್ವಾ?, ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭೀತಿ ಕಾಡಿತಾ?, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರಿಗೆ ಆ ರೀತಿ ಏಕೆ ಹೇಳಿದ್ರು?, ಅಥವಾ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಅವರು ಸಿಎಂಗೆ ಜಿಲ್ಲೆಯ ಶಾಸಕರ ಬಗ್ಗೆ ಏನಾದರೂ ದೂರು ಹೇಳಿದ್ರಾ? ಎಲ್ಲವೂ ನಿಗೂಢವಾಗಿದೆ.
ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪರವಾಗಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯ ನಂತರ ಮಾಜಿ ಸಚಿವ ಹೆಚ್.ಆಂಜನೇಯ ಅವರ ಸೀಬಾರದ ಮನೆಯಲ್ಲಿ ಏರ್ಪಡಿಸಲಾಗಿದ್ದ ಡಿನ್ನರ್(ಊಟ) ಆದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಶಾಸಕರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರನ್ನು ಗೆಲ್ಲಿಸಲು ಕ್ಷೇತ್ರದ ಎಲ್ಲ ಶಾಸಕರು ಬದ್ಧತೆಯಿಂದ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನನಗೆ ಕ್ಷಣ ಕ್ಷಣದ ಮಾಹಿತಿ ಗುಪ್ತ ವಾರ್ತೆ ಮೂಲಕ ಲಭ್ಯವಾಗುತ್ತದೆ. ಯಾವ ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲವೋ ಅಂತಹ ಶಾಸಕರ ಮಾಹಿತಿಯನ್ನು ಹೈ ಕಮಾಂಡ್ ಕೇಳಿದಾಗ ನಾನು ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಅಭ್ಯರ್ಥಿ ಚಂದ್ರಪ್ಪ ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಇದರಲ್ಲಿ ಲೋಪ ಆದರೆ ಹೈ ಕಮಾಂಡ್ ಗೆ ಸ್ಪಷ್ಟ ಮಾಹಿತಿ ನೀಡಲಾಗುತ್ತದೆ ಎಂದು ಸಿಎಂ ಖಡಕ್ ಸೂಚನೆ ನೀಡಿದರು ಎನ್ನುವ ಮಾಹಿತಿ ಆಪ್ತ ಮೂಲಗಳಿಂದ ಲಭ್ಯವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲರೂ ಒಗ್ಗಟಿನಿಂದ ಕೆಲಸ ಮಾಡಿ ಚಂದ್ರಪ್ಪ ಇವರನ್ನು ಗೆಲ್ಲಿಸಿಕೊಳ್ಳುವಂತೆ ಸೂಚನೆ ನೀಡಿದ್ದು ಏಕೆ ಎನ್ನುವ ಅನುಮಾನ ಕೂಡ ಕಾಡುತ್ತಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರು ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚು ಉತ್ಸಾಹದಲ್ಲಿ ಭಾಗವಹಿಸದಿರುವುದು, ಕಾಂಗ್ರೆಸ್ ನಲ್ಲಿರುವ ಒಡಕಿನ ಧ್ವನಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇತ್ತಾ ಅಥವಾ ಅಭ್ಯರ್ಥಿ ಚಂದ್ರಪ್ಪ ಅವರು ಶಾಸಕರುಗಳಿಗೆ ಖಡಕ್ ಸೂಚನೆ ನೀಡಿ ಸಂಘಟಿತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಸೂಚನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವರಿಕೆ ಮಾಡಿಕೊಟ್ರಾ, ಒಗ್ಗಟ್ಟಿನಿಂದ ಕೆಲಸ ಮಾಡಲು ಸೂಚಿಸಿ ಎಂದು ಹೇಳಿದ್ರಾ ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸುವುದು ಸಹಜ. ರಾಜಕೀಯವಾಗಿ ಆರೋಪ, ಪ್ರತ್ಯಾರೋಪಗಳು ಕೇಳಿ ಬರುವುದು ಸಹಜ. ಸರಳ ಸಜ್ಜನ ರಾಜಕಾರಣಿ ಆಗಿರುವ ಅಭ್ಯರ್ಥಿ ಚಂದ್ರಪ್ಪ ಅವರು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಜಯಶಾಲಿ ಆಗಲಿ ಎನ್ನುವುದು ಮುಖ್ಯಮಂತ್ರಿ ಸೇರಿದಂತೆ ಎಲ್ಲರ ಆಶಯವಾಗಿದೆ ಎಂದು ಬಹಳ ಮುಖ್ಯವಾದ ವಿಷಯ.
ಈ ಸಂದರ್ಭದಲ್ಲಿ ಹಾಲಿ ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಪಾವಗಡ ಶಾಸಕ ವೆಂಕಟೇಶ್, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಹೆಚ್.ಆಂಜನೇಯ ಸೇರಿದಂತೆ ಮತ್ತಿತರರು ಹಾಜರಿದ್ದರು ಎನ್ನಲಾಗಿದೆ. ಅಲ್ಲದೆ ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ, ಚಿತ್ರದುರ್ಗ ಜಿಲ್ಲಾ ಕೇಂದ್ರದ ಶಾಸಕ ವೀರೇಂದ್ರ ಪಪ್ಪಿ ಅವರು ಆಂಜನೇಯ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಊಟದ ಕೂಟಕ್ಕೆ ಗೈರು ಆಗಿದ್ದರು ಎನ್ನಲಾಗಿದೆ.