i
ಭೂ ಅಗೆತ ಕೆಲಸಗಳಿಗೆ ಬೆಸ್ಕಾಂ ಅನುಮತಿ ಅಗತ್ಯ…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಬೆಸ್ಕಾಂ ಗ್ರಾಮೀಣ ಉಪವಿಭಾಗ-೧ರ ವ್ಯಾಪ್ತಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ೧೧ ಕೆವಿ ಭೂ ಅಗೆತ ಕೇಬಲ್ ಅನ್ನು ಚಾಲನೆಗೊಳಿಸಲಾಗಿದ್ದು, ಇನ್ನು ಮುಂದೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಫೇಸ್ ೧, ೨, ೩ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಭೂ ಅಗೆತ ಕೆಲಸಗಳನ್ನು ಕೈಗೊಳ್ಳುವವರು ಬೆಸ್ಕಾಂ ಸಂಸ್ಥೆಯಿಂದ ಕಡ್ಡಾಯವಾಗಿ ನಿರಕ್ಷೇಪಣಾ ಪತ್ರ/ಅನುಮತಿ ಪಡೆಯುವುದು ಅಗತ್ಯ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಸ್ಕಾಂ ಕಛೇರಿಗೆ ಮಾಹಿತಿ ನೀಡದೆ ಭೂ ಅಗೆತ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಬೆಸ್ಕಾಂ ಕಂಪನಿ ಅಥವಾ ಸಾರ್ವಜನಿಕರ ಆಸ್ತಿ ಅಥವಾ ಯಾವುದೇ ರೀತಿಯ ಪ್ರಾಣ ಹಾನಿ/ ತೊಂದರೆ /ನಷ್ಟ ಉಂಟಾದಲ್ಲಿ ಕೆಲಸ ನಿರ್ವಹಿಸಿದವರೇ ನೇರ ಜವಾಬ್ದಾರಿ ಆಗಿರುತ್ತಾರೆ ಹಾಗೂ ನಷ್ಟವನ್ನು ಅವರೇ ಭರಿಸಬೇಕಾಗಿರುತ್ತದೆ.
ಕೆಲಸ ನಿರ್ವಹಿಸುವ ಸಮಯದಲ್ಲಿ ೧೧ ಕೆವಿ ಭೂ ಅಗೆತ ಕೇಬಲ್ ಹಾನಿಗೊಳಗಾಗಿ ವಿದ್ಯುತ್ ಅಡಚಣೆಯಾಗಿ ಅದರಿಂದ ಉಂಟಾಗುವ ಆರ್ಥಿಕ ನಷ್ಟ (ಎನರ್ಜಿ ಚಾರ್ಜಸ್)ವನ್ನೂ ಸಹ ಕೆಲಸ ನಿರ್ವಹಿಸಿದವರೇ ಭರಿಸಬೇಕಾಗುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.