i
ಕೋಟಿಗಾನಹಳ್ಳಿ ರಾಮಯ್ಯ ಹಲ್ಲೆ-ಆರೋಪಿಗಳ ಬಂಧನಕ್ಕೆ ಸಿಪಿಐಎಂ ಆಗ್ರಹ…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇವಸ್ಥಾನದಲ್ಲಿ ಹಾಕಿದ್ದ ಧ್ವನಿವರ್ಧಕದ ಶಬ್ಧ ಕಡಿಮೆ ಮಾಡುವಂತೆ ಹೇಳಿದ್ದಕ್ಕೆ ಹಿರಿಯ ಸಾಹಿತಿ, ದಲಿತ ಚಳವಳಿ ಮುಖಂಡ ಕೋಟಿಗಾನಹಳ್ಳಿ ರಾಮಯ್ಯ ಮತ್ತು ಅವರ ಪುತ್ರನ ಮೇಲೆ ಕೆಲವರು ಹಲ್ಲೆ ನಡೆಸಿರುವುದನ್ನು ಸಿಪಿಐಎಂ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರತೇಜಸ್ವಿ ಹೇಳಿದರು.
ಕೋಟಿಗಾನಹಳ್ಳಿ ರಾಮಯ್ಯ ಅವರ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಈ ಜಗತ್ತು ನ್ಯೂಸ್ ನೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ರಾಮಯ್ಯ ಅವರ ಮೇಲೆ ಪಾಪರಾಜನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ, ಬೈರಪ್ಪ, ತೇರಹಳ್ಳಿಯ ಮುನಿಯಪ್ಪ ಮುಂತಾದವರು ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ, ಕೋಲಾರದ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿಯ ಮುನೇಶ್ವರ ದೇವಾಲಯದಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಧ್ವನಿವರ್ಧಕ ಬಳಸುವ ಮೂಲಕ ಹೆಚ್ಚು ಶಬ್ಧ ಮಾಡುತ್ತಿದ್ದರು ಎಂಬ ಆರೋಪವಿದೆ ಭಿನ್ನಾಭಿಪ್ರಾಯಗಳಿದ್ದರೆ ಮಾತಿನ ಮೂಲಕ ಬಗೆ ಹರಿಸಿಕೊಳ್ಳಬೇಕು ಗ್ರಾಮ ಪಂಚಾಯತಿ ಸದಸ್ಯರಾಗಿ ಈ ರೀತಿಯ ಅನಾಗರೀಕ ವರ್ತನೆ ಮೂಲಕ ಕಾನೂನು ಕೈಗೆತ್ತಿಕೊಳ್ಳುವುದು ಅಪರಾಧ ಹಾಗಾಗಿ ಈ ಕೂಡಲೇ ರಾಮಯ್ಯ ಅವರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಚಂದ್ರತೇಜಸ್ವಿ ಒತ್ತಾಯಿಸಿದರು.
ಈ ವೇಳೆ ಪಕ್ಷದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾಧ್ಯ, ಕಾರ್ಮಿಕ ಮುಖಂಡರಾದ ರೇಣುಕಾರಾಧ್ಯ, ಪಿ.ಎ.ವೆಂಕಟೇಶ್, ಚೌಡಪ್ಪ ಉಪಸ್ಥಿತರಿದ್ದರು.