i
ಜಿಲ್ಲಾ ಸಚಿವರ ಸಮ್ಮುಖದಲ್ಲೇ ಕಾಂಗ್ರೆಸ್ ಒಳಜಗಳ ಸ್ಫೋಟ!
ಚಂದ್ರವಳ್ಳಿ ನ್ಯೂ, ಶಿವಮೊಗ್ಗ:
ಲೋಕಸಭಾಚುನಾವಣೆ ನಿರ್ವಹಣಾ ಸಮಿತಿ ರಚನೆ ಸಂಬಂಧ ಕರೆಯಲಾಗಿದ್ದ ಕಾಂಗ್ರೆಸ್ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರ ಸಮ್ಮುಖದಲ್ಲೆ ಮುಖಂಡರುಗಳು ಪರಸ್ಪರ ಕಿತ್ತಾಡಿಕೊಳ್ಳುವ ಮೂಲಕ ಕಾಂಗ್ರಸ್ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಿರ್ವಹಣೆಯ ಜವಾಬ್ದಾರಿ ಹಂಚಿಕೆ ಸಂಬಂಧ ಏ.11 ರಂದು ನಗರದ ಖಾಸಗಿ ಹೊಟೇಲ್ವೊಂದರಲ್ಲಿ ಸಭೆ ಕರೆದಿದ್ದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಿರ್ವಹಣೆ ಸಮಿತಿಗೆ ಮಾಜಿ ಮೇಯರ್ ಎಸ್. ಕೆ ಮರಿಯಪ್ಪ ಅವರನ್ನು ನೇಮಿಸುವ ಬಗ್ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಹೆಚ್.ಸಿ ಯೋಗೀಶ್ ಆಕ್ಷೇಪ ಎತ್ತಿದ್ದು ಕಿತ್ತಾಟಕ್ಕೆ ನಾಂದಿಯಾಯಿತೆನ್ನಲಾಗಿದೆ.
ಚುನಾವಣಾ ನಿರ್ವಹಣಾಸಮಿತಿಯನ್ನು ಮಾಜಿ ಮೇಯರ್ ಎಸ್. ಕೆ. ಮರಿಯಪ್ಪ ಅವರ ನೇತೃತ್ವದಲ್ಲಿ ರಚಿಸಬೇಕೆಂಬ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್ ಅವರ ಪ್ರಸ್ತಾವನೆಗೆ ಯೋಗೀಶ್ ಆಕ್ಷೇಪವೆತ್ತಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾದ ತಮ್ಮ ಪರವಾಗಿ ಕೆಲಸ ಮಾಡುವ ಜವಬ್ದಾರಿಯನ್ನು ಮರಿಯಪ್ಪ ಅವರಿಗೆ ಕೊಟ್ಟಿದ್ದೆ. ಆದರೆ ಲೆಕ್ಕಪತ್ರ ಪುಸ್ತಕ ಎಸೆದು ಓಡಿಹೋಗಿದ್ದರು. ಇಂತಹವರಿಗೆ ಯಾಕೆ ಜವಾಬ್ದಾರಿ ಕೊಡಬೇಕು? ಎಂದು ಪ್ರಶ್ನಿಸಿದ್ದಾರೆ. ಜಿಲ್ಲಾ ಸಚಿವರ ಮುಂದೆಯೇ ಮರಿಯಪ್ಪ ಮತ್ತು ಆರ್. ಪ್ರಸನ್ನಕುಮಾರ್ ಅವರ ವಿರುದ್ದ ಯೋಗೀಶ್ ತಿರುಗಿಬಿದ್ದಿದ್ದು, ಸಭೆಯಲ್ಲಿ ಇವರುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತೆನ್ನಲಾಗಿದೆ.
ಇದೇ ಸಂದರ್ಭದಲ್ಲಿ ಜೆಡಿಎಸ್ನ ಬೆಂಬಲದೊಂದಿಗೆ ತಾವು ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಆದ ಸಂದರ್ಭವನ್ನು ಪ್ರಸ್ತಾಪಿಸಿ ಎಸ್. ಕೆ ಮರಿಯಪ್ಪ ಆಡಿದ ಮಾತಿನಿಂದ ಕೆರಳಿದ ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರಾದ ಎಂ.ಶ್ರೀಕಾಂತ್ ಅವರು ಮರಿಯಪ್ಪ ವಿರುದ್ದ ವಾಗ್ದಾಳಿ ನಡೆಸಿದ್ದು, ತೀವ್ರತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರುಗಳ ಈ ಕಿತ್ತಾಟಕ್ಕೆ ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್.ರಮೇಶ್, ಸೂಡಾ ಆಧ್ಯಕ್ಷ ಹೆಚ್.ಎಸ್ ಸುಂದರೇಶ್, ಮಾಜಿ ಉಪಮೇಯರ್ ನಾಗರಾಜಕಂಕಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶಿವಕುಮಾರ್, ಕಲೀಂ ವುಲ್ಲಾ ಮೂಕಪ್ರೇಕ್ಷಕರಾಗಿದ್ದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಮನಗಂಡ ಸಚಿವ ಮಧುಬಂಗಾರಪ್ಪ ಮಧ್ಯಪ್ರವೇಶಿಸಿ ಮರಿಯಪ್ಪ ಅವರು ಆಡಿದ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಇಷ್ಟೊಂದು ವೈಮನಸ್ಸುಗಳಿರುವಾಗ ನನ್ನ ಅಕ್ಕನನ್ನು ಗೆಲ್ಲಿಸಿಕೊಳ್ಳುವುದು ಹೇಗೆ ಎಂದು ಕಳವಳ ವ್ಯಕ್ತಪಡಿಸಿದರೆನ್ನಲಾಗಿದೆ.
ಅಂತಿಮವಾಗಿ ಪರಿಸ್ತಿತಿಯನ್ನು ತಿಳಿಗೊಳಿಸಿದ ಸಚಿವರು ಶಿವಮೊಗ್ಗ ನಗರ ವಿಧಾನಸಭಾಕ್ಷೇತ್ರದಲ್ಲಿ ಚುನಾವಣೆ ಜವಾಬ್ದಾರಿಯನ್ನು ಎಂ.ಶ್ರೀಕಾಂತ್ , ಹೆಚ್. ಸಿ ಯೋಗೀಶ್, ಬ್ಲಾಕ್ ಅಧ್ಯಕ್ಷರುಗಳಾದ ಶಿವಕುಮಾರ, ಕಲೀಂವುಲ್ಲಾ ಅವರನ್ನೊಳಗೊಂಡ ಸಮಿತಿಗೆ ವಹಿಸುವ ತೀರ್ಮಾನಕ್ಕೆ ಬಂದಿದ್ದಾರೆ.