i
ಹಿರಿಯೂರು ತಾಲೂಕಿನಲ್ಲಿ ಕಮ್ಯುನಿಸ್ಟ್ ಪಕ್ಷದಿಂದ ಬಿರುಸಿನ ಮತಯಾಚನೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ಗ್ರಾಮೀಣ ಜಾಥಾ ಕಾರ್ಯಕ್ರಮವನ್ನು ಹಿರಿಯೂರು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ನಡೆಸಲಾಯಿತು.
ಗ್ರಾಮಗಳಲ್ಲಿ ನಡೆದ ಸಭೆಗಳನ್ನು ಉದ್ದೇಶಿಸಿ ಅಭ್ಯರ್ಥಿ ಡಿ. ಸುಜಾತ ಮತ್ತು ಎಸ್.ಯು.ಸಿ.ಐ.(ಸಿ) ಪಕ್ಷದ ರಾಜ್ಯ ಮುಖಂಡರಾದ ಡಾ. ಜಿ.ಎಸ್. ಕುಮಾರ್, ರವಿ ಕುಮಾರ್, ಜಯಣ್ಣ ಮತ್ತಿತರರು ಮಾತನಾಡಿದರು. ರಂಗಾಪುರದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಮುಖಂಡ ಡಾ. ಜಿ.ಎಸ್. ಕುಮಾರ್, “ಕೇಂದ್ರದಲ್ಲಿ ಕಳೆದ ೭೫ ವರ್ಷಗಳಿಂದ ನಮ್ಮನ್ನಾಳಿದ ಸರ್ಕಾರಗಳು ಬಂಡವಾಳಶಾಹಿ ಪರ ನೀತಿಗಳನ್ನೇ ಜಾರಿಗೊಳಿಸಿವೆ. ಈ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಂತೆ ವರ್ತಿಸಿವೆ. ಬಂಡವಾಳಶಾಹಿ ನೀತಿಗಳ ವಿರುದ್ಧ ಜನಪರ ಹೋರಾಟದ ಧ್ವನಿಯಯನ್ನು ಸದನದಲ್ಲಿ ಮೊಳಗಿಸಲು ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷವು ಏಕಾಂಗಿಯಾಗಿ ಚುನಾವಣಾ ಕಣದಲ್ಲಿದೆ. ಈ ಚುನಾವಣೆಯನ್ನೂ ಸಹ ಶೋಷಕರು ಮತ್ತು ಶೋಷಿತರ ನಡುವಿನ ಹೋರಾಟದ ಒಂದು ಭಾಗವೆಂದು ಪರಿಗಣಿಸಿರುವ ನಮ್ಮ ಪಕ್ಷವು, ರಾಜ್ಯದಲ್ಲಿ ೧೯ ಕ್ಷೇತ್ರಗಳಲ್ಲಿ ಮತ್ತು ದೇಶದಾದ್ಯಂತ ೧೫೧ ಕ್ಷೇತ್ರಗಳಲ್ಲಿ ತನ್ನ ಉಮೇದುವಾರರನ್ನು ಕಣಕ್ಕಿಳಿಸಿದೆ. ಈ ಹೋರಾಟ ಪರ ಪಕ್ಷವನ್ನು ಜನತೆ ಬೆಂಬಲಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿ ಡಿ. ಸುಜಾತ ಅವರ ಪ್ರೆಷರ್ ಕುಕ್ಕರ್ ಗುರುತಿಗೆ ಮತ ನೀಡಿ ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.ಮಾಳಗೊಂಡನಹಳ್ಳಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಜಯಣ್ಣ ಅವರು ಮಾತನಾಡಿ “ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮನ್ನಾಳಿದ ಪಕ್ಷಗಳು ಜನಪ್ರಿಯ ಘೋಷಣೆಗಳೊಂದಿಗೆ ಜನರನ್ನು ಮರಳು ಮಾಡುತ್ತಲೇ ಬಂದಿವೆ. ಪ್ರಾರಂಭದಲ್ಲಿ ಗರೀಬಿ ಹಠಾವೋ ಎಂದರು. ನಂತರ ಭಾರತ ಪ್ರಕಾಶಿಸುತ್ತಿದೆ ಎಂದರು. ಕಳೆದ ಹತ್ತು ವರ್ಷದಿಂದ ಅಚ್ಛೇ ದಿನ್ ಎನ್ನುತ್ತಿದ್ದಾರೆ. ಆದರೆ ಯಾವುದೂ ನಿಜವಾಗಲಿಲ್ಲ. ಕೇವಲ ಜನಪ್ರಿಯ ಘೋಷಣೆಗಳನ್ನು ಬಿಟ್ಟರೆ ಜನಪರವಾದ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಜನಸಾಮಾನ್ಯರ ಜೀವನ ಮಟ್ಟ ಸುಧಾರಣೆ ಆಗಿಲ್ಲ. ಬಡತನ, ನಿರುದ್ಯೋಗ, ನಿರ್ಗತಿಕತೆ, ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಶಿಕ್ಷಣ ಮತ್ತು ಆರೋಗ್ಯದ ವ್ಯಾಪಾರೀಕರಣ ನಡೆಯುತ್ತಲೇ ಇವೆ. ನಾವು ಜನತೆ ಒಂದಾಗಿ ಜನಪರ ಹೋರಾಟವನ್ನು ಬಲಪಡಿಸದೆ ಹೋದರೆ ಇನ್ನು ಎಷ್ಟು ವರ್ಷಗಳು ಕಳೆದರೂ ನಮ್ಮ ಪರಿಸ್ಥಿತಿ ಸುಧಾರಿಸುವುದಿಲ್ಲ. ಆದ್ದರಿಂದ ಜನತೆ ಹೋರಾಟ ಪರ ರಾಜಕೀಯವನ್ನು ಬಲಪಡಿಸಬೇಕು” ಎಂದರು.ದಿಂಡಾವರ ಗ್ರಾಮದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಮುಖಂಡ ರವಿಕುಮಾರ್, “ಇಂದು ನಮ್ಮ ಪಕ್ಷವು ಹಣ, ಹೆಂಡ, ದೌಲತ್ತಿನ ರಾಜಕೀಯದ ಬದಲಿಗೆ ಜನಪರ ಹೋರಾಟದ ರಾಜಕೀಯವನ್ನು ಜನತೆಗೆ ಪರಿಚಯಿಸುತ್ತಿದೆ. ಜನರ ಮೂಲಭೂತ ಸಮಸ್ಯೆಗಳು ಬಗೆಹರಿಯಲು ಜನಗಳ ಐಕ್ಯ ಹೋರಾಟದಿಂದ ಮಾತ್ರ ಸಾಧ್ಯ. ಇಲ್ಲವಾದಲ್ಲಿ ನಮ್ಮನ್ನು ಆಳುತ್ತಿರುವ ಜನಪ್ರತಿನಿಧಿಗಳು ಕೇವಲ ತಮ್ಮ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಪರಿತಪಿಸುತ್ತಾರೆಯೇ ಹೊರತು, ಜನರ ನೈಜ ಸಮಸ್ಯೆಗಳ ಬಗ್ಗೆ, ಜನಪರವಾಗಿ ಆಗಬೇಕೆರುವ ಯೋಜನೆಗಳ ಬಗ್ಗೆ, ಜನ ಪರವಾದಂತಹ ಕಾನೂನುಗಳನ್ನು ರೂಪಿಸುವ ಬಗ್ಗೆ ಅವರು ಚಿಂತಿಸುವುದಿಲ್ಲ. ದೇಶದ ದೊಡ್ಡ ದೊಡ್ಡ ಬಂಡವಾಳಿಗರಿಂದ ದೇಣಿಗೆ ಪಡೆದು ಚುನಾವಣೆಯಲ್ಲಿ ಗೆದ್ದು ಬರುವ ಇವರು ತಮ್ಮ ರಾಜಕೀಯ ಭವಿ?ಕ್ಕೆ ನೆರವು ನೀಡಿದ ಬಂಡವಾಳಿಗರಿಗೆ ಸೇವೆ ಸಲ್ಲಿಸುತ್ತಾರೆ. ಇತ್ತೀಚಿಗೆ ಸುದ್ದಿಯಾಗುತ್ತಿರುವ ಚುನಾವಣಾ ಬಾಂಡ್ ಹಗರಣ ಇದಕ್ಕೆ ಸ್ಪಷ್ಟ ಉದಾರಣೆಯಾಗಿದೆ. ಆದ್ದರಿಂದ ಜನಪರ ಹೋರಾಟದ ರಾಜಕೀಯ ನಡೆಸುತ್ತಿರುವ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಸುಜಾತ ಅವರನ್ನು ಗೆಲ್ಲಿಸಬೇಕು” ಎಂದು ಗ್ರಾಮಸ್ಥರಲ್ಲಿ ವಿನಂತಿಸಿದರು.ಪಕ್ಷದ ಅಭ್ಯರ್ಥಿ ಕಾಮ್ರೇಡ್ ಡಿ. ಸುಜಾತ ಅವರು ಮಾತನಾಡಿ, “ಇದುವರೆಗಿನ ಎಲ್ಲಾ ಸರ್ಕಾರಗಳು ನಮ್ಮ ಬಹುಕಾಲದ ಬೇಡಿಕೆಗಳಾದ ಭದ್ರಾ ಮೇಲ್ದಂಡೆ ಯೋಜನೆ, ದಾವಣಗೆರೆ ತುಮಕೂರು ನೇರ ರೈಲ್ವೆ ಯೋಜನೆಯಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕಡೆಗಣಿಸಿವೆ. ಬೆಲೆ ಏರಿಕೆ, ಬಡತನ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯಗಳ ವ್ಯಾಪಾರಿಕರಣದಿಂದ ಜನತೆ ತತ್ತರಿಸಿದ್ದಾರೆ ಈ ಎಲ್ಲ ಮೂಲಭೂತ ಸಮಸ್ಯೆಗಳ ವಿರುದ್ಧ ಸಂಸತ್ತಿನಲ್ಲಿ ಹೋರಾಟದ ಧ್ವನಿ ಎತ್ತಲು ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸಿ” ಎಂದರು.ಮುಂದೆ ಮಾದೇನಹಳ್ಳಿ, ಹಿಂಡಸಕಟ್ಟೆ, ಯಲ್ಲದಕೆರೆ ದುಗ್ಗಾಣಿಹಟ್ಟಿ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಜಾಥಾ ಮುಂದುವರೆಯಿತು. ಜನಗಳ ಸ್ಪಂದನೆ ಉತ್ತಮವಾಗಿತ್ತು.