i
ಕಾಂಗ್ರೆಸ್ ಸರ್ಕಾರ 1.55 ದಶ ಲಕ್ಷ ಕೋಟಿ ಸಾಲ ಮಾಡಿದ್ದರೂ, ಅಭಿವೃದ್ಧಿ ಶೂನ್ಯವಾಗಿದೆ-ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ದೊಡ್ಡಪ್ರಮಾಣ ಸಾಲಹೊತ್ತ ಸರ್ಕಾರವನ್ನು ನಾನು ಎಂದೂ ನೋಡಿಲ್ಲ. ಅಧಿಕಾರಕ್ಕೆ ಬಂದು ಕೇವಲ ಹನ್ನೊಂದು ತಿಂಗಳ ಅವಧಿಯಲ್ಲೇ ೧.೫೫ ದಶ ಲಕ್ಷ ಕೋಟಿ ಸಾಲವನ್ನು ರಾಜ್ಯ ಸರ್ಕಾರ ಮಾಡಿದೆ. ರಾಜ್ಯದ ಯಾವುದೇ ಭಾಗದಲ್ಲೂ ಅಭಿವೃದ್ದಿ ಇಲ್ಲ. ರೈತರು, ಕಾರ್ಮಿಕರು. ಎಸ್ಟಿ, ಎಸ್ಸಿ, ಹಿಂದುಳಿದ ವರ್ಗ, ಎಲ್ಲಾ ವರ್ಗದ ಜನರು ಸರ್ಕಾರದ ಆಡಳಿತದಿಂದ ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರ ಶಕ್ತಿ ಬಲಪಡಿಸಲು ಬಿಜೆಪಿ-ಜೆಡಿಎಸ್ ಮೈತ್ರಿ ಅಸ್ಥಿತ್ವಕ್ಕೆ ಬಂದಿದ್ದು, ನಿರೀಕ್ಷೆಗೂ ಮೀರಿ ಯಶಸ್ಸನ್ನು ಈ ರಾಜ್ಯದ ಮತದಾರರು ನೀಡಲಿದ್ದಾರೆಂದು ರಾಜ್ಯದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಅವರು, ಶುಕ್ರವಾರ ಪರಶುರಾಮಪುರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರ ಮಹಿಳೆಯರಿಗೆ ನೀಡಿದ ಗ್ಯಾರಂಟಿಗಳ ಬಗ್ಗೆ ಬಾರಿ ಪ್ರಚಾರ ನಡೆಸುತ್ತಾರೆ. ಆದರೆ, ಇವುಗಳಿಂದ ರಾಜ್ಯದ ಅಭಿವೃದ್ದಿ ಶೂನ್ಯವಾಗಿದೆ. ಗ್ಯಾರಂಟಿ ಜಾರಿಯಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾಣಲು ಸಾಧ್ಯವಾಗಿಲ್ಲ. ಗೃಹಲಕ್ಷ್ಮಿ ಯೋಜನೆಯಲ್ಲಿ ತಿಂಗಳಿಗೆ ಎರಡು ಸಾವಿರಕೊಟ್ಟು, ಆ ಹಣವನ್ನು ಬೇರೆ ರೂಪದಲ್ಲಿ ಜನರಿಂದ ಕಸಿಯಲಾಗುತ್ತಿದೆ. ಕೆಎಸ್ಆರ್ಟಿಸಿ, ಬೆಸ್ಕಾಂಗೆ ಸಾವಿರಾರು ಕೋಟಿ ಸಾಲ ನೀಡಬೇಕಿದೆ. ಉಚಿತ ಯೋಜನೆಯಿಂದ ಕೆಎಸ್ಆರ್ಟಿಸಿ, ಬೆಸ್ಕಾಂ ಎರಡೂ ನಷ್ಟದಲ್ಲಿ ನಡೆಯುತ್ತಿವೆ. ಸರ್ಕಾರಿ ನೌಕರರಿಗೆ ಸಂಬಳಕೊಡುವ ಸ್ಥಿತಿಯಲ್ಲೂ ಸರ್ಕಾರವಿಲ್ಲ ಎಂದರು. ಈ ಹಿಂದೆ ನಾನು ರಾಜ್ಯದ ಮುಖ್ಯಮಂತ್ರಿಯಾದಾಗ ರೈತ ಸಾಲಮನ್ನಾ ಮಾಡಿದ್ದೆ, ರೈತ ಜಮೀನಿಗೆ ಪಂಪ್ಸೆಟ್ ಸೌಲಭ್ಯ ಪಡೆಯಲು ಕೇವಲ ೫ ಸಾವಿರ ಪಾವತಿಸಬೇಕಿದ್ದು, ಪ್ರಸ್ತುತ ಸರ್ಕಾರ ಅದನ್ನು ೨.೫೦ ಲಕ್ಷಕ್ಕೆ ಏರಿಸಿದೆ. ವಿಶೇಷವಾಗಿ ರೈತರಿಗೆ ಅನುಕೂಲವಿರುವ ಟ್ರಾನ್ಸ್ಫಾರ್ಟ್ಗಳು ಎಲ್ಲೂ ಸಹ ರೈತರಿಗೆ ಲಭ್ಯವಿಲ್ಲ. ರೈತರ ಬದುಕನ್ನು ದುಸ್ಥರಗೊಳಿಸಿದ್ದೇ ಈ ಸರ್ಕಾರದ ಸಾಧನೆ. ಚಿತ್ರದುರ್ಗ ಜಿಲ್ಲೆಗೆ ಕೇಂದ್ರ ಸರ್ಕಾರ ಫಸಲ್ಭೀಮಾ ಯೋಜನೆ ಮೂಲಕ ರೈತರಿಗೆ ೨೮೪ ಕೋಟಿ ಪರಿಹಾರ ನೀಡಿದೆ. ಅದೇ ರೀತಿ ಕಿಸಾನ್ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ನೆರವಾಗಿದೆ. ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಗೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಲು ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ವ್ಯಾಪ್ತಿಗೆ ಸೇರ್ಪಡೆ ಮಾಡಿ ಅವಶ್ಯವಿರುವ ಹಣವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ರಾಜ್ಯದ ಮತದಾರ ಈಗಾಗಲೇ ಮೈತ್ರಿಕೂಟವನ್ನು ಬೆಂಬಲಿಸಲು ತೀರ್ಮಾನ ತೆಗೆದುಕೊಂಡಿದ್ಧಾನೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲೂ ಸಹ ಸಾಕಷ್ಟು ಅನುಭವಿ ಹಿರಿಯ ರಾಜಕಾರಣಿ, ದಲಿತ ಸಮೂಹದ ಮಹಾನ್ ನಾಯಕ ಗೋವಿಂದ ಕಾರಜೋಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರ ಗೆಲುವಿಗೆ ನೀವೆಲ್ಲರೂ ಸಹಕರಿಸಬೇಕು ಎಂದರು. ಅಭ್ಯರ್ಥಿ ಗೋವಿಂದಕಾರಜೋಳ ಮಾತನಾಡಿ, ರಾಜ್ಯದ ಮಾಜಿ ಮುಖ್ಯಮಂತ್ರಿ, ಸ್ನೇಹಜೀವಿ, ನೇರ ನಡೆ, ನುಡಿ ಉಳ್ಳವರಾದ ಎಚ್.ಡಿ.ಕುಮಾರಸ್ವಾಮಿ, ಚುನಾವಣಾ ಪ್ರಚಾರಕ್ಕೆ ಆಗಮಿಸಿ ಕಾರ್ಯಕರ್ತರಿಗೆ ಮುಖಂಡರಿಗೆ ಮಾರ್ಗದರ್ಶನ ಮಾಡಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ಹಿಂದುಳಿದ ಕ್ಷೇತ್ರವಾಗಿದ್ದು, ಇದರ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಭಗವಂತನ ಕೃಪೆ, ಹಿರಿಯರ ಆಶೀರ್ವಾದಿಂದ ಕ್ಷೇತ್ರದಲ್ಲಿ ಎಲ್ಲಿಗೆ ಹೋದರೂ ನನಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ನವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ನನಗೆ ಈ ಕ್ಷೇತ್ರದ ಮತದಾರರ ಮೇಲೆ ಅಚಲವಾದ ನಂಬಿಕೆ ಇದೆ. ಮತದಾರರು ಮೋದಿ ಆಡಳಿತಕ್ಕೆ ಜೈಕಾರ ಹಾಕುವರು. ನಿಮ್ಮೆಲ್ಲರ ವಿಶ್ವಾಸದಿಂದ ನನ್ನ ಗೆಲುವು ಸಾಧ್ಯವೆಂದರು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಬಿಜೆಪಿ ಅದ್ಯಕ್ಷ ಎ.ಮುರುಳಿ, ಜಿಲ್ಲಾ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ವೆಂಕಟೇಶ್ಯಾದವ್, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಯುವ ಮುಖಂಡ ಎಂ.ರವೀಶ್, ಕೆ.ಟಿ.ಕುಮಾರಸ್ವಾಮಿ, ಅನಿಲ್ಕುಮಾರ್, ಎಚ್.ಆನಂದಪ್ಪ, ಚನ್ನಿಗರಾಯ, ಸೋಮಶೇಖಮಂಡಿಮಠ, ಬಿ.ಎಸ್.ಶಿವಪುತ್ರಪ್ಪ, ಮಂಡಲಾಧ್ಯಕ್ಷ ಸೂರನಹಳ್ಳಿಶ್ರೀನಿವಾಸ್, ಜಯಪಾಲಯ್ಯ, ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.