i
ಕಾಡುಗೊಲ್ಲರ ಮಕ್ಕಳ ಹಿತದೃಷ್ಠಿಯಿಂದ ಬಿಜೆಪಿಗೆ ಬೆಂಬಲ-ಮೀಸೆ ಮಹಲಿಂಗಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿರುವ ಕಾಡುಗೊಲ್ಲರೆಲ್ಲಾ ಬಿಜೆಪಿ.ಗೆ ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದೇವೆಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಗೌರವಾಧ್ಯಕ್ಷ ಸಿ.ಮಹಲಿಂಗಪ್ಪ ಹೇಳಿದರು.ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅನೇಕ ವರ್ಷಗಳಿಂದಲೂ ಕಾಡುಗೊಲ್ಲರು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಜಾತಿ ಪಟ್ಟಿಯಲ್ಲಿ ಸೇರಿಸಲು ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಕಾಲ ತೆಗೆದುಕೊಂಡಿತು. ತದ ನಂತರ ಜಾತಿ ಸರ್ಟಿಫಿಕೇಟ್ ನೀಡಲು ವಿಳಂಬ ಮಾಡಿದ್ದರಿಂದ ನಮ್ಮ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಕೇಂದ್ರದಲ್ಲಿ ಬಿಜೆಪಿ ನಾಲ್ಕು ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿರುವುದರಿಂದ ಈ ಚುನಾವಣೆಯಲ್ಲಿ ಕಾಡುಗೊಲ್ಲರು ಬೆಂಬಲಿಸಲಿದ್ದೇವೆಂದು ತಿಳಿಸಿದರು.ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಕಷ್ಟು ಪ್ರಯತ್ನ ಪಟ್ಟಿತು. ತಾಂತ್ರಿಕ ಕಾರಣಗಳಿಂದ ಎಸ್ಟಿ ಪ್ರಸ್ತಾವನೆ ನಾಲ್ಕು ಸಲ ಕೇಂದ್ರದಿಂದ ವಾಪಸ್ ಬಂದು ಮತ್ತೆ ಹೋಗಿದೆ. ೨೦೧೩-೨೪ ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಎ.ವಿ.ಉಮಾಪತಿ ಹಾಗೂ ಕೃಷ್ಣಪ್ಪನವರಿಗೆ ಟಿಕೆಟ್ ನೀಡದೆ ವಂಚಿಸಿತು. ೨೦೧೮ ರಲ್ಲಿ ತುಮಕೂರು ಗ್ರಾಮಾಂತರದಿಂದ ಕಾಡುಗೊಲ್ಲರಿಗೆ ಟಿಕೆಟ್ ನೀಡಿ ಕಣ್ಣೊರೆಸುವ ತಂತ್ರ ಮಾಡಿತು. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಕ್ಕೊರಲಿನಿಂದ ಬಿಜೆಪಿ.ಗೆ ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದ್ದೇವೆಂದರು.ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ಮಾತನಾಡಿ ಕಾಡುಗೊಲ್ಲ ಬೇಡ ಬರೀ ಗೊಲ್ಲ ಎಂದು ಎಸ್ಟಿಗೆ ಶಿಫಾರಸ್ಸು ಮಾಡಬೇಕೆಂದು ನಮ್ಮವರೇ ಅಡ್ಡಿ ಮಾಡಿದರು. ಕಾಡುಗೊಲ್ಲರು ಶ್ರೀಕೃಷ್ಣನ ಆರಾಧನೆ ಮಾಡುತ್ತಿದ್ದಾರೆ, ಇವರು ಕಾಡುಗೊಲ್ಲರಲ್ಲ, ಬೇರೆ ಜಾತಿಯವರು ಎಂದು ಟಿಪ್ಪಣಿಯೊಂದಿಗೆ ಮತ್ತಿತರ ತಾಂತ್ರಿಕ ತೊಡಕುಗಳನ್ನು ಬರೆದು ಅಧಿಕಾರಿಗಳು ಪ್ರಸ್ತಾವನೆ ವಾಪಸ್ ಹಾಕಿದರು. ಈಗ ಎಲ್ಲವೂ ಸರಿ ಹೋಗಿದೆ. ಅತಿ ಮುಖ್ಯವಾಗಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಕಾಡುಗೊಲ್ಲರಿಗೆ ಎಸ್ಟಿ ಮೀಸಲು ಸೌಲಭ್ಯ ಕೊಡಿಸುವ ಭರವಸೆ ನೀಡಿದ್ದಾರೆ. ಹಾಗಾಗಿ ನಾವೆಲ್ಲ ಪಕ್ಷಾತೀತವಾಗಿ ಇಡೀ ರಾಜ್ಯದಲ್ಲಿರುವ ಎನ್ ಡಿಎ ಮೈತ್ರಿ ಕೂಟದ ಜೆಡಿಎಸ್ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದೇವೆಂದು ಹೇಳಿದರು.
ಸಮಾಜ ಮುಖಂಡ, ಉಮೇಶ್ ಮಾತನಾಡಿ, ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಸೌಲಭ್ಯ ಕೊಡಿಸಬೇಕೆಂದು ಎಲ್ಲ ರೀತಿಯ ತೊಡಕುಗಳನ್ನು ನಿವಾರಣೆ ಮಾಡಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಸಂಸತ್ ನಲ್ಲಿ ಕಾಡುಗೊಲ್ಲರ ಜೀವನ ಶೈಲಿ ಕುರಿತು ಸಾಕಷ್ಟು ಚರ್ಚೆ ಮಾಡಿದ್ದಲ್ಲದೆ ಪ್ರಧಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್ ಶಾ ರೊಂದಿಗೆ ಮಾತನಾಡಿ ಎಸ್ಟಿ ಮೀಸಲು ಕೊಡಿಸುವ ಪ್ರಯತ್ನ ಮುಂದುವರೆದಿರುವ ಸನ್ನಿವೇಶದಲ್ಲಿ ಇಡೀ ಕಾಡುಗೊಲ್ಲ ಸಮಾಜ ನೂರಕ್ಕೆ ನೂರಷ್ಟು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ, ತುಮಕೂರು ಅಭ್ಯರ್ಥಿ ವಿ.ಸೋಮಣ್ಣ ಸೇರಿದಂತೆ ರಾಜ್ಯದ ಎಲ್ಲ ಎನ್ ಡಿಎ ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಟಿ.ಅಜ್ಜಪ್ಪ ಮಾತನಾಡಿ ೨೦೧೮ ರ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣಿಮ ಶ್ರೀನಿವಾಸ್ರವರನ್ನು ನಮ್ಮವರೆಂದು ಹಿರಿಯೂರು ಕ್ಷೇತ್ರದಿಂದ ಗೆಲ್ಲಿಸಿಕೊಂಡೆವು. ಆದರೆ ಅವರೆ ನಮಗೆ ಅಡ್ಡಗಾಲಾಗಿದ್ದರಿಂದ ನಮಗೆ ತೊಂದರೆಯಾಯಿತು. ಈಗ ಎಲ್ಲರೂ ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ. ಗೆ ಮತ ನೀಡಲು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಬಹುಮತದಿಂದ ಗೆಲ್ಲಿಸಿಕೊಂಡು ಪಾರ್ಲಿಮೆಂಟ್ಗೆ ಕಳಿಸುವುದಾಗಿ ಹೇಳಿದರು.ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆನಂದ, ವೆಂಕಟೇಶ್ ಯಾದವ್, ಹೊನ್ನೂರು ಗೋವಿಂದಪ್ಪ, ಟಿ.ರಂಗಸ್ವಾಮಿ, ನ್ಯಾಯವಾದಿ ಕೃಷ್ಣಮೂರ್ತಿ, ಉಮೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.