i
ಬಾವಿ ನೀರು ಬಳಸಿದ್ದಕ್ಕೆ ಕುಟುಂಬದ ಮೇಲೆ ಐಪಿಎಸ್ ಅಧಿಕಾರಿ ಹಲ್ಲೆ, ಎಫ್ ಐಆರ್ ದಾಖಲು…
ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಕರ್ನಾಟಕದ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಇತರ ಸಂಬಂಧಿಕರೊಂದಿಗೆ ಸೇರಿ ತಮ್ಮ ಸ್ವಂತ ಊರಿನಲ್ಲಿ ಮಹಿಳೆ ಮತ್ತು ಆಕೆಯ ಪತಿಯ ಮೇಲೆ ಹಲ್ಲೆನಡೆಸಿದ ಆರೋಪದ ಮೇಲೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಗಳಿ ಗ್ರಾಮದ ನಕುಶಾ ಸೈದಪ್ಪ ಗಡಾದೆ ಎಂಬುವವರು ಐಗಳಿ ಠಾಣೆಗೆ ತಮ್ಮ ಮೇಲೆ ಕಿರುಕುಳ ಹಾಗೂ ಹಲ್ಲೆ ನಡೆದಿರುವ ಬಗ್ಗೆ ದೂರು ಸಲ್ಲಿಸಿದ್ದು ಐಪಿಸಿ 307 ಸೇರಿ ಇತರ ಕಲಂಗಳ ಅಡಿ 14ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಐಗಳಿ ಗ್ರಾಮದ ಸಾರ್ವಜನಿಕ ಕುಡಿಯುವ ಬಾವಿ ನೀರನ್ನು, ಸ್ಥಳೀಯ ಗ್ರಾ.ಪಂ. ಅನುಮತಿ ಮೇರೆಗೆ ಹೊಸ ಮನೆ ಕಟ್ಟುವ ಕೆಲಸಕ್ಕೆ ಬಳಕೆ ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಕ್ಯಾತೆ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಒಟ್ಟು 14 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಐಪಿಎಸ್ ಅಧಿಕಾರಿ ರವೀಂದ್ರ ಗಡಾಡಿ ಆರೋಪಿ ನಂಬರ್ ಒನ್ ಆರೋಪಿಯಾಗಿದ್ದಾರೆ. ಕ್ಷುಲ್ಲಕ ಕಾರಣಕ್ಕಾಗಿ ಈ ಆರೋಪಿಗಳು ದಂಪತಿ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.