i
ಸಮುದಾಯ ಎನ್ನುವ ಶಬ್ದವೇ ಕಳೆದುಹೋಗಿದೆ: ಪಾಂಡುರಂಗ ಹೆಗಡೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಇಂದಿನ ದಿನಮಾನಗಳಲ್ಲಿ ಸಮುದಾಯ ಎನ್ನುವ ಶಬ್ದವೇ ಕಳೆದುಹೋಗಿದೆ. ಇದರ ಮೂಲ ತತ್ವ ಕಾಣೆಯಾಗಿದೆ. ಮಾರುಕಟ್ಟೆಯ ಆಕರ್ಷಣೆಯು ವ್ಯಕ್ತಿ ಕೇಂದ್ರಿತ ಜೀವನಕ್ಕೆ ನಾಂದಿಯಾಗುತ್ತದೆ ಮತ್ತು ಕೊಳ್ಳುಬಾಕ ಸಂಸ್ಕೃತಿಗೆ ನಾಂದಿಯಾಗುತ್ತದೆ ಎಂದು ಪರಿಸರ ಹೋರಾಟಗಾರ ಪಾಂಡುರಂಗ ಹೆಗಡೆ ಅಭಿಪ್ರಾಯಪಟ್ಟರು.
ನಗರದ ಶಿವಮೊಗ್ಗ ರೇಡಿಯೋ ಸಂಸ್ಥೆಯ ಎರಡನೆಯ ವಾರ್ಷಿಕೋತ್ಸವ ಮತ್ತು ವಿಶ್ವ ಭೂ ದಿನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಭಣೆಯ ಸಂಸ್ಥೆಯೊAದು ಎಫ್ ಎಂ ರೇಡಿಯೋ ಆರಂಭಿಸಿ ಯಶಸ್ವಿಯಾಗಿದ್ದು ದೇಶದಲ್ಲಿ ಇದೇ ಮೊದಲು. ಯಾವುದೇ ಹಣದ ಬೆಂಬಲವಿಲ್ಲದೆ ಭಗೀರಥ ಪ್ರಯತ್ನದಿಂದ ಸಾಧನೆ ಮಾಡಿ ಗೆದ್ದಿದೆ. ಜನರ ವಿಶ್ವಾಸ ಗಳಿಸುವ ಮೂಲಕ ಸಮುದಾದಯದ ವಿಘಟನೆಯನ್ನು ತಡೆಯಬೇಕಿದೆ ಎಂದರು.
ಪ್ರಸ್ತುತ ಭೂಮಿ ವರ್ಸಸ್ ಪ್ಲಾಸ್ಟಿಕ್ ನಡುವೆ ಯುದ್ಧವಿದೆ. ಪ್ಲಾಸ್ಟಿಕ್ ಭೂಮಿ ಕಬಳಿಸುವ ಭಸ್ಮಾಸುರನಾಗಿದ್ದಾನೆ. ೨೦೧೮ರಲ್ಲಿ ಪ್ರಧಾನಿಯವರು ೨೦೨೨ರ ವೇಳೆ ಪ್ಲಾಸ್ಟಿಕ್ ಸಂಪೂರ್ಣ ನಿಷಿದ್ಧ ಎಂದಿದ್ದರು. ಆದರೆ ಇಂದು ಪರಿಸ್ಥಿತಿ ಏನಾಗಿದೆ ಎಂದು ಪಶ್ನಿಸಿದ ಅವರು, ಆಫ್ರಿಕಾದ ಉಗಾಂಡಾ ಎನ್ನುವ ಅತಿ ಚಿಕ್ಕ ದೇಶ ೨೦೦೮ರಿಂದ ಪ್ಲಾಸ್ಟಿಕ್ನ್ನು ಸಂಪೂರ್ಣ ನಿಷೇಧಿಸಿ ಜಗತ್ತಿಗೆ ಮಾದರಿಯಾಗಿದೆ. ಅಲ್ಲಿ ಪ್ಲಾಸ್ಟಿಕ್ ಬಳಸಿದರೆ ಅಥವಾ ಮಾರಾಟ ಮಾಡಿದರೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ೫ ಸಾವಿರ ಡಾಲರ್ ದಂಡ ತೆರಬೇಕಾಗುತ್ತದೆ ಎನ್ನುವುದನ್ನು ವಿವರಿಸಿದರು.
ಬಹುರಾಷ್ಟ್ರೀಯ ಕಂಪನಿಗಳು ಅಲ್ಲಿ ನಿಷೇಧದ ಯತ್ನ ವಿಫಲಗೊಳಿಸಲು ಸಾಕಷ್ಟು ಯತ್ನ ನಡೆಸಿದವು. ಆದರೆ ಯಶಸ್ವಿಯಾಗಲಿಲ್ಲ. ಪ್ಲಾಸ್ಟಿಕ್ ನಿಷೇಧಿಸಿದರೆ ಭೂಮಿತಾಯಿಯನ್ನು ಉಳಿಸಿಕೊಳ್ಳಬಹುದು. ಈಗ ಪ್ಲಾಸ್ಟಿಕ್ ಭೂಮಿಗೆ ಮಾರಕವಾಗಿದೆ. ನಮ್ಮ ಹೃದಯದಿಂದ ಪ್ಲಾಸ್ಟಿಕ್ ನಿಷೇಧವನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದರು.