i
ಮತದಾನಕ್ಕೂ ಮುನ್ನ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಅಭ್ಯರ್ಥಿ ಗೋವಿಂದ ಕಾರಜೋಳ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರು ಮತದಾನಕ್ಕೂ ಮುನ್ನ ಶುಕ್ರವಾರ ನಗರದ ಉಚ್ಚಂಗಿಯಲ್ಲಮ್ಮ ದೇವಸ್ಥಾನ, ಧರ್ಮಶಾಲಾ ರಸ್ತೆಯಲ್ಲಿರುವ ಸೀತಾರಾಮ ದೇವಸ್ಥಾನ, ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ಮೂರು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಗೋವಿಂದ ಕಾರಜೋಳ ನರೇಂದ್ರಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಾಗಿರುವುದರಿಂದ ಈ ಚುನಾವಣೆ ಅತ್ಯಂತ ಮಹತ್ವದ್ದು, ಭಾರತವನ್ನು ವಿಶ್ವಗುರುವನ್ನಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತ ಐದನೆ ಸ್ಥಾನದಲ್ಲಿದ್ದು, ಇನ್ನು ಮೂರು ವರ್ಷಗಳಲ್ಲಿ ಮೂರನೆ ಸ್ಥಾನಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ರಾಜ್ಯದ ಜನರ ಮತ ಸೆಳೆಯುವ ಕುತಂತ್ರ ನಡೆಸುತ್ತಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಇನ್ನು ೨೫ ಭಾಗ್ಯಗಳನ್ನು ಕೊಡುವುದಾಗಿ ಮತದಾರರಿಗೆ ಆಸೆ ಹುಟ್ಟಿಸುತ್ತಿದೆ. ಪ್ರತಿ ವರ್ಷ ಒಬ್ಬ ಮಹಿಳೆಗೆ ಒಂದು ಲಕ್ಷ ರೂ.ಗಳನ್ನು ನೀಡುವುದಾಗಿ ಮರಳು ಮಾಡುತ್ತಿರುವ ಕಾಂಗ್ರೆಸ್ ಹಣ ಎಲ್ಲಿಂದ ತರುತ್ತದೆ. ಒಟ್ಟು ಐವತ್ತು ಲಕ್ಷ ಕೋಟಿ ರೂ.ಗಳಾಗುತ್ತದೆ. ನಮ್ಮ ದೇಶದ ಬಜೆಟ್ಟೆ ಅಷ್ಟೊಂದಿಲ್ಲ. ಆದ್ದರಿಂದ ಮತದಾರರು ಯೋಚಿಸಿ ಮತ ನೀಡಿ ಎಂದು ಮನವಿ ಮಾಡಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಟಿ.ಜಿ.ನರೇಂದ್ರನಾಥ್, ವಕ್ತಾರ ನಾಗರಾಜ್ಬೇದ್ರೆ, ಕಾರ್ಯದರ್ಶಿ ಶಂಭು ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.