i
ಫಿಲಿಪ್ಪೀನ್ಸ್ ನಿಂದ ಚಿತ್ರದುರ್ಗಕ್ಕೆ ವೈದ್ಯಕೀಯ ವಿದ್ಯಾರ್ಥಿನಿ ಲಿಖಿತಾ, ಲಂಡನ್ ನಿಂದ ಮಂಡ್ಯಕ್ಕೆ ಬಂದು ಮತದಾನ ಮಾಡಿದ ಸೋನಿಕಾ!ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ನಿರೀಕ್ಷೆಯಂತೆ ಈ ಬಾರಿಯ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮಹಾನಗರದ ಅರ್ಧದಷ್ಟು ನಿವಾಸಿಗಳು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡದೆ ನಿರ್ಲಕ್ಷ್ಯ ಮೆರೆದಿದ್ದಾರೆ.
ಮತದಾನದ ನಂತರ ಬಂದ ವರದಿಯಂತೆ ಬೆಂಗಳೂರು ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಅಂದರೆ ಶೇ. 67.29 ಮತದಾನ ಆಗಿದೆ. ಅತಿ ಕಡಿಮೆ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಶೇ. 52.81ರಷ್ಟು ಮತದಾನ ಆಗಿದೆ. ಬೆಂಗಳೂರು ದಕ್ಷಿಣ 53.15 ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೇ.54.42 ಮತದಾನ ಆಗಿರುವುದು ಶಿಕ್ಷಿತರು ತಮ್ಮ ಸಾಂವಿಧಾನಿಕ ಜವಾಬ್ದಾರಿಯಿಂದ ವಿಮುಖರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಏರ್ಪಡಿಸಿದ್ದ ಸಭೆಗಳಿಗೆ ಎಲ್ಲಾ ರಾಜಕೀಯ ಪಕ್ಷಗಳ ರಾಜ್ಯ, ರಾಷ್ಟ್ರೀಯ ರಾಜಕೀಯ ಮುಖಂಡರು ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮತಯಾಚನೆ ಮಾಡಿದ್ದಾರೆ. ಆದಾಗ್ಯೂ ನಗರ ವಾಸಿಗಳ ಮತದಾನ ಸ್ಪಂದನೆ ತೀರಾ ನೀರಸ, ನಿರಾಶಾದಾಯಕವಾಗಿದೆ. ಶುಕ್ರವಾರ ಮತದಾನ ನಡೆದ 14 ಲೋಕಸಭಾ ಕ್ಷೇತ್ರಗಳಲ್ಲಿ ಪೈಕಿ ಮಂಡ್ಯದಲ್ಲಿ 81.48ರಷ್ಟು ಅತ್ಯಧಿಕ ಮತದಾನ ಆಗಿದೆ. ನಂತರದ ಸ್ಥಾನದಲ್ಲಿ ಕೋಲಾರ ಕ್ಷೇತ್ರದಲ್ಲಿ 78.07, ತುಮಕೂರು 77.70ಯಷ್ಟು ಮತದಾನ ಆಗಿದೆ. ಸುಮಾರು 39 ಡಿಗ್ರಿಯಷ್ಟು ತಾಪಮಾನ ಇದ್ದ ಚಿತ್ರದುರ್ಗ ಜಿಲ್ಲೆಯಲ್ಲಿ 73.11ರಷ್ಟು ಮತದಾನ ಆಗಿದ್ದು, ಗ್ರಾಮೀಣ ಜನರೇ ಚುನಾವಣೆ ಪ್ರಕ್ರಿಯೆಗೆ ಹೆಚ್ಚು ಸ್ಪಂದನೆ ನೀಡಿರುವುದು ಖಾತ್ರಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 77.43 ಹಾಗೂ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ 76.06ರಷ್ಟು ಮತದಾನ ಆಗಿರುವುದು ತೃಪ್ತಿದಾಯಕವಾಗಿದೆ. ಮತದಾನದ ನಂತರ ಶನಿವಾರ ಮತ್ತು ಭಾನುವಾರ ರಜೆ ಇದ್ದುದರಿಂದ ಬಹುತೇಕರು ಮತದಾನದ ದಿನವನ್ನೂ ರಜಾ ದಿನವೆಂದು ಪರಿಗಣಿಸಿದಂತಿದೆ. ಹಾಗಾಗಿ ಗುರುವಾರದಿಂದಲೇ ಬೆಂಗಳೂರಲ್ಲಿ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಆದ ವರದಿಗಳು ಬಂದಿವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಕನಿಷ್ಟ ಮತದಾನದ ದಿನದಂದು ಸರ್ಕಾರ/ ಚುನಾವಣಾ ಆಯೋಗ ಎಲ್ಲಾ ಪ್ರವಾಸಿ ಕೇಂದ್ರ, ರೆಸಾರ್ಟ್, ಗಿರಿಧಾಮ, ಕಡಲ ತೀರಗಳು, ಮನರಂಜನ ಕೇಂದ್ರಗಳು, ಶ್ರದ್ಧಾ ಕೇಂದ್ರಗಳನ್ನು ಮುಚ್ಚಿಸುವ ಕೆಲಸ ಮಾಡುವುದು ಉಚಿತ ಎನಿಸಬಹುದು. ಜೊತೆಗೆ ಚುನಾವಣೆ ಹಬ್ಬದ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಸ್ವಯಂ ಪ್ರೇರಿತರಾಗಿ ಆ ದಿನದ ಮಟ್ಟಿಗೆ ಪ್ರಾರ್ಥನಾ ಮಂದಿರಕ್ಕೆ ವಿಶ್ರಾಂತಿ ನೀಡುವುದು ಔಚಿತ್ಯ ಪೂರ್ಣವಾದೀತು. ಇಲ್ಲದೇ ಹೋದರೆ ಮತದಾನದ ಪ್ರಮಾಣ ಮಹಾನಗರಗಳಲ್ಲಿ ಇನ್ನು ನೂರು ವರ್ಷ ದಾಟಿದರೂ ಇಂದಿನ ದಿನಗಳಿಗಿಂತ ಭಿನ್ನವಾಗಿರಲಾರದು ಎಂಬುದು ನನ್ನ ಅಭಿಪ್ರಾಯ. ಬೆಂಗಳೂರು ನಗರ ಕ್ಷೇತ್ರಗಳಿಗೆ ಹೋಲಿಸಿದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಹೆಚ್ಚಿರುವುದು ಗ್ರಾಮೀಣ ಜನರೇ ಸಂವಿಧಾನ ಮತ್ತು ಚುನಾವಣೆ ಪ್ರಕ್ರಿಯೆಗೆ ಹೆಚ್ಚು ಸ್ಪಂದನೆ ನೀಡುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಆದಾಗ್ಯೂ, ಎಲ್ಲಾ ಸರ್ಕಾರಗಳು ನಾಗರೀಕ ಸೌಕರ್ಯಗಳನ್ನು ಕ್ರಮವಾಗಿ ಒದಗಿಸದೆ ಗ್ರಾಮ ಭಾರತವನ್ನು ನಿರಂತರ ನಿರ್ಲಕ್ಷ್ಯ ಮಾಡಿರುವುದನ್ನು ಕಾಣುತ್ತೇವೆ. ಇಂದಿಗೂ ಎಷ್ಟೋ ಹಳ್ಳಿಗಳಿಗೆ ರಸ್ತೆ, ವಿದ್ಯುತ್, ನೀರಿನ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಅಂತಹ ಹಳ್ಳಿಗಳನ್ನು ಯಾವ ನಿಟ್ಟಿನಲ್ಲೂ ಮಹಾನಗರಗಳಿಗೆ ಹೋಲಿಕೆ ಮಾಡುವಂತಿಲ್ಲ. ವಾಸ್ತವಾಂಶ ಹೀಗಿದ್ದರೂ ಪ್ರಜ್ಞಾವಂತ ನಗರ ವಾಸಿಗಳು ಮತದಾನದ ದಿನ ಮತಗಟ್ಟೆಗಳಿಗೆ ಬಂದು ಮತದಾನ ಮಾಡದಿರುವುದು ವಿಷಾದನೀಯ ಸಂಗತಿ. ಜೊತೆಗೆ, ಈ ಬಾರಿ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಝಳ ಕಳೆದ ಕೆಲವು ವರ್ಷಗಳಿಗಿಂತ ಅಧಿಕವಾಗಿದ್ದು ಮೂರನೇ ಹಂತದ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣೆ ಆಯೋಗ ಮತ್ತಷ್ಟು ಕಸರತ್ತು ಮಾಡಬೇಕಿದೆ. ಇದರ ಜೊತೆಗೆ ಬರದ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಜೀವನ ನಿರ್ವಹಣೆಗೆ ಪರ ಊರುಗಳಿಗೆ ವಲಸೆ ಹೋಗಿದ್ದಾರೆ. ಅವರನ್ನು ಕರೆತಂದು ಮತದಾನ ಮಾಡಿಸುವ ಜವಾಬ್ದಾರಿ ಕೂಡ ಆಯೋಗದ ಮೇಲಿದೆ. ಈ ಮಧ್ಯೆ ಫಿಲಿಪ್ಪೀನ್ಸ್ ನಿಂದ ಚಿತ್ರದುರ್ಗಕ್ಕೆ ಆಗಮಿಸಿ ಮತದಾನ ಮಾಡಿದ ವೈದ್ಯಕೀಯ ವಿದ್ಯಾರ್ಥಿನಿ ಎಂ.ಆರ್. ಲಿಖಿತಾ ಹಾಗೂ ಲಂಡನ್ ನಗರದಿಂದ ಮಂಡ್ಯಕ್ಕೆ ಬಂದು ಮತದಾನ ಮಾಡಿದ ಸೋನಿಕ ನಿಜಕ್ಕೂ ಅಭಿನಂದನಾರ್ಹರು. ಅದು ನಿಜವಾದ ರಾಷ್ಟ್ರಪ್ರೇಮ ಎಂದು ವಿಶ್ರಾಂತ ಹಿರಿಯ ಉಪನ್ಯಾಸಕ, ಸಾಹಿತಿ ಎಂ.ಜಿ. ರಂಗಸ್ವಾಮಿ ಹಿರಿಯೂರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.