i
ಸಜ್ಜನ ಮತ್ತು ದುರ್ಜನರ ನಡುವೆ ಚುನಾವಣೆ ನಡೆದಿದ್ದು ಸಜ್ಜನರನ್ನು ಗೆಲ್ಲಿಸಿ; ಮಾಜಿ ಸಚಿವ ಆಂಜನೇಯ…
ಚಂದ್ರವಳ್ಳಿ ನ್ಯೂಸ್, ಹರಿಹರ :
ಲೋಕಸಭಾ ಚುನಾವಣೆಯು ಸಜ್ಜನ ಮತ್ತು ದುರ್ಜನರ ನಡುವೆ ನಡೆಯುವ ಮಹಾ ಚುನಾವಣೆಯಾಗಿದ್ದು ಸಜ್ಜನರನ್ನು ಗೆಲ್ಲಿಸುವಂತೆ ಮಾಜಿ ಸಚಿವ ಎಚ್.ಆಂಜನೇಯ ಹರಿಹರ ಕ್ಷೇತ್ರದ ಜನತೆಗೆ ಕರೆ ಕೊಟ್ಟರು.
ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಬಾರಿಯ ಲೋಕಸಭಾ ಚುನಾವಣೆಯು ಸಜ್ಜನ ಮತ್ತು ದುರ್ಜನರ ನಡುವೆ ನಡೆಯುವ ಮಹಾ ಸಂಗ್ರಾಮ ವಾಗಿದ್ದು ಸಜ್ಜನರಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಗಳನ್ನು ಜನತೆಗೆ ನೀಡಿದ್ದೆವು.ಅವೆಲ್ಲವನ್ನು ಇಂದು ಪೂರೈಸಿದ್ದೇವೆ ಅದು ಬಡವರು ಮತ್ತು ದೀನ-ದಲಿತರಿಗೆ ಆಸರೆಯಾಗಿದೆ. ಅದರಂತೆ ಲೋಕಸಭಾ ಚುನಾವಣೆಯಲ್ಲಿಯೂ ಕೆಲವು ಗ್ಯಾರಂಟಿಗಳನ್ನು ನೀಡಲು ತಯಾರಿ ನಡೆಸಿದ್ದೇವೆ ಪಕ್ಷಕ್ಕೆ ಬಹುಮತ ದೊರೆತರೆ ಖಂಡಿತವಾಗಿಯೂ ಈಡೇರಿಸುವುದಾಗಿ ತಿಳಿಸಿದರು.
ಧರ್ಮ-ದೇವರುಗಳ ಹೆಸರಿನಲ್ಲಿ ರಾಜಕಾರಣ ಮಾಡಿ ಜನರಲ್ಲಿ ವೈಶಮ್ಯ ತುಂಬುವ ಪಕ್ಷಕ್ಕೇ ಮತ ನೀಡದೆ ಬಡವರ,ದುರ್ಬಲರ, ಅಸಂಘಟಿತರ, ವಿಶೇಷವಾಗಿ ರೈತರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ನೀಡಲು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಯಾವುದೇ ಕೋಮು ಗಲಭೆಗೆ ಎಡೆ ಮಾಡಿಕೊಡದೆ ಬಡವರಿಗಾಗಿ ಇರುವ ಕಾಂಗ್ರೆಸ್ ಪಕ್ಷ ಗೆಲ್ಲಿಸಿರಿ ಎಂದು ಹೇಳಿದರು.
2014 ಕ್ಕಿಂತ ಮೊದಲು ನಮ್ಮ ಆಡಳಿತ ವನ್ನು ಬೆಲೆ ಏರಿಕೆಯ ಸರ್ಕಾರವೆಂದು ಟೀಕಿಸಿದ ನೀವು ಈಗ ಮಾಡಿರುವುದಾದರೂ ಏನು..? ನಿಮ್ಮದೇ ಸರ್ಕಾರದಲ್ಲಿ ಎಲ್ಲಾ ಜೀವನಾವಶ್ಯಕ ವಸ್ತುಗಳು, ಜೀವ ರಕ್ಷಕ ಔಷಧಿಗಳು ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿವೆ ಎಂಬುದನ್ನು ನೀವು ಗಮನಿಸುತ್ತಿಲ್ಲವೇ ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರು.
ದೇಶದ ಕಪ್ಪು ಹಣವನ್ನು ಮರಳಿ ತರುವುದಾಗಿ ಭಾಷಣ ಮಾಡಿದಿರಿ ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದಿರಿ ಆದರೆ ಇದೆಲ್ಲವೂ ಆಗಿದೆಯೇ ಎಂದು ಪ್ರಶ್ನಿಸಿ ಈ ಹಿಂದೆ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲದಲ್ಲಿ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ ಎಂಬುದನ್ನು ನೆನಪಿಸಿಕೊಂಡರು.
ಎಸ್.ಸಿ.ಪಿ/ಟಿ.ಎಸ್.ಪಿ ಕಾಯ್ದೆ ಇದ್ದರೂ ಸಹ ಅನುದಾನವನ್ನು ಸಿದ್ದರಾಮಯ್ಯ ಸರ್ಕಾರ ಇತರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ದಲಿತ ನಾಯಕರು ಆರೋಪಿಸುತ್ತಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು ವರ್ಗಾವಣೆ ಮಾಡಿಕೊಂಡ ಅನುದಾನ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳವರಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ ಇದನ್ನು ತಮ್ಮ ಗಮನಕ್ಕೆ ತರಬಯಸುವುದಾಗಿ ತಿಳಿಸಿದರು.
ಕಳೆದ ಮೂರು ದಿನಗಳಿಂದ ನಾನು ದಾವಣಗೆರೆ ಜಿಲ್ಲೆಯನ್ನು ಸುತ್ತಾಡುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ರವರ ಪರವಾಗಿ ಪ್ರಚಾರಕಾರ್ಯ ಕೈಗೊಂಡಿರುತ್ತೇನೆ.ಈಗಾಗಲೇ ಹರಪನ ಹಳ್ಳಿ, ಜಗಳೂರು,ದಾವಣಗೆರೆ ನಗರ ಹದಡಿ ಗ್ರಾಮಗಳಲ್ಲಿ ಸಂಚರಿಸಿ ಇಂದು ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದೇನೆ ಎಲ್ಲಾ ಕಡೆ ಕಾಂಗ್ರೆಸ್ ಪರವಾದ ಅಲೆ ಇರುತ್ತದೆ ಎಂದರು.
ರೈತರು ಚಳುವಳಿ ಯಲ್ಲಿ ಭಾಗಿಯಾದ ಸಂದರ್ಭದಲ್ಲಿ ಅವರನ್ನು ಮಾತನಾಡಿಸುವ ಸೌಜನ್ಯ ತೋರಿಸಿದ ಪ್ರಧಾನ ಮಂತ್ರಿ ನಮಗೆ ಬೇಕಾ.? ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡ ಕೇಂದ್ರ ಸರ್ಕಾರ ಜನವಿರೋಧಿಯಾಗಿದ್ದು ವಾಮ ಮಾರ್ಗದಿಂದ ಅಧಿಕಾರ ಹಿಡಿಯುವ ಸರ್ಕಾರ ನಮಗೆ ಬೇಕೆ.. ಬೇಡವೇ ಎಂಬುದನ್ನು ನೀವೇ ಯೋಚಿಸಿ ಎಂದು ಹೇಳಿದರು.
ಜಾತ್ಯತೀತವಾಗಿ ಕಾಂಗ್ರೆಸ್ ಪಕ್ಷ ಮಾನ್ಯ ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ, ವೀರೇಂದ್ರ ಪಾಟೀಲ್, ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ ಈಡಿಗ ಸಮುದಾಯದ ಎಸ್ ಬಂಗಾರಪ್ಪ, ದೇವರಾಜ ಅರಸ್ ರಂತಹ ವ್ಯಕ್ತಿಗಳನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದೆ 2008ರಲ್ಲಿ ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗಬೇಕಾಗಿತ್ತು ಕೆಲವು ಕಾರಣಾಂತರದಿಂದ ಅವರು ಆಗಲಿಲ್ಲ ಎಂದು ವಿಷಾದಿಸಿದರು.
ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಬಿಜೆಪಿಯ ಕೆಲ ಮುಖಂಡರು ಪ್ರಶ್ನಿಸುತ್ತಿದ್ದಾರೆ ಆದರೆ ಅವರಿಗೆ ತಾವು ಕಲಿತ ಶಾಲೆಗಳೆಲ್ಲವೂ ಕಾಂಗ್ರೆಸ್ ಪಕ್ಷ ನಿರ್ಮಾಣ ಮಾಡಿದ್ದು, ಅವರು ಚಿಕಿತ್ಸೆ ಪಡೆದ ಆಸ್ಪತ್ರೆಗಳೆಲ್ಲವೂ ಕಾಂಗ್ರೆಸ್ ಪಕ್ಷ ನಿರ್ಮಾಣ ಮಾಡಿದ್ದು, ಪ್ರಬಲವಾದ ಸೈನ್ಯ ಕಟ್ಟಿದ್ದು ಕಾಂಗ್ರೆಸ್ ಪಕ್ಷ ಈ ಹಿಂದೆ ಕೆಲ ಯುದ್ಧಗಳನ್ನು ಗೆದ್ದಿರುವುದು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಎನ್ನುವುದನ್ನು ಅವರು ಅರಿತುಕೊಳ್ಳಬೇಕಾಗಿದೆ.
ಎಚ್.ಆಂಜನೇಯ.ಮಾಜಿ ಸಚಿವ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ಎನ್.ಎಚ್.ಶ್ರೀನಿವಾಸ್ ನಂದಿಗಾವಿ, ನಗರಸಭೆ ಸದಸ್ಯ ಎನ್.ರಜನಿಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತ ಪ್ಪ, ಸುರೇಶ್ ಹಾದಿಮನಿ, ಎಂ.ಬಿ.ಅಣ್ಣಪ್ಪ, ನಾಗರಾಜ್, ಬಿ.ಎನ್. ರಮೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.