i
ಸಿದ್ದಿವಿನಾಯಕ ಸ್ವಾಮಿಯ ರಥೋತ್ಸವ ಸಂಭ್ರಮ…
ಚಂದ್ರವಳ್ಳಿ ನ್ಯೂಸ್, ರಿಪ್ಪನ್ಪೇಟೆ :
ಇತಿಹಾಸ ಪ್ರಸಿದ್ದ ಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು.
೧೨.೩೦ ಕ್ಕೆ ಶ್ರೀಸಿದ್ದಿವಿನಾಯಕ ರಥವೇರುತ್ತಿದ್ದಂತೆ ಸಿದ್ದಿವಿನಾಯಕ ಸ್ವಾಮಿಗೆ, ಜಗನ್ಮಾತೆ ಆನ್ನಪೂರ್ಣೇಶ್ವರಿ ದೇವಿಗೆ, ಜಯಘೋಷಣೆ ಮುಗಿಲು ಮುಟ್ಟಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಮ.ನಿ.ಪ್ರ.ಅಭಿನವ ಚನ್ನಬಸವ ಮಹಾಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ ಈ ವರ್ಷದಲ್ಲಿ ಮಳೆ-ಬೆಳೆ ಸಂವೃದ್ದಿಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ ನೆಮ್ಮದಿಯನ್ನು ಕರುಣಿಸುವಂತಾಗಲೆಂದು ಸರ್ವರ ಪರವಾಗಿ ಸಿದ್ದಿವಿನಾಯಕ ದೇವರಲ್ಲಿ ಪ್ರಾರ್ಥಿಸಿದರು.
ಶಿವಮೊಗ್ಗದ ವಸಂತ ಭಟ್ ಮತ್ತು ಚಂದ್ರಶೇಖರ ಭಟ್ ಹಾಗೂ ಗುರುರಾಜ ಭಟ್ ನೇತೃತ್ವದಲ್ಲಿ ಇಂದು ಮನ್ಮಹಾರಥೋತ್ಸವದ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ದಾಭಕ್ತಿಯಿಂದ ನೆರವೇರಿದವು.
ಶ್ರೀಮನ್ಮಹಾರಥೋತ್ಸವ ಚಾಲನೆ ನೀಡುತ್ತಿದ್ದಂತೆ ಉತ್ಸವವವು ದೇವಸ್ಥಾನದಿಂದ ಹೊರಟು ವಿನಾಯಕ ವೃತ್ತದವರೆಗೆ ಸಹಸ್ರಾರು ಭಕ್ತ ಸಮೂಹದೊಂದಿಗೆ ಚಂಡೆ ವಾದ್ಯ ಮೇಳ ಯುವಕರ ತಂಡದ ಜಯಘೋಷಣೆಯಲ್ಲಿ ಬಿಸಿಲಯನ್ನು ಲೆಕ್ಕಿಸದೇ ಭಕ್ತರ ದಂಡು ರಥವನ್ನು ಎಳೆಯಲು ಮುಂದಾಗಿದ್ದು ವಿಶೇಷವಾಗಿತು. ಎರಡು ಟ್ಯಾಂಕರ್ ಮೂಲಕ ರಸ್ತೆಗೆ ನೀರು ಹರಿಸುವುದರೊಂದಿಗೆ ಉರಿ ಬಿಸಿಲಿನಲ್ಲಿಯೂ ಸಿದ್ದಿವಿನಾಯಕ ಸ್ವಾಮಿಯ ಮನ್ಮಹಾರಥೋತ್ಸವ ಮೆರವಣಿಗೆ ಮೆರುಗು ತಂದಿತು.